ಆ ವ್ಯಕ್ತಿ ಪ್ಯಾಂಟ್ ಬಿಚ್ಚಿ ; ಬಾಲ್ಯದ ಆಘಾತಕಾರಿ ಘಟನೆ ನೆನೆದು ಭಾವುಕಗೊಂಡ ಖ್ಯಾತ ನಟಿ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ.
ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ಸಾಧ್ಯವಾಗದೇ ಸುಮ್ಮನಾಗುತ್ತಾರೆ. ಮತ್ತೂ ಕೆಲವೊಮ್ಮೆ ನಮ್ಮ ಸಮಾಜದ 'ಮರೆತುಬಿಡು' ಎಂಬ ಮಾತು ಹಲವರ ಕೈ ಮತ್ತು ಬಾಯಿ ಕಟ್ಟಿ ಹಾಕುತ್ತೆ.

ಕೇವಲ ಸಾಮಾನ್ಯ ಜನ ಮಾತ್ರವಲ್ಲ. ಈ ಕಾ*ಮುಕರ ಕೈಗೆ ಸಿಕ್ಕಿ ಚಿತ್ರರಂಗದಲ್ಲಿರುವ ಹಲವಾರು ನಾಯಕಿಯರು, ಮಹಿಳೆಯರು ಕೂಡ ನರಳಿದ್ದಾರೆ. ಉದಾಹರಣೆಗೆ ಆಮ್ನಾ ಶರೀಫ್.
ಹೌದು. ಆಮ್ನಾ ಶರೀಫ್..ಬಾಲ್ಯದಲ್ಲಿಯೇ ಕಡುಕಷ್ಟ ಅನುಭವಿಸಿದ ಮುಂಬೈನ ಚೆಲುವೆ. ಕೇವಲ 10ರ ಹರೆಯಲ್ಲಿ ತಂದೆಯನ್ನು ಕಳೆದುಕೊಂಡ ಆಮ್ನಾ ಆ ನಂತರ ಸುಮಾರು 30 ವರ್ಷಗಳ ಕಾಲ ಪಾರ್ಶ್ವವಾಯುದಿಂದ ಹಾಸಿಗೆ ಹಿಡಿದಿದ್ದ ತಾಯಿಯ ಸೇವೆ ಮಾಡಿದರು. ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ಧಾರಿಯನ್ನು ವಹಿಸಿಕೊಂಡರು.
ಕಾಲೇಜ್ ದಿನಗಳಲ್ಲಿಯೇ ಮಾಡೆಲಿಂಗ್ ಕ್ಷೇತ್ರದಲ್ಲಿ ಕ್ಯಾಟ್ ವಾಕ್ ಮಾಡುತ್ತಿದ್ದ ಆಮ್ನಾ ಆ ನಂತರ ''ಕ್ಲೋಸ್-ಅಪ್ ಟೂತ್ಪೇಸ್ಟ್''.. ''ಎಮಾಮಿ ಕ್ರೀಮ್'' ಸೇರಿದಂತೆ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಇದಲ್ಲದೇ ಕುಮಾರ್ ಸಾನು ಅವರ ''ದಿಲ್ ಕಾ ಆಲಂ'' ಮತ್ತು ಫಲ್ಗುಣಿ ಪಾಠಕ್ ಅವರ ''ಯೇ ಕಿಸ್ನೆ ಜಾದು ಕಿಯಾ'' ಅಂತಹ ಚಾರ್ಟ್ ಬಸ್ಟರ್ ಮ್ಯೂಸಿಕ್ ಆಲ್ಬಂಗಳಲ್ಲಿ ಹೆಜ್ಜೆ ಹಾಕಿದರು. ಇಲ್ಲಿ ಇವರ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳಿತ್ತು. ಕಿರುತೆರೆಯ ಬಾಗಿಲು ತೆರೆದಿತ್ತು.
2003ರಲ್ಲಿ ಏಕ್ತಾ ಕಪೂರ್ ನಿರ್ಮಾಣದ ''ಕಹೀಂ ತೋ ಹೋಗಾ'' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಆಮ್ನಾಗೆ ಈ ಧಾರಾವಾಹಿ ಹೆಸರು, ಹಣ ಎರಡನ್ನು ತಂದು ಕೊಡ್ತು. ಇವತ್ತು ಕೂಡ ಹಲವರು ಇವರನ್ನು ಈ ಧಾರಾವಾಹಿಯ ಕಶೀಶ್ ಪಾತ್ರದಿಂದಲೇ ಗುರುತಿಸುತ್ತಾರೆ. ''ಹೊಂಗೆ ಜುದಾ ನಾ ಹಮ್''.. ''ಕಸೌತಿ ಜಿಂದಗಿ ಕೇ 2'' ಇವರ ಇನ್ನೆರಡು ಪ್ರಮುಖ ಧಾರಾವಾಹಿಗಳು.

ಇನ್ನು ಕಿರುತೆರೆ ಪ್ರವೇಶ ಮಾಡುವ ಮೊದಲೇ ಅಂದರೆ 2002ರಲ್ಲೇ ''ಜಂಕ್ಷನ್'' ಎಂಬ ತಮಿಳಿನ ಚಿತ್ರದ ಮೂಲಕ ಆಮ್ನಾ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದರು. ಆದರೆ, ಹಿಂದಿಯಲ್ಲಿ ಇವರ ಭಾಗ್ಯದ ಬಾಗಿಲು ತೆರೆದಿದ್ದು 2009ರಲ್ಲಿ.
''ಆಲೂ ಚಾಟ್'' ಚಿತ್ರದಲ್ಲಿ ಸುದೀಪ್ ಅವರ ಅತ್ಯಾಪ್ತ ಗೆಳೆಯ ಅಫ್ತಾಬ್ ಶಿವದಾಸನಿಗೆ ನಾಯಕಿಯಾಗುವ ಮೂಲಕ ಬಾಲಿವುಡ್ ಪ್ರವೇಶ ಮಾಡಿದ ಆಮ್ನಾ ಆ ನಂತರ ''ಆವೋ ವಿಶ್ ಕರೇ''.. '' ಶಕಲ್ ಪೇ ಮತ್ ಜಾ'' ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವಕಾಶಗಳು ಅರಸಿಕೊಂಡು ಬರುತ್ತಿರುವಾಗಲೇ 2013ರಲ್ಲಿ ನಿರ್ಮಾಪಕ ಅಮಿತ್ ಕಪೂರ್ ಜೊತೆ ಮದುವೆಯಾದರು. ಇವರಿಗೆ ಅರೈನ್ ಎಂಬ ಮುದ್ದಾದ ಮಗ ಇದ್ದಾನೆ. ಸದ್ಯ ಆಮ್ನಾ ಶರೀಫ್ ಸುಖಿ ಸಂಸಾರಿ.
ಇಂಥಾ ಆಮ್ನಾ ಸದ್ಯ ತಮ್ಮ ಬಾಲ್ಯದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ವಿಕೃತ ಮನಸ್ಥಿತಿಗಳಿಂದ ತಾವು ಹೇಗೆಲ್ಲಾ ನರಳಬೇಕಾಯ್ತು ಎಂದು ಹೇಳಿ ಬಿಕ್ಕಿದ್ದಾರೆ. ಈ ಕುರಿತು ''ಹಾಟರ್ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಮ್ನಾ ಶರೀಫ್, ನನಗೆ ಆಗ ಇನ್ನು ಚಿಕ್ಕ ವಯಸ್ಸು, ಶಾಲೆಯಲ್ಲಿ ಓದುತ್ತಿದ್ದೆ, ಆ ಸಮಯದಲ್ಲಿ ನಾನು ಗಣಿತದ ಟ್ಯೂಶನ್ಗೆ ಹೋಗುತ್ತಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಹೀಗೆ ಒಂದು ದಿನ ನಾನು ಮತ್ತು ನನ್ನ ಸ್ನೇಹಿತೆಯರು, ಗಣಿತದ ಕ್ಲಾಸ್ ಮುಗಿಸಿಕೊಂಡು ಎಂದಿನಂತೆ ಮನೆಗೆ ಮರಳುತ್ತಿದ್ದೆವು, ಆ ಸಮಯದಲ್ಲಿ ವ್ಯಕ್ತಿಯೊಬ್ಬ ನಮ್ಮೆದುರು ಬಂದು ತನ್ನ ಪ್ಯಾಂಟ್ ಬಿಚ್ಚಿದ ಎಂದು ಹೇಳಿರುವ ಆಮ್ನಾ ಆ ವ್ಯಕ್ತಿಯ ಈ ವರ್ತನೆಯಿಂದ ನಾವು ಬೆಚ್ಚಿ ಬಿದ್ದಿದ್ದೆವು ಎಂದು ಹೇಳಿದ್ದಾರೆ. ಭಯದಿಂದ ಇಡೀ ದೇಹ ನಡುಗುತ್ತಿದ್ದರೂ, ಪ್ರಾಣಭಯದಿಂದ ತಕ್ಷಣವೇ ತಿರುಗಿ ಓಡಿಹೋಗಿ ಟ್ಯೂಷನ್ ಕ್ಲಾಸ್ ಟೀಚರ್ ಬಳಿ ನಾವು ಆಶ್ರಯ ಪಡೆದಿದ್ದೆವು ಎಂದು ಆ ಕರಾಳ ದಿನ ನೆನಪು ಮಾಡಿಕೊಂಡಿದ್ದಾರೆ.
ಮುಂದುವರೆದು ಇದೊಂದೇ ಬಾರಿ ಅಲ್ಲ, ಬಾಲ್ಯದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದು ಹೇಳಿರುವ ಆಮ್ನಾ ಬಸ್ ಮತ್ತು ರೈಲುಗಳಲ್ಲಿ ಅಂತೂ ದಿನನಿತ್ಯ ನರಕ ದರ್ಶನವಾಗುತ್ತಿತ್ತು ಎಂದಿದ್ದಾರೆ. ಕಿಕ್ಕಿರಿದು ತುಂಬಿರುತ್ತಿದ್ದ ಬಸ್ ಮತ್ತು ಲೋಕಲ್ ಟ್ರೈನ್ಗಳಲ್ಲಿ ಪ್ರಯಾಣಿಸುವಾಗ ಪುರುಷರು ಅಸಭ್ಯವಾಗಿ ಮುಟ್ಟುವುದು, ವಿಕೃತವಾಗಿ ವರ್ತಿಸುವುದು, ದಿನನಿತ್ಯ ನಡೆಯುತ್ತಿತ್ತು ಎಂದು ಹೇಳಿರುವ ಆಮ್ನಾ ಆಗ ನಾನು ತುಂಬಾ ಚಿಕ್ಕವಳಾಗಿದ್ದರಿಂದ ಆ ವಿಕೃತ ಬುದ್ಧಿಯ ಹಿಂದಿನ ಕ್ರೌರ್ಯ ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ, ಆದರೆ ಆ ಭಯ ಮತ್ತು ಆತಂಕ ಮಾತ್ರ ನನ್ನನ್ನು ಎಂದಿಗೂ ಬಿಡಲಿಲ್ಲ, ಇವತ್ತು ಕೂಡ ನನಗೆ ಭಯ ಆಗುತ್ತೆ ಎಂದು ಹೇಳಿದ್ಧಾರೆ. ತಮ್ಮ ನೋವನ್ನು ಹಂಚಿಕೊಂಡಿದ್ಧಾರೆ. ಸದ್ಯ ಆಮ್ನಾ ಅವರ ಈ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications