ಪಾಳುಬಿದ್ದ ಮನೆಯಲ್ಲಿ ಹೆಣ್ಣು ಮಗುವನ್ನು ರಕ್ಷಿಸಿದ ಖ್ಯಾತ ನಟಿಯ ಸಹೋದರಿ
ಬಾಲಿವುಡ್ ನಟಿ ದಿಶಾ ಪಟಾನಿ ಸಹೋದರಿ ಖುಷ್ಬೂ ಪಟಾನಿ ಮಾಜಿ ಸೇನಾ ಅಧಿಕಾರಿ ಕೂಡ ಹೌದು. ಕಳೆದೆರಡು ದಿನಗಳಿಂದ ಆಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ಆಕೆ ಪಾಳುಬಿದ್ದಿದ್ದ ಮನೆಯಲ್ಲಿ ಒಂದು ಮಗುವನ್ನು ಕಾಪಾಡಿದ್ದು. ಈ ಬಗ್ಗೆ ವೀಡಿಯೋ ಮಾಡಿ ಖುಷ್ಬೂ ಹಂಚಿಕೊಂಡಿದ್ದರು.
ಉತ್ತರಪ್ರದೇಶದ ಬರೇಲಿಯಲ್ಲಿ ಖುಷ್ಬೂ ಪಟಾನಿ ವಾಸಿಸುತ್ತಿದ್ದಾರೆ. ಭಾನುವಾರ ತಮ್ಮ ನಿವಾಸ ಸಮೀಪ ಪಾಳುಬಿದ್ದ ಮನೆಯೊಂದರಲ್ಲಿ ಮಗು ಅಳುತ್ತಿರುವ ಸದ್ದು ಕೇಳಿಸಿದೆ. ಕೂಡಲೇ ಅಲ್ಲಿಗೆ ಹೋಗಿ ನೋಡಿದ್ದಾರೆ. ಮುಖಕ್ಕೆ ಪೆಟ್ಟಾಗಿ ಮೈಯೆಲ್ಲಾ ಮಣ್ಣಾಗಿದ್ದ ಮಗುವನ್ನು ನೋಡಿ ಬೇಸರಗೊಂಡಿದ್ದಾರೆ. ಹಿಂದು ಮುಂದು ನೋಡದೇ ಆ ಮಗುವನ್ನು ರಕ್ಷಿಸಿ ಹೊರಗೆ ತಂದಿದ್ದಾರೆ.

ಅಳುತ್ತಿದ್ದ ಮಗು ಗಾಬರಿಗೊಳ್ಳದಂತೆ ಬಹಳ ತಾಳ್ಮೆಯಿಂದ ಸಮಾಧಾನ ಮಾಡಿ ತೆಗೆದುಕೊಂಡು ಬಂದಿದ್ದಾರೆ. ಮಡಿಲಿನಲ್ಲಿಟ್ಟುಕೊಂಡು ಲಾಲಿ ಹಾಡಿದ್ದಾರೆ. ಡಬ್ಬಿ ಸಹಾಯದಿಂದ ಹಾಲುಣಿಸಿದ್ದಾರೆ. ಈ ಮಗುವಿನ ಬಗ್ಗೆ ಮಾಹಿತಿ ಇರುವವರು ತಮ್ಮನ್ನು ಸಂಪರ್ಕಿಸಿ ಎಂದು ಹೇಳಿ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ. ಪುಟ್ಟ ಮಗುವನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಪೋಷಕರ ಬಗ್ಗೆ ಖುಷ್ಬೂ ಪಟಾನಿ ಅಸಮಾಧಾನ ಹೊರ ಹಾಕಿದ್ದಾರೆ. ನೀವೆಂತಹ ಪೋಷಕರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು ನಮ್ಮ ದೇಶದಲ್ಲಿ ಹೆಣ್ಣು ಮಗುವನ್ನು ಉಳಿಸಿ. ಇನ್ನು ಎಷ್ಟು ದಿನ ಇದು ಹೀಗೆ ಮುಂದುವರೆಯುತ್ತದೆ. ನಾನು ಆ ಮಗು ಸರಿಯಾದ ವ್ಯಕ್ತಿಗಳ ಕೈಗೆ ಹೋಗುವಂತೆ ನೋಡಿಕೊಳ್ಳುತ್ತೇನೆ ಎಂದು ಖುಷ್ಬೂ ಪಟಾನಿ ವೀಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಬರೇಲಿ ಪೊಲೀಸರು, ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರನ್ನು ಪೋಸ್ಟ್ಗೆ ಟ್ಯಾಗ್ ಮಾಡಿದ್ದಾರೆ.
ಖುಷ್ಬೂ ಪಟಾನಿ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ಸಮಯದಲ್ಲಿ ಪುಟ್ಟ ಮಗುವನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಪೋಷಕರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಖುಷ್ಬೂ ಪಟಾನಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಖುಷ್ಬೂ ಪ್ರಯತ್ನಕ್ಕೆ ಬಾಲಿವುಡ್ ತಾರೆಯರು ಕೂಡ ಮೆಚ್ಚುಗೆ ಸೂಚಿಸಿದ್ದರು. ಸದ್ಯ ಆಕೆ ಮತ್ತೊಂದು ವೀಡಿಯೋ ಶೇರ್ ಮಾಡಿ ತಾಯಿ-ಮಗುವನ್ನು ಸೇರಿಸಿದ್ದಾರೆ.
ಭಾನುವಾರ(ಏಪ್ರಿಲ್ 20) ಬೆಳಗ್ಗೆ ಖುಷ್ಬೂ ಪಟಾನಿ ಮನೆ ಬಳಿಕ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಪಾಳು ಬಿದ್ದ ಮನೆಯಿಂದ ಮಗು ಅಳುವ ಸದ್ದು ಕೇಳಿಸಿತ್ತು. ಅಲ್ಲಿಗೆ ಹೋಗಲು ದಾರಿ ಇಲ್ಲದಾಗ ಗೋಡೆ ಏರಿ ಖುಷ್ಬೂ ಅಲ್ಲಿಗೆ ಹೋಗಿ ಮಗುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪಂಕಜ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಸ್ಥಳಿಯ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಬಗ್ಗೆ ಕೂಡ ಖುಷ್ಬೂ ವೀಡಿಯೋ ಹಂಚಿಕೊಂಡಿದ್ದಾರೆ.
ಮಗುವಿನ ಪೋಷಕರು ಸಿಕ್ಕಿದ್ದಾರೆ. ತಂದೆ ಮಗು ನೋಡಲು ಬರಲಿಲ್ಲ. ತಾಯಿ ಬಂದಿದ್ದಾರೆ. ತಾಯಿ ಪ್ರಯಾಣಿಸುತ್ತಿದ್ದಾಗ ಯಾರೋ ಮಗುವನ್ನು ಕಸಿದುಕೊಂಡು ಬಂದು ಆ ಪಾಳುಬಿದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಫುಟೇಜ್ ಕಲೆ ಹಾಕುತ್ತಿದ್ದಾರೆ. "ರಾಧಾ ಕ್ಷೇಮವಾಗಿದ್ದಾಳೆ, ಎಲ್ಲರಿಗೂ ಧನ್ಯವಾದ" ಎಂದು ಖುಷ್ಬೂ ಪಟಾನಿ ಮತ್ತೊಂದು ವೀಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.
"ಪೊಲೀಸರು ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ್ದಾರೆ. ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಧನ್ಯಾವಾದ" ಎಂದು ಬರೆದು ಮತ್ತೊಂದು ವೀಡಿಯೋವನ್ನು ಖುಷ್ಬೂ ಪಟಾನಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











