ಮುಂದುವರೆದ 'ಸಿನಿಮಾ ರಾಜಕೀಯ'? ಬರ್ತಿದೆ ಸಾವರ್ಕರ್ ಸಿನಿಮಾ!
ಹಿಂದೆಲ್ಲ ಸಿನಿಮಾಗಳನ್ನು ಸ್ವಾತಂತ್ರ್ಯ ಹೋರಾಟದ ಭಾಗವಾಗಿ, ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಲು ಬಳಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಸಿನಿಮಾಗಳನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ. ರಾಜಕೀಯ ಪಕ್ಷಗಳ ಸಿದ್ಧಾಂತವನ್ನು ಹೆಚ್ಚು ಜನರ ಮೇಲೆ ಹೇರಲು ಸಿನಿಮಾಗಳನ್ನು ಅಸ್ತ್ರಗಳನ್ನಾಗಿ ಬಳಸಲಾಗುತ್ತಿದೆ.
ಪ್ರಧಾನಿ ಮೋದಿ ಬಗ್ಗೆ ಸಿನಿಮಾ, ರಾಹುಲ್ ಗಾಂಧಿ ವಿಲನ್ ಎಂದು ತೋರಿಸಲೊಂದು ಸಿನಿಮಾ, ಮುಸ್ಲೀಮರು ಹಿಂದುಗಳ ಮೇಲೆ ದೌರ್ಜನ್ಯ ಮಾಡಿದ್ದಾರೆನ್ನಲು ಸಿನಿಮಾ, ಇಂದಿರಾ ಗಾಂಧಿಯ ವಿರೋಧಿಸಲೊಂದು ಸಿನಿಮಾ ಈಗ ಇದೇ ಸಾಲಿಗೋ ಏನೋ ಹೊಸ ಸಿನಿಮಾ ಒಂದು ಸೇರಿಕೊಳ್ಳುತ್ತಿದೆ.
ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿರುವ ಸಾವರ್ಕರ್ ಕುರಿತಾಗಿ ಸಿನಿಮಾ ಒಂದು ಸೆಟ್ಟೇರುದೆ. ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಟ ರಣ್ದೀಪ್ ಹೂಡ ನಿರ್ದೇಶಕರಾಗುತ್ತಿದ್ದಾರೆ.
ಕೆಲ ತಿಂಗಳ ಹಿಂದೆಯೇ ಈ ಸಿನಿಮಾದ ಘೋಷಣೆ ಆಗಿತ್ತು, ಆದರೆ ಆಗ ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ರಣ್ದೀಪ್ ಹೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಸ್ವತಃ ಅವರೇ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾದಲ್ಲಿ ಸಾರ್ವಕರ್ ಪಾತ್ರದಲ್ಲಿ ಸ್ವತಃ ರಣ್ದೀಪ್ ಹೂಡ ಅವರೇ ನಟಿಸಲಿದ್ದಾರೆ. ಸಿನಿಮಾಕ್ಕೆ ಆನಂದ್ ಪಂಡಿತ್, ಸ್ಯಾಮ್ ಖಾನ್ ಹಾಗೂ ಸಂದೀಪ್ ಸಿಂಗ್ ಬಂಡವಾಳ ಹೂಡಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಿರುವ ಬಗ್ಗೆ ರಣ್ದೀಪ್ ಹೂಡ ಇನ್ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿದ್ದು, 'ಲೈಟ್ಸ್, ಕ್ಯಾಮೆರಾ, ಹಿಸ್ಟರಿ' ಎಂದಿದ್ದಾರೆ.

ಸಿನಿಮಾಕ್ಕೆ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಎಂದು ಹೆಸರಿಡಲಾಗಿದೆ. ಸಿನಿಮಾದ ಇತರೆ ಪಾತ್ರಗಳ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ ಇದೇ ಸಿನಿಮಾದ ಕುರಿತಾಗಿ ಮಾತನಾಡಿದ್ದ ರಣ್ದೀಪ್ ಹೂಡಾ, ''ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ವಿನಾಯಕ ದಾಮೋದರ ಸಾವರ್ಕರ್ ಸಹ ಕಾರಣರಾಗಿದ್ದಾರೆ. ಅವರ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಇದೆ, ತಪ್ಪು ಕಲ್ಪನೆಗಳು ಇವೆ, ಹಾಗಾಗಿ ಅವರ ಕತೆಯನ್ನು ಹೇಳಬೇಕು'' ಎಂದಿದ್ದರು.


Click it and Unblock the Notifications











