ತಮ್ಮ ಸಿತಾರೆ ಜಮೀನ್ ಪರ್ ಚಿತ್ರದ ಪೈರಸಿ ತಡೆಯಲು ಮಾಸ್ಟರ್ ಪ್ಲಾನ್ ಮಾಡಿದ ಆಮಿರ್ ಖಾನ್..!
ಒಂದು ಚಿತ್ರದ ಹಿಂದೆ ಹತ್ತಾರು ಕಥೆಗಳಿರುತ್ತವೆ, ವ್ಯಥೆಗಳಿರುತ್ತವೆ. ಸಿನಿಮಾ ನಿರ್ಮಾಣ ಸಿನಿಮಾವೊಂದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಿದಷ್ಟು ಸುಲಭವಲ್ಲ. ಇಲ್ಲಿ ಎಲ್ಲೆಲ್ಲಿಂದಲೋ ದುಡ್ಡು ಹೊಂಚಿತಂದು ಚಿತ್ರವನ್ನು ಮಾಡುವ ನಿರ್ಮಾಪಕರಿದ್ದಾರೆ. ಜೀವವನ್ನೇ ಬಸಿದು ನಿರ್ದೇಶನ ಮಾಡುವ ನಿರ್ದೇಶಕರಿದ್ದಾರೆ. ತಮ್ಮ ಚಿತ್ರಕ್ಕೆ ತಿಂಗಳಾನುಗಟ್ಟಲೆ ಕುಳಿತು ಸ್ಕ್ರಿಪ್ಟು, ಪ್ಲ್ಯಾನಿಂಗು, ನೂರಾರು ದಿನಗಳ ಚಿತ್ರೀಕರಣವನ್ನು ಮಾಡಿ ಜವಾಬ್ದಾರಿಗಳನ್ನು ಹೆಗಲಿಗೇರಿಸಿಕೊಂಡು ಅನೇಕರು ಇಲ್ಲಿ ದುಡಿಯುತ್ತಾರೆ.
ಆದರೆ ಈಗೀಗ ಯಾವ ಭಯ ಇಲ್ಲದೇ ಈಗಷ್ಟೇ ಬಿಡುಗಡೆಯಾದ ಚಿತ್ರಗಳನ್ನು ಆನ್ಲೈನ್ನಲ್ಲಿ ಲೀಕ್ ಮಾಡುವುದು, ಪೈರಸಿಯನ್ನು ಮಾಡುವ ಲೀಕಾಸುರರ ಹಾವಳಿ ಹೆಚ್ಚಾಗಿದೆ.

ಈ ತರಹದ ವಿದ್ಯಮಾನ ಚಿತ್ರದ ಮಾರುಕಟ್ಟೆಗೆ ಗಳಿಕೆಗೆ ಪೆಟ್ಟು ನೀಡಬಹುದು ಎಂಬ ಅರಿವು ಇದ್ದರೂ ಕೂಡ ಅರಿವು ಇಲ್ಲದಂತೆ ಚಿತ್ರವೊಂದು ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಇಡೀ ಚಿತ್ರವನ್ನು ಟೆಲಿಗ್ರಾಮ್ ಸೇರಿ ಇನ್ನಿತರ ಆಪ್ಗಳಲ್ಲಿ ಅಪ್ಲೋಡ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೂಡ ಕಿಡಿಗೇಡಿಗಳು ಚಿತ್ರವನ್ನು ಸೆರೆ ಹಿಡಿದು ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ. ಹೀಗಾಗಿ ತಮ್ಮ ಸಿತಾರೆ ಜಮೀನ್ ಪರ್ ಚಿತ್ರವನ್ನು ಪೈರಸಿ ಮಾಡದಂತೆ ಆಮಿರ್ ಖಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ಆಮಿರ್ ಖಾನ್ ಸದ್ಯ ಪ್ಲ್ಯಾನ್ವೊಂದನ್ನು ಕೂಡ ಮಾಡಿದ್ದಾರೆ.
ಹೌದು, ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರ ಇದೇ ಜೂನ್ 20ರಂದು ತೆರೆಗೆ ಬರಲಿದೆ. ಲಾಲ್ ಸಿಂಗ್ ಚಡ್ಡಾ ಸೋಲಿನ ನಂತರ ತೆರೆಗೆ ಬರುತ್ತಿರುವ ಆಮಿರ್ ಖಾನ್ ಅಭಿನಯದ ಚಿತ್ರ ಇದು. ಈ ಚಿತ್ರದ ಮೇಲೆ ಆಮಿರ್ ಖಾನ್ಗೆ ಅಪಾರವಾದ ನಿರೀಕ್ಷೆಗಳಿವೆ. ಹೀಗಾಗಿಯೇ ಚಿತ್ರದ ಪ್ರಚಾರವನ್ನು ಅದ್ದೂರಿಯಾಗಿ ಮಾಡುತ್ತಿರುವ ಆಮಿರ್ ಖಾನ್ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಪೈರಸಿಯ ಕುರಿತು ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಆಮಿರ್ ಖಾನ್ ಪೈರಸಿಯನ್ನು ಮಾಡುವುದು ಅಪರಾಧ ಎಂದು ಹೇಳಿದ್ದಾರೆ. ಆನ್ ಲೈನ್ನಲ್ಲಿ ಸೋರಿಕೆಯಾದ ಪೈರಸಿ ಪ್ರಿಂಟ್ನ್ನು ಜನ ನೋಡುತ್ತಿರುವುದು ಕೂಡ ನಿಜವಾಗಿಯೂ ದುಃಖಕರ ಎಂದು ಹೇಳಿದ್ದಾರೆ.
ಮುಂದುವರೆದು ನೀವು ಚಿತ್ರದ ಪೈರಸಿ ವರ್ಷನ್ ನೋಡಿದಾಗ, ನಿಮಗೆ ಅರಿವಾಗದಂತೆಯೇ ನೀವು ತುಂಬಾ ಹಾನಿಯನ್ನುಂಟು ಮಾಡಿರುತ್ತೀರಾ ಎಂದು ಹೇಳಿರುವ ಆಮಿರ್ ಪೈರಸಿಯಿಂದ ಆಗುವ ಪರಿಣಾಮವನ್ನು ಜನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಸಿತಾರೆ ಜಮೀನ್ ಪರ್ ಚಿತ್ರಕ್ಕೆ ಕಳೆದ ಮೂರು ವರ್ಷಗಳಿಂದ ನಾವೆಲ್ಲ ಹಗಲಿರುಳು ಬೆವರು ಸುರಿಸಿದ್ದೀವಿ ಎಂದು ಹೇಳಿರುವ ಆಮಿರ್ ಖಾನ್, ಕೇವಲ ಶ್ರಮ ಮಾತ್ರವಲ್ಲ ಚಿತ್ರದೊಂದಿಗೆ ನಾವು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಅಭಿನಯಿಸಿರುವ ಹತ್ತು ಮಕ್ಕಳು, ಜೆನೆಲಿಯಾ, ನಿರ್ದೇಶಕ ಪ್ರಸನ್ನ, ಬರಹಗಾರರು, ನನ್ನನ್ನೂ ಒಳಗೊಂಡಂತೆ ಪ್ರತಿಯೊಬ್ಬ ವಿಭಾಗದವರು ಕೂಡ ಈ ಚಿತ್ರಕ್ಕೆ ತುಂಬಾ ಕಷ್ಟ ಪಟ್ಟಿದ್ದೇವೆ ಎಂದು ಹೇಳಿರುವ ಆಮಿರ್ ಖಾನ್ ಜನ ನಮ್ಮ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎನ್ನುವುದು ನಮ್ಮ ಆಶಯ, ಪೈರಸಿ ಮೂಲಕ ಅಲ್ಲ ಎಂದು ಹೇಳಿದ್ದಾರೆ.
ನಮ್ಮ ಸಿತಾರೆ ಜಮೀನ್ ಪರ್ ಚಿತ್ರ ಪೈರಸಿ ಆಗದಂತೆ ತಡೆಯಲು ನಮ್ಮಿಂದ ಸಾಧ್ಯವಾಗುವ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿರುವ ಆಮಿರ್ ಖಾನ್, ಪೈರಸಿಯನ್ನು ತಡೆಯಲು, ಪೈರಸಿಗೆ ಕಡಿವಾಣ ಹಾಕಲು ಏಜೆನ್ಸಿಗಳನ್ನು ನಾವು ನೇಮಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಸಿತಾರೆ ಜಮೀನ್ ಪರ್ ಈ ಜೂನ್ 20ರಂದು ತೆರೆಗೆ ಬರಲಿದೆ. ಲಾಲ್ ಸಿಂಗ್ ಚಡ್ಡಾ ಸೋಲಿನ ನೋವನ್ನು ಸಿತಾರೆ ಜಮೀನ್ ಪರ್ ದೂರ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಮೊದಲ ದಿನ ಚಿತ್ರದ ಗಳಿಕೆಯ ಕುರಿತು ಕುತೂಹಲ ಈಗ ಅನೇಕರಲ್ಲಿ ಮನೆ ಮಾಡಿದೆ.


Click it and Unblock the Notifications











