Aamir Khan: ಮಕ್ಕಳಿಗಾಗಿ ಚಿತ್ರರಂಗ ತೊರೆಯಲು ಆಮಿರ್ ಖಾನ್ ಸಜ್ಜು, ಆಗಿದ್ದೇನು?
ನಟ ಆಮಿರ್ ಖಾನ್ ಬಾಲಿವುಡ್ನ ಭರವಸೆಯ ನಟರ ಪೈಕಿ ಒಬ್ಬರು. ಆಮಿರ್ ಖಾನ್ ತಮ್ಮ ನಟನ ಶೈಲಿಯಿಂದ ಜನ ಮನ ಗೆದ್ದವರು. ಭಿನ್ನ, ವಿಭಿನ್ನ ಪಾತ್ರಗಳನ್ನು ಮಾಡಿ ನಟ ಆಮಿರ್ ಖಾನ್ ತಮ್ಮ ಹಲವು ಸಿನಿಮಾ ಪಾತ್ರಗಳ ಮೂಲಕವೇ ಚಿರಪರಿಚಿತ. ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿ ಇರುವ ಬಾಲಿವುಡ್ನ ಈ ಮಿಸ್ಟರ್ ಪರ್ಫೆಕ್ಟ್ ಬಗ್ಗೆ ಈಗ ಹೊಸದೊಂದು ಸುದ್ದಿ ಹಬ್ಬಿದೆ.
ನಟ ಆಮಿರ್ ಖಾನ್ ತಮ್ಮ ಜೀವನದಲ್ಲಿ ದಿಟ್ಟ ನಿರ್ಧಾರ ಒಂದನ್ನು ಕೈಗೊಂಡಿದ್ದರು. ಇಷ್ಟು ದಿನದ ಜರ್ನಿಗೆ ಬ್ರೇಕ್ ಹಾಕಬೇಕು ಎನ್ನುವ ನಿರ್ಧಾರ ಮಾಡಿ ಬಿಟ್ಟಿದ್ದರಂತೆ. ತಮ್ಮ ಜೀವನದ ಪಯಣವನ್ನು ಹೊಸ ದಾರಿಯ ಮೂಲಕ ಮುಂದುವರೆಸಲು ಆಮಿರ್ ಖಾನ್ ಸಜ್ಜಾಗಿದ್ದರು. ಈ ಬಗ್ಗೆ ಅವರು ಇತ್ತೀಚೆಗಿನ ನಡೆದ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಆಮಿರ್ ಖಾನ್ ಇಷ್ಟು ವರ್ಷದ ಬಳಿಕ ಈಗ ಸಿನಿಮಾರಂಗವನ್ನು ತೊರೆಯಲು ಸಿದ್ಧರಾಗಿದ್ದರು, ಆದರೆ ಅವರ ನಿರ್ಧಾರವನ್ನು ಬದಲು ಮಾಡಿಕೊಳ್ಳಲು ಮಾಜಿ ಪತ್ನಿ ಕಿರಣ್ ರಾವ್ ಕಾರಣ. ಇದನ್ನು ಸ್ವತಃ ಆಮಿರ್ ಖಾನ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಮಿರ್ ಖಾನ್ ಈ ನಿರ್ಧಾರಕ್ಕೆ ಕಾರಣ ಏನು ಎನ್ನುವ ಬಗ್ಗೆ ಮುಂದೆ ಓದಿ....

'ಲಾಲ್ ಸಿಂಗ್ ಚೆಡ್ಡಾ' ಆಮಿರ್ ಕೊನೆಯ ಚಿತ್ರ ಆಗ್ಬೇಕಿತ್ತು!
ನೂರಾರು ಚಿತ್ರಗಳ ಮಾಡಿರುವ ಆಮಿರ್ ಖಾನ್ ಇನ್ನೂ ಕೂಡ ಚಿತ್ರರಂಗದಲ್ಲಿ ಬೇಡಿಕೆಯ ನಟ. ಆಮಿರ್ ಖಾನ್ಗೆ ಇರುವ ಫ್ಯಾನ್ ಬೇಸ್ ಕೂಡ ಕಮ್ಮಿ ಏನಿಲ್ಲ. ಆದರು ಕೂಡ ಆಮಿರ್ ಖಾನ್ ಚಿತ್ರರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದರು. ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಚಿತ್ರವೇ ಅವರ ಕೊನೆಯ ಸಿನಿಮಾ ಆಗಬೇಕಿತ್ತು. ಈ ಚಿತ್ರದ ಬಳಿಕ ಮತ್ಯಾವ ಸಿನಿಮಾದಲ್ಲಿ ನಟನೆ ಮಾಡುವುದು ಅಥವಾ ಸಿನಿಮಾ ನಿರ್ಮಾಣ ಮಾಡುವುದನ್ನು ನಿಲ್ಲಿಸಲು ಆಮಿರ್ ಖಾನ್ ಸಜ್ಜಾಗಿದ್ದರು. ಈ ಬಗ್ಗೆ ಮುಂಬೈನಲ್ಲಿ ನಡೆದ ಎಬಿಪಿ ಐಡಿಯಾಸ್ ಇಂಡಿಯಾ ಕಾರ್ಯಕ್ರಮದಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಪ್ರಚಾರದ ಗಿಮಿಕ್ ಎನ್ನಬಾರದು ಎಂದ ಆಮಿರ್!
ಕಾರ್ಯಕ್ರಮದಲ್ಲಿ ಮಾತನಾಡಿದ ಆಮಿರ್ ಖಾನ್ " ನಾನು ಚಿತ್ರರಂಗದಿಂದ ನಿವೃತ್ತಿ ಹೊಂದುವೆ. ಇದು ಯಾರಿಗೂ ತಿಳಿದಿಲ್ಲ. ನಾನು ಮೊದಲ ಬಾರಿಗೆ ಹೇಳುತ್ತಿದ್ದೇನೆ, ನಿಮಗೆ ಆಘಾತ ಆಗ ಬಹುದು. ಇನ್ನು ಮುಂದೆ ನಾನು ಯಾವುದೇ ಸಿನಿಮಾ ಮಾಡುವುದಿಲ್ಲ. ಯಾವುದೇ ಚಿತ್ರಗಳನ್ನು ನಿರ್ಮಿಸುವುದಿಲ್ಲ ಎಂದು ನನ್ನ ಮನೆಯವರಿಗೆ ತಿಳಿಸಿದ್ದೆ. ಈಗ ಈ ವಿಚಾರವನ್ನು ಹೇಳದೇ ಇರುವುದು ಉತ್ತಮ ಎಂದು ನಾನು ಭಾವಿಸಿದ್ದೆ. 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಯಾದ ನಂತರ ಮುಂದಿನ ಮೂರು ನಾಲ್ಕು ವರ್ಷಗಳ ಕಾಲ ನಾನು ಏನು ಮಾಡುತ್ತಿದ್ದೇನೆ ಎಂದು ಯಾರು ತಲೆಕೆಡಿಸಿಕೊಳ್ಳುತ್ತಾ ಇರಲಿಲ್ಲ. ಆಗ ನಾನು ಇಂಡಸ್ಟ್ರಿ ತೊರೆಯ ಬೇಕು, ಅದು ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡಿದ್ದೆ. ಈಗ ಹೇಳಿದರೆ ಇದು ಚಿತ್ರದ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಂದು ಕೊಳ್ಳುವ ಸಾಧ್ಯತೆ ಇರುತ್ತದೆ." ಎಂದಿದ್ದಾರೆ.

ಆಮಿರ್ ನಿರ್ಧಾರ ಬದಲಿಸಿದ ಕಿರಣ್ ರಾವ್ ಕಣ್ಣೀರು!
ನಟ ಆಮಿರ್ ಖಾನ್ ತಾನು ಸಿನಿಮಾರಂಗ ಬಿಡುವ ನಿರ್ಧಾರ ಮಾಡಿದ ಬಳಿಕ ಅದನ್ನು ತಮ್ಮ ಕುಟುಂಬದ ಸದಸ್ಯರ ಬಳಿ ಹೇಳಿಕೊಂಡಿದ್ದಾರೆ. ಆಗ ಅದನ್ನು ನಿರಾಕರಿಸಿದ ಮಾಜಿ ಪತ್ನಿ ಕಿರಣ್ ರಾವ್ ಈ ನಿರ್ಧಾರವನ್ನು ಬದಲಿಸುವಂತೆ ಹೇಳಿದರಂತೆ. ಕಣ್ಣಲ್ಲಿ ನೀರು ತುಂಬಿಕೊಂಡು ಭಾವುಕರಾಗಿ ಕಿರಣ್, ಆಮಿರ್ಗೆ ಸಿನಿಮಾ ಬಿಡುವ ನಿರ್ಧಾರವನ್ನು ಬಿಟ್ಟು ಸಿನಿಮಾ ಮಾಡಲು ಹೇಳಿದರು ಎಂದು ಆಮಿರ್ ಹೇಳಿಕೊಂಡಿದ್ದಾರೆ.

ಮಕ್ಕಳಿಗಾಗಿ ಚಿತ್ರರಂಗ ಬಿಡಲು ಆಮಿರ್ ನಿರ್ಧಾರ!
ಇನ್ನು ಆಮಿರ್ ಖಾನ್ ಚಿತ್ರರಂಗ ತೊರೆಯ ಬೇಕು ಎಂದು ನಿರ್ಧರಿಸಲು ಅವರ ಮಕ್ಕಳು ಮತ್ತು ಪೋಷಕರು ಕಾರಣ. ಈ ಬಗ್ಗೆ ಆಮಿರ್ ಖಾನ್ ಹೇಳಿದ್ದು ಹೀಗೆ "ನನ್ನ ಕನಸುಗಳ ಹಿಂದೆ ಬಿದ್ದು, ಅವುಗಳನ್ನು ಈಡೇರಿಸಲು ನಾನು ನನ್ನ ಜೀವನದ ಇಷ್ಟು ದಿನಗಳನ್ನು ಕಳೆದಿದ್ದೇನೆ ಎಂದು ನನಗೆ ಅನಿಸುತ್ತದೆ. ಆದರೆ ಈ ಪ್ರಯಾಣದ ಸಮಯದಲ್ಲಿ, ನಾನು ನನ್ನ ಪ್ರೀತಿ ಪಾತ್ರರ ಬಗ್ಗೆ ಗಮನ ಹರಿಸಲಿಲ್ಲ. ನನ್ನ ಹೆತ್ತವರು, ನನ್ನ ಒಡಹುಟ್ಟಿದವರು, ನನ್ನ ಮಕ್ಕಳು, ನನ್ನ ಮೊದಲ ಹೆಂಡತಿ ರೀನಾ, ನನ್ನ ಎರಡನೇ ಹೆಂಡತಿ ಕಿರಣ್, ಅವರ ಪೋಷಕರು. ಬಹುಶಃ ನಾನು ಅವರಿಗೆ ಸಾಕಷ್ಟು ಸಮಯವನ್ನು ವಿನಿಯೋಗಿಸಲು ಸಾಧ್ಯವಾಗಲಿಲ್ಲ. ನನ್ನ ಮಗಳಿಗೆ ಈಗ 23 ವರ್ಷ. ಅವಳ ಕನಸುಗಳು, ಆತಂಕ ಮತ್ತು ಭರವಸೆಗಳು ನನಗೆ ತಿಳಿದಿರಲಿಲ್ಲ, ಆದರೆ ನನ್ನ ನಿರ್ದೇಶಕರ ಭಯ, ಕನಸುಗಳು ಮತ್ತು ಭರವಸೆಗಳು ನನಗೆ ತಿಳಿದಿದ್ದವು." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications










