ಗೌರಿ ಜೊತೆ 3ನೇ ಮದುವೆ, ಲವ್ ಜಿಹಾದ್ ಆರೋಪ ; ಬಜರಂಗದಳದಿಂದ ಆಮಿರ್ ಖಾನ್ ಪ್ರತಿಕೃತಿ ದಹಿಸಿ ಆಕ್ರೋಶ
ಪ್ರೀತಿ ಅಂದರೆ ಹಾಗೇ. ಅದಕ್ಕೆ ಕಣ್ಣಿಲ್ಲದಿದ್ದರೂ ಕಣ್ಣಿನ ತುಂಬಾ ಆಸೆ ಹುಟ್ಟಿಸುವ ಸಾಮರ್ಥ್ಯ ಇದೆ. ಪ್ರೀತಿ ಎನ್ನುವುದು ಕೇವಲ ಎರಡು ದೇಹಕ್ಕೆ ಸಂಬಂಧಿಸಿದ್ದಲ್ಲ. ಎರಡು ಮನಸ್ಸುಗಳು ಮುಕ್ತವಾಗಿ ಒಂದನ್ನೊಂದು ಅರಿತುಕೊಳ್ಳುವುದು. ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ.
ಇನ್ನು ನಿಜವಾದ ಪ್ರೀತಿಯ.. ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯ ಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಇನ್ನೂ ಎಲ್ಲ ಜಾತಿಯಲ್ಲಿಯೂ ಪ್ರೀತಿ ಇದೆ, ಆದರೆ ಪ್ರೀತಿಗೆ ಜಾತಿ ಧರ್ಮ ಇಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಬೆಳ್ಳಿ ತೆರೆ ಇರಲಿ.. ಕಿರುತೆರೆ ಇರಲಿ.. ಹಲವರು ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂಬ ಸಂದೇಶವನ್ನು ಸಾರಿದ್ದಾರೆ. ಅಂತರ್ ಧರ್ಮಿಯ ಮದುವೆಯಾಗಿದ್ದಾರೆ. ಆದರೆ, ಅಲ್ಲೊಬ್ಬರ.. ಇಲ್ಲೊಬ್ಬರ.. ವಿಚಾರದಲ್ಲಿ ಈ ಧರ್ಮದ ಬೇಲಿ ಪ್ರೀತಿಗೆ ಅಡ್ಡಿಯಾಗುತ್ತೆ. ಜಗತ್ತು ಇವರ ಪ್ರೀತಿಯನ್ನು ಅನುಮಾನದ ದೃಷ್ಟಿಯಿಂದ ನೋಡುತ್ತೆ. ಉದಾಹರಣೆಗೆ ಆಮಿರ್ ಖಾನ್ ಮತ್ತು ಗೌರಿ ಸ್ಪ್ಯಾಟ್ ಅವರ ಲವ್ & ಮ್ಯಾರೇಜ್ ಸ್ಟೋರಿಯನ್ನೇ ತೆಗೆದುಕೊಳ್ಳಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ, ಕೆಲ ದಿನಗಳ ಹಿಂದೆಯಷ್ಟೇ ಆಮಿರ್ ಖಾನ್ ಮೂರನೇ ಮದುವೆಯಾಗಿದ್ದಾರೆ. ಬೆಂಗಳೂರು ಮೂಲದ ಗೌರಿ ಜೊತೆ ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಆದರೆ, ಹಲವರು ಇವರ ಈ ಮದುವೆಗೆ ಲವ್ ಜಿಹಾದ್ ಬಣ್ಣ ಬಳಿಯುತ್ತಿದ್ದಾರೆ. ಆಮಿರ್ ಖಾನ್ ಅವರನ್ನು ಮದುವೆಯಾಗಲು ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆ ಅರಿಯದೇ ಹಲವರು ಈ ಸುದ್ದಿ ನಿಜಾ ಅಂದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಮಾಡುತ್ತಾ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ.
ವಿಪರ್ಯಾಸ ಅಂದರೆ ಈ ಸುದ್ದಿಯನ್ನು ಬಜರಂಗದಳದ ಕಾರ್ಯಕರ್ತರು ಕೂಡ ಈ ಸುದ್ದಿಯನ್ನು ನಿಜ ಎಂದುಕೊಂಡಿದ್ಧಾರೆ. ಆಮಿರ್ ಖಾನ್ ವಿರುದ್ದ ಲವ್ ಜಿಹಾದ್ ಆರೋಪ ಮಾಡಿದ್ದಾರೆ. ಪ್ರತಿಕೃತಿ ದಹಿಸಿ ಪ್ರತಿಭಟನೆಯನ್ನು ಮಾಡಿದ್ದಾರೆ.

''ಸಿಯಾಸತ್.ಕಾಮ್'' ಈ ಕುರಿತು ವರದಿಯನ್ನು ಮಾಡಿದ್ದು, ಆ ಪ್ರಕಾರ ಬಜರಂಗದಳದ ಮುಖಂಡ ಮನೋಜ್ ಸೋನಿ, ಆಮಿರ್ ಖಾನ್ ವಿರುದ್ದ ಕಿಡಿ ಕಾರಿದ್ದಾರೆ. ಆಮಿರ್ ಖಾನ್ ಪದೇ ಪದೇ ಹಿಂದೂ ಮಹಿಳೆಯರನ್ನೇ ಮದುವೆಯಾಗುತ್ತಿದ್ದಾರೆ ಮತ್ತು ಇದು ಹಿಂದೂ ಸಮಾಜಕ್ಕೆ ಮಾಡುತ್ತಿರುವ ಅವಮಾನ ಎಂದು ಗುಡುಗಿರುವ ಮನೋಜ್ ಸೋನಿ, ಹಿಂದೂಗಳನ್ನು ದುರ್ಬಲಗೊಳಿಸಲು ಆಮಿರ್ ಖಾನ್ ದೊಡ್ಡ ಸಂಚು ರೂಪಿಸುತ್ತಿದ್ದಾರೆ ಎಂದು
ಆರೋಪ ಮಾಡಿದ್ಧಾರೆ.
ಮುಂದುವರೆದು ಇಂತಹ ಕೆಲಸಗಳನ್ನು ಮುಂದುವರಿಸಿದರೆ ಆಮಿರ್ ಖಾನ್ ಅವರಿಗೆ ತಕ್ಕ ಬುದ್ಧಿ ಕಲಿಸಲಾಗುತ್ತೆ ಎಂದು ಕೂಡ ಹೇಳಿರುವ ಮನೋಜ್ ಸೋನಿ, ಕೇವಲ ಹಿಂದೂ ಮಹಿಳೆಯರನ್ನೇ ಆಮಿರ್ ಖಾನ್ ಮದುವೆಯಾಗುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಮದುವೆಯಾಗಲು ಹಿಂದೂ ಹೆಣ್ಣು ಮಕ್ಕಳು ಬೇಕು. ಆದರೆ ಅವರಿಗೆ ಹುಟ್ಟುವ ಮಕ್ಕಳಿಗೆ ಮಾತ್ರ ತೈಮೂರ್, ಅಫ್ರೋಜ್, ಸಲ್ಮಾನ್ ಎಂದು ಹೆಸರಿಡುತ್ತಾರೆ. ಇದ್ಯಾವ ನ್ಯಾಯ ಸ್ವಾಮಿ ಎಂದು ಕೂಡ ಪ್ರಶ್ನೆ ಮಾಡಿರುವ ಮನೋಜ್ ಸೋನಿ, ಆಮಿರ್ ಅವರ ಈ ನಡವಳಿಕೆಯಿಂದ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಮತ್ತು ನ್ಯಾಯಾಲಯ ಆಮಿರ್ ಖಾನ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Click it and Unblock the Notifications