ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸ, ಕೂದಲೆಳೆ ಅಂತರದಲ್ಲಿ ಪಾರಾದ ಸ್ಟಾರ್ ಜೋಡಿ..!
ಪಾಕಿಸ್ತಾನ ಬೆಳೆಸಿದ ಪಾಪಿ ಉಗ್ರರ ಆತಂಕಕ್ಕೆ ಕಡಿವಾಣ ಹಾಕಲು, ಅವರ ಅಟ್ಟಹಾಸವನ್ನು ಮಟ್ಟ ಹಾಕಲು, ಭಾರತೀಯ ವೀರ ಯೋಧರು ಕಟಿ ಬದ್ದರಾಗಿ ನಿಂತಿದ್ದಾರೆ. ಆದರೂ ಕೂಡ ಇವರ ಉಪಟಳ ಕಡಿಮೆಯಾಗಿಲ್ಲ. ಸದಾ ಒಂದಿಲ್ಲೊಂದು ವಿಚಾರವಾಗಿ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನ ಜಮ್ಮು ಕಾಶ್ಮೀರದ ವಿಚಾರದಲ್ಲಿ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತೆ.
ಭಯೋತ್ಪಾದನೆಯ ಕೇಂದ್ರವಾದ ಪಾಕಿಸ್ತಾನದಲ್ಲಿ 30ರಿಂದ 40 ಸಾವಿರ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಹಿಂದೊಮ್ಮೆ ಅವರ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಇನ್ನು 2019 ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ದಾಳಿ ಯಾರು ತಾನೇ ಹೇಗೆ ಮರೆಯಲು ಸಾಧ್ಯ. ಆರು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್ಪಿಎಫ್ ಅಧಿಕಾರಿಗಳು ಹುತಾತ್ಮರಾಗಿದ್ದರು.

ಈ ಸುದ್ದಿ ಕೇಳಿ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು.ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡರು. ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ಭೀಕರವಾಗಿ ದಾಳಿ ನಡೆಸಲಾಗಿತ್ತು.
ಈ ಕರಾಳ ಘಟನೆಯನ್ನು ಭಾರತೀಯರು ಇನ್ನು ಮರೆತಿಲ್ಲ. ಹೀಗಿರುವಾಗ ಇದೀಗ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆದಿದೆ. ಹೆಂಡತಿ ಮತ್ತು ಮಕ್ಕಳ ಮುಂದೆಯೇ ಭಾರತೀಯರ ಜೀವವನ್ನು ಬಲಿ ಪಡೆದು ಉಗ್ರರು ಕೇಕೆ ಹಾಕಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯನ್ನು ಈ ಬಾರಿ ಕೂಡ ಸರ್ಕಾರ ಕಲಿಸಲು ಮುಂದಾಗಿದೆ. ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ತಾರಾ ಜೋಡಿಯೊಂದು ಪಾರಾಗಿದೆ.
ಹೌದು, ಹಿಂದಿಯ ಪ್ರಸಿದ್ಧ ಕಿರುತೆರೆ ಜೋಡಿಗಳಲ್ಲಿ ಒಂದಾದ ದೀಪಿಕಾ ಕಕ್ಕರ್ ಮತ್ತು ಶೋಯೆಬ್ ಇಬ್ರಾಹಿಂ ಮೊನ್ನೆಯಷ್ಟೇ ಕಾಶ್ಮೀರಕ್ಕೆ ತೆರಳಿದ್ದರು. ಪಹಲ್ಗಾಮ್ನಲ್ಲಿ ಪ್ರವಾಸಿಗರ ನೆತ್ತರು ಹರಿಯುವ ಮುನ್ನ ಇಬ್ಬರು ಅಲ್ಲಿಯೇ ಬಿಡಾರ ಹೂಡಿದ್ದರು. ಕಾಲವನ್ನು ಕಳೆದಿದ್ದರು. ಆದರೆ ಏಪ್ರಿಲ್ 22ರಂದು ಭಯೋತ್ಪಾದಕರ ದಾಳಿ ನಡೆಯುವ ಕೆಲ ಗಂಟೆಗಳ ಮುನ್ನ ಇಬ್ಬರು ಪಹಲ್ಗಾಮ್ದಿಂದ ಹೊರ ನಡೆದಿದ್ದರು.
ಆದರೆ ಇದನ್ನರಿಯದ ಅನೇಕರು ಶೋಯೆಬ್ ಇಬ್ರಾಹಿಂ ಮತ್ತು ದೀಪಿಕಾ ಕಕ್ಕರ್ ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿಯೇ ಈಗ ಪ್ರತಿಕ್ರಿಯೆಯನ್ನು ನೀಡಿರುವ ಶೋಯೆಬ್ ಮತ್ತು ದೀಪಿಕಾ ಕಕ್ಕರ್ ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ. ಚಿಂತೆ ಮಾಡಬೇಡಿ ಆತಂಕಕ್ಕೆ ಒಳಗಾಗಬೇಡಿ ನಾವು ಕಾಶ್ಮೀರ ಬಿಟ್ಟಿದ್ದೇವೆ, ಈಗ ದೆಹಲಿ ತಲುಪಿದ್ದೇವೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಇಬ್ಬರು ಸಂದೇಶವನ್ನು ರವಾನಿಸಿದ್ದಾರೆ.
ಇನ್ನು ನಾವೆಲ್ಲ ಕ್ಷೇಮವಾಗಿದ್ದೇವೆ ಎಂದು ಹೇಳುವ ಸಮಯದಲ್ಲಿ ಶೋಯೆಬ್ ಇಬ್ರಾಹಿಂ ಮತ್ತು ದೀಪಿಕಾ ಕಕ್ಕರ್ ಎಡವಟ್ಟು ಮಾಡಿಕೊಂಡಿದ್ದಾರೆ. ನಮ್ಮ ವ್ಲಾಗ್ನ ಶೀಘ್ರದಲ್ಲಿಯೇ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ. ಇದು ಅನೇಕರ ಕೋಪಕ್ಕೆ ಈಗ ಕಾರಣವಾಗಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕರು ಪಹಲ್ಗಾಮ್ನಲ್ಲಿ ಅನೇಕರು ಉಗ್ರರಿಗೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿಂದ ಪಾರಾಗಿ ಬಂದ ನೀವು ಅಲ್ಲಿ ಹುತಾತ್ಮರಾದವರಿಗೆ ಶ್ರದ್ದಾಂಜಲಿ ಸಲ್ಲಿಸುವ ಬದಲು ವ್ಲಾಗ್ ಹಂಚಿಕೊಳ್ಳುವ ಮಾತುಗಳನ್ನು ಈ ಸಮಯದಲ್ಲಿ ಮಾತನಾಡುತ್ತಿದ್ದೀರಲ್ಲಾ ನಿಮಗೆ ನಾಚಿಕೆಯಾಗಲ್ವಾ ಎಂದು ಕಿಡಿ ಕಾರುತ್ತಿದ್ದಾರೆ. ಟ್ರೋಲಿಗರು ದೀಪಿಕಾ ಮತ್ತು ಶೋಯೆಬ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











