ಅಯ್ಯೋ ರಾಮ, ಇದೆಂಥಾ ಕರ್ಮ ; ತಮ್ಮದೇ ಪಕ್ಷದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ..!
ಮಾತು ಮನೆಯನ್ನಷ್ಟೇ ಕೆಡಿಸಲ್ಲ. ಕೆಲವೊಮ್ಮೆ ಮನಸನ್ನೂ ಕದಡಿಸುತ್ತೆ. ಇನ್ನೂ ಕೆಲವೊಮ್ಮೆ ಪೇಚಿಗೆ ಸಿಲುಕಿಸುತ್ತೆ. ಇದಕ್ಕೆ ಕಂಗನಾ ರಣಾವತ್ ಸದ್ಯಕ್ಕೆ ಅತ್ಯುತ್ತಮ ಉದಾಹರಣೆ
ಹೌದು.. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ಕಣಕ್ಕಿಳಿದಿರುವುದು..ಬಿರುಸಿನ ಪ್ರಚಾರ ಮಾಡ್ತಿರುವುದು ನಿಮಗೆ ಗೊತ್ತಿರಬೇಕು. ಈ ಪ್ರಚಾರದಿಂದ ಕಂಗನಾ ಸಡಗರ ಹೆಚ್ಚಾಗಲಿದೆಯಾ ಇಲ್ಲವಾ ಅನ್ನುವುದು ಮುಂದೆ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ಕಂಗನಾ ಇತ್ತೀಚಿನ ತಮ್ಮ ಪ್ರಚಾರ ಕಾರ್ಯಕ್ರಮದಿಂದ ಸಮಾಚಾರದಲ್ಲಿದ್ದಾರೆ.ಯಾಕೆಂದರೆ ಮಾತನಾಡುವ ಭರದಲ್ಲಿ ತೇಜಸ್ವಿ ಯಾದವ್ ಬದಲು ತಮ್ಮದೇ ಪಕ್ಷದ ತೇಜಸ್ವಿ ಸೂರ್ಯ ಬಗ್ಗೆ ಮಾತನಾಡಿದ್ದಾರೆ. ವಾಗ್ದಾಳಿಯನ್ನೂ ನಡೆಸಿದ್ದಾರೆ. ಅಚ್ಚರಿ ಅನಿಸಿದರೂ ಇದು ನಿಜಾ.

ಅಸಲಿಗೆ ಮಂಡೆ ಬಿಸಿ ಮಾಡಿಕೊಂಡು ಮಂಡಿಯಲ್ಲಿ ಭಾಷಣ ಮಾಡ್ತಿದ್ದ ಕಂಗನಾ, ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೆಂಡ ಕಾರುತ್ತಿದ್ದರು. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದೇ ವೇಳೆ ಮಾತನಾಡಿದ ಕಂಗನಾ ರಣಾವತ್ ಹಾಳಾದ ರಾಜಕುಮಾರರ ಪಕ್ಷವೊಂದಿದೆ... ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್ ಗಾಂಧಿ ಇರಬಹುದು ಅಥವಾ ಗೂಂಡಾಗಿರಿ ಮಾಡುವ ಮತ್ತು ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು ಎಂದು ಹೇಳಿದರು. ಕಂಗನಾ ಅವರ ಈ ಮಾತುಗಳಿಂದ ಅಲ್ಲಿ ನೆರೆದವರಿಗೆ ಗೊಂದಲ.. ಇನ್ನೊಂದಷ್ಟು ಜನಕ್ಕೆ ನಗು.
ನಿಮಗೆ ಗೊತ್ತಿರಲಿ.. ನವರಾತ್ರಿಯ ಸಂದರ್ಭದಲ್ಲಿ ಮೀನು ಸೇವಿಸಿದ ಕಾರಣಕ್ಕೆ ತೇಜಸ್ವಿ ಯಾದವ್ ಟೀಕೆಗೊಳಗಾಗಿದ್ದರು. ಎಪ್ರಿಲ್ 9ರಂದು ತಮ್ಮ ಬಿಡುವಿಲ್ಲದ ಲೋಕಸಭಾ ಚುನಾವಣಾ ಪ್ರಚಾರದ ನಡುವೆ ಸಾಮಾಜಿಕ ಮಾಧ್ಯಮದ ಚುನಾವಣಾ ಪ್ರಚಾರದ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದ ತೇಜಸ್ವಿ ಯಾದವ್, ತಾವು ಕರಿದ ಮೀನು ತಿನ್ನುತ್ತಿರುವ ತುಣುಕನ್ನು ಹಂಚಿಕೊಂಡಿದ್ದರು. ಈ ಕಾರಣಕ್ಕೆ ತೇಜಸ್ವಿ ಯಾದವ್ ಅವರನ್ನ ಗುರಿಯಾಗಿಸಿಕೊಂಡು ಕಂಗನಾ ಮಾತನಾಡುತ್ತಿದ್ದರು. ಆದರೆ ಗುರಿ ತಪ್ಪಿದ ಆ ಬಾಣ ತೇಜಸ್ವಿ ಯಾದವ್ ಅವರ ಬದಲು ತೇಜಸ್ವಿ ಸೂರ್ಯ ಅವರ ಕಡೆ ಬಂದು ಬಿತ್ತು

ಸಹಜವಾಗಿ ಕಂಗನಾ ಅವರ ಈ ಮಾತು, ಕಾಂಗ್ರೆಸ್ ಪಕ್ಷಕ್ಕೆ ಸದ್ಯಕ್ಕೆ ದೊಡ್ಡ ಅಸ್ತ್ರವಾಗಿದೆ. ಹೀಗಾಗಿಯೇ 37ರ ಹರೆಯದ ನಟಿ ಮೊದಲು ತಮ್ಮ ಪಕ್ಷದ ನಾಯಕರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಬೇಕು ಮತ್ತು ಬಳಿಕ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಮಾತನಾಡಬೇಕು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ನ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ಅಮೃತ್ ಕೌರ್ ಅವರು ಮಂಡಿಯಿಂದ ಬಿಜೆಪಿ ಟಿಕೆಟ್ ಪಡೆದಿರುವ ಕಂಗನಾ ಅವರ ಅರ್ಹತೆಯನ್ನು ಪ್ರಶ್ನಿಸಿದ್ದಾರೆ.
ಉಳಿದಂತೆ ಕಂಗನಾ ರಣಾವತ್ ಸದ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗ್ತಿದ್ದಾರೆ. ಕಂಗನಾ ರಣಾವತ್ ಪಾಲಿಗೆ ಟ್ರೋಲ್ ಹೊಸದಲ್ಲವಾದರೂ ಬಿಜೆಪಿ ವಲಯದಲ್ಲಿ ಕಂಗನಾ ಅವರ ಈ ಮಾತಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಕಂಗನಾ ಅವರ ಈ ನುಡಿಯ ಬಗ್ಗೆ ಅಸಮಾಧಾನದ ಅಲೆಯೂ ಎದ್ದಿದೆ. ಮುಂದೆ, ಹಿಮಾಚಲದ ಮಂಡಿಯಲ್ಲಿ ಇದೇ ಮಾತು ಕಂಗನಾಗೆ ಮುಳುವಾಗಬಹುದು ಎಂದು ಕೂಡ ಅಂದಾಜಿಸಲಾಗುತ್ತಿದೆ. ಶತ್ರು ಯಾರು ಅನ್ನುವುದನ್ನೇ ತಿಳಿಯದೇ, ತಮ್ಮ ಪಕ್ಷದವರ ವಿರುದ್ಧವೇ ಮಾತನಾಡಿ ಪೇಚಿಗೆ ಸಿಲುಕಿರುವ ಕಂಗನಾ, ಹಿಮಾಚಲದ ಮಂಡಿ ಬಗ್ಗೆ ಎಲ್ಲಿ ಮಂಡೆ ಬಿಸಿ ಮಾಡಿಕೊಳ್ತಾರೆ ಅನ್ನುವ ಅಭಿಪ್ರಾಯ ಕೂಡ ಕಂಗನಾ ಅವರ ಈ ವೈರಲ್ ಭಾಷಣದ ನಂತರ ವ್ಯಕ್ತವಾಗುತ್ತಿದೆ.


Click it and Unblock the Notifications











