ರಾಷ್ಟ್ರ ಪ್ರಶಸ್ತಿ 'ಕೋರ್ಟ್' ಚಿತ್ರದ ನಟ ವೀರ ಸಾತಿದಾರ್ ಕೊರೊನಾದಿಂದ ಸಾವು
ನಟ, ಸಾಮಾಜಿಕ ಹೋರಾಟಗಾರ ವೀರ ಸಾತಿದಾರ್ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿದ್ದ ನಟ ವೀರ ಸಾತಿದಾರ್ ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
62 ವರ್ಷದ ವೀರ ಸಾತಿದಾರ್ 2015ರಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ಕೋರ್ಟ್ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. ಚೈತನ್ಯ ತಮ್ಹಾನೆ ನಿರ್ದೇಶಿಸಿದ್ದ 'ಕೋರ್ಟ್' ಚಿತ್ರದಲ್ಲಿ ಪ್ರತಿಭಟನೆ ನಿರತ ಕವಿ-ಶಿಕ್ಷಕ ನಾರಾಯಣ್ ಕಾಂಬ್ಳೆ ಎಂಬ ಪಾತ್ರದಲ್ಲಿ ನಟಿಸಿದ್ದರು.
ವಿಶೇಷ ಅಂದ್ರೆ ಈ ಸಿನಿಮಾ 2016ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದುಕೊಂಡಿತ್ತು. ಸಿನಿಮಾ ಬಿಡುಗಡೆಗೂ ಮುಂಚೆ ಹಾಗೂ ಸಿನಿಮಾ ಬಿಡುಗಡೆಯಾದ ನಂತರವೂ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಕೋರ್ಟ್ ಸಿನಿಮಾ ಪಡೆದುಕೊಂಡಿದೆ.

ವೀರ ಸಾತಿದಾರ್ ಅವರ ಕೊನೆಯ ಕ್ಷಣದ ಬಗ್ಗೆ ಮಾಹಿತಿ ನೀಡಿದ ಅವರ ಪುತ್ರ ''ನಾಗ್ಪುರದ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ನ್ಯುಮೋನಿಯಾಗೆ ತುತ್ತಾಗಿದ್ದ ತಂದೆಯವರು ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದರು'' ಎಂದು ತಿಳಿಸಿದ್ದಾರೆ.
ಸಾತಿದಾರ್ ಅವರ ಸಾವಿಗೆ ಚಿತ್ರರಂಗ ಹಾಗೂ ಕೋರ್ಟ್ ಸಿನಿಮಾ ತಂಡದ ಸದಸ್ಯರು ಸಂತಾಪ ಸೂಚಿಸಿದ್ದಾರೆ. ಕೋರ್ಟ್ ಚಿತ್ರದ ಸಂಗೀತ ನಿರ್ದೇಶಕ ಸಂಭಾಜಿ ಭಗತ್ ಪ್ರತಿಕ್ರಿಯಿಸಿ ''ಕಳೆದ ಎರಡು ದಿನಗಳಿಂದ ಸಾತಿದಾರ್ ವೆಂಟಿಲೇಟರ್ನಲ್ಲಿದ್ದರು. ಅವರ ನಿಧನದಿಂದ ತುಂಬಾ ನೋವಾಗಿದೆ. ಅವರೊಬ್ಬ ಪ್ರತಿಭಾವಂತ ನಟ ಮಾತ್ರವಲ್ಲದೆ ಒಳ್ಳೆಯ ಮನುಷ್ಯ'' ಎಂದಿದ್ದಾರೆ.
ಕೋರ್ಟ್ ಸಿನಿಮಾದ ಬರಹಗಾರ ಮತ್ತು ನಿರ್ದೇಶಕಿ ಚೈತನ್ಯ ತಮ್ಹಾನೆ ಅವರು ಸಹ ಸಾತಿದಾರ್ ಅವರ ನಿಧನ ಬಗ್ಗೆ ದುಃಖ ವ್ಯಕ್ತಪಡಿಸಿದರು. ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು, ಕೆಲ ಕಾಲ ಮೂಕರಾಗಿದ್ದೆ ಎಂದು ತಿಳಿಸಿದ್ದಾರೆ. ನನಗೆ ತಿಳಿದಿರುವ ನಟರಲ್ಲಿ ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವೀರ ಸಾತಿದಾರ್ ಮೂಲ ಹೆಸರು ವಿಪುಲ್ ವೈರಗಡೆ. ಬಾಲ್ಯದಲ್ಲಿ ಹಸುಗಳನ್ನು ಸಾಕುತ್ತಿದ್ದರು. ನಂತರ ಅಂಬೇಡ್ಕರೈಟ್ ಚಳುವಳಿ ಮತ್ತು ದಲಿತ ಪ್ಯಾಂಥರ್ಸ್ ಸಂಘಟನೆಯಲ್ಲಿ ತೊಡಗಿಕೊಂಡರು. ಕವನ ಬರೆದಿದ್ದಾರೆ. ಅನೇಕ ಮರಾಠಿ ಸಿನಿಮಾಗಳಲ್ಲಿ ಕೆಲಸ ಮಾಡಿದರು. 'ಆಧಾ ಚಾಂದ್ ತುಮ್ ರಾಖ್ಲೋ' ಎಂಬ ಸಾಕ್ಷ್ಯಚಿತ್ರದಲ್ಲಿ ನಟ ಕೆಲಸ ಮಾಡಿದ್ದಾರೆ. 'ಕೋರ್ಟ್' ಸಿನಿಮಾದ ಅಭಿನಯದ ಇಲ್ಲಿಯರೆಗೂ ಅತ್ಯುತ್ತಮ ಎಂದು ಎನಿಸಿಕೊಂಡಿದೆ.


Click it and Unblock the Notifications











