ಐಶ್ವರ್ಯ ರೈ ಜೊತೆ ಹೇಗಿದೆ ಸಂಬಂಧ ? ವಿಚ್ಛೇದನದ ಕುರಿತು ಮೌನ ಮುರಿದ ಅಭಿಷೇಕ್ ಬಚ್ಚನ್ !
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್ನಲ್ಲಿ ತಲುಪಿ ಬಿಡುತ್ತಾವೆ. ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ಗೆ..
ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ, ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುತ್ತೆ. ಇದಕ್ಕೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಸಾಂಸಾರಿಕ ಜೀವನ ಮತ್ತೊಂದು ಉದಾಹರಣೆ.

ಹೌದು, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇನ್ನೇನೂ .. ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ. ಹಲವು ವರ್ಷಗಳಿಂದ ಈ ಮಾತು ಕೇಳಿ ಬರುತ್ತಲೇ ಇದೆ.
ಆದರೂ ಕೂಡ ಈ ಅಂತೆ-ಕಂತೆಗಳ ಬಗ್ಗೆ ಐಶ್ಚರ್ಯ ರೈ ಮಾತನಾಡಿಲ್ಲ. ಅಭಿಷೇಕ್ ಬಚ್ಚನ್ ಕೂಡ ಮಾತನಾಡುವ ಗೋಜಿಗೆ ಹೋಗಿಲ್ಲ. ಬದಲಿಗೆ ತಮ್ಮ ತಮ್ಮ ಕೆಲಸಗಳಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಇಬ್ಬರ ಈ ಮೌನದ ಕುರಿತು ಕೂಡ ಹಲವರು ಹಲವು ಸಲ ಪ್ರಶ್ನೆ ಮಾಡಿದ್ದು ಇದೆ. ಮೌನಂ ಸಮ್ಮತಿ ಲಕ್ಷಣಂ ಎಂದುಕೊಂಡಿದ್ದು ಇದೆ.
ಹೀಗಿರುವಾಗ ಇದೀಗ ಅಭಿಷೇಕ್ ಬಚ್ಚನ್ ತಮ್ಮ ಕುರಿತು ಹಬ್ಬಿರುವ ವಿಚ್ಛೇದನದ ವಿಚಾರದ ಕುರಿತು ಮಾತನಾಡಿದ್ದಾರೆ. ಸತ್ಯ ಈಗ ಯಾರಿಗೂ ಬೇಕಿಲ್ಲ ಎಂದು ಹೇಳಿದ್ದಾರೆ.
'ETimes'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅಭಿಷೇಕ್ ಬಚ್ಚನ್, ನನ್ನ ಬಗ್ಗೆ ಏನೇ ಮಾತನಾಡಿದರು ನನಗೆ ಬೇಸರ ಇಲ್ಲ ನಾನು ಆ ಕುರಿತು ತಲೆಯನ್ನು ಕೂಡ ಕೆಡಿಸಿಕೊಳ್ಳುವುದಿಲ್ಲ ಆದರೆ ಈಗ ನನ್ನದೊಂದು ಕುಟುಂಬ ಇದೆ ಅವರ ಬಗ್ಗೆ ಮಾತನಾಡಿದಾಗ ಬೇಸರವಾಗುತ್ತೆ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಈಗ ಏನೇ ಮಾತನಾಡಿದರೂ.. ಸ್ಪಷ್ಟೀಕರಣವನ್ನು ನೀಡಿದರೂ ಕೂಡ ಅದರಿಂದ ಯಾವ ಪ್ರಯೋಜನ ಇಲ್ಲ ಎಂದು ಹೇಳಿರುವ ಅಭಿಷೇಕ್ ಬಚ್ಚನ್, ಸತ್ಯವನ್ನು ಮರೆ ಮಾಚಲಾಗುತ್ತದೆ ಯಾಕೆಂದರೆ ಇಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಬಿಕರಿಯಾಗುತ್ತವೆ ಎಂದು ಹೇಳಿದ್ದಾರೆ. ಸಕಾರಾತ್ಮಕವಾದ ಆಲೋಚನೆ-ಸುದ್ದಿಗಳಿಗಿಂತ ಜನರಿಗೆ ನಕಾರಾತ್ಮಕವಾದ ವಿಚಾರಗಳೇ ಹೆಚ್ಚು ಇಷ್ಟ ಎಂದು ಕೂಡ ಹೇಳಿದ್ದಾರೆ.
ನಿಮ್ಮಿಂದ ನನ್ನ ಜೀವನ ನಡೆಯುತ್ತಿಲ್ಲ, ನಾನು ನನ್ನವರಿಗೆ ಮಾತ್ರ ಜವಾಬ್ದಾರ ನೀವು ಅಲ್ಲ ಎಂದು ಹೇಳಿರುವ ಅಭಿಷೇಕ್ ಬಚ್ಚನ್ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರು ಅವರ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆ ದೇವರಿಗೆ ಅವರೇ ಉತ್ತರವನ್ನು ಕೊಡಬೇಕು ಎಂದು ಹೇಳಿದ್ದಾರೆ.
ನಕಾರಾತ್ಮಕವಾದ ವಿಚಾರಗಳು, ಸುಳ್ಳು ಸುದ್ದಿಗಳು, ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿರುವ ಅಭಿಷೇಕ್ ಬಚ್ಚನ್, ನನಗೆ ಇಲ್ಲಿ ಏನೇನು ಆಗುತ್ತಿದೆ ಎಂದು ನನಗೆ ಅರ್ಥವಾಗಿದೆ ಆದರೆ ಇಲ್ಲಿ ನನ್ನ ಕುಟುಂಬ ಕೂಡ ಇದೆ, ಇದು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಟ್ರೋಲ್ಗಳ ಬಗ್ಗೆಯೂ ಕೂಡ ಮಾತನಾಡಿರುವ ಅಭಿಷೇಕ್ ಬಚ್ಚನ್,ಎಲ್ಲೋ ಕುಳಿತುಕೊಂಡು ಬೇರೆಯವರ ಕುರಿತು ಕೀಳಾಗಿ ಮಾತನಾಡುವುದು, ಕಾಮೆಂಟ್ ಮಾಡುವುದು ಸುಲಭ ಆದರೆ ಅದರಿಂದ ಬೇರೆಯವರಿಗೆ ನೋವಾಗುತ್ತೆ ಎನ್ನುವ ಅರಿವು ಅವರಿಗೆ ಇರಬೇಕು ಎಂದು ಹೇಳಿದ್ದಾರೆ.
ಒಟ್ನಲ್ಲಿ ಸದ್ಯ ವಿಚ್ಛೇದನದ ವದಂತಿಗಳಿಗೆ ತಾವ್ಯಾಕೇ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೆ ನೀಡಿಲ್ಲ ಎಂದು ಹೇಳಿದ್ದಾರೆ. ನೀಡಿದರೂ ಕೂಡ ಅದು ವ್ಯರ್ಥ ಎಂದು ಹೇಳಿದ್ದಾರೆ. ಇನ್ನಾದರೂ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಛೇದನದ ಕುರಿತು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











