ಬಂಗಲೆ ನೆಲಸಮಗೊಳಿಸುವ ಪ್ರಕರಣ; ಜಯ ಸಾಧಿಸಿದ ಕಂಗನಾ ರಣಾವತ್
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಮುಂಬೈ ಬಂಗಲೆಯನ್ನು ನೆಲಸಮಗೊಳಿಸುವ ಬಿಎಂಸಿ ಆದೇಶವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಅನೂರ್ಜಿತಗೊಳಿಸಿದೆ.
ಕಂಗನಾ ಬಂಗಲೆಯನ್ನು ಹಾನಿ ಮಾಡಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಕಂಗನಾ ಅವರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸೆಪ್ಟಂಬರ್ 9ರಂದು ಮುಂಬೈನ ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ಕಂಗನಾ ರಣಾವತ್ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಂಗನಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. 2 ಕೋಟಿ ರೂಪಾಯಿ ನಷ್ಟಪರಿಹಾರ ಕೊಡಬೇಕು ಮತ್ತು ಬಿಎಂಸಿ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.

ಕಾರ್ಯಚರಣೆಯನ್ನು ಸ್ಥಗಿತಗೊಳಿಸುವಂತೆ ಹೈ ಕೋರ್ಟ್ ಅಂದೇ ಆದೇಶಿಸಿತ್ತು. ಕಾರ್ಯಚರಣೆಯಿಂದ ಬಂಗಲೆಗೆ ಆದ ಹಾನಿ ಬಗ್ಗೆ ನಟಿ ಮತ್ತು ಪಾಲಿಕೆ ಪರಿಶೀಲಿಸಿ ಪರಿಹಾರ ಮೊತ್ತವನ್ನು ಅಂದಾಜು ಮಾಡಲು ಮೌಲ್ಯಮಾಪಕರನ್ನು ನೇಮಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. 2021 ಮಾರ್ಚ್ ತಿಂಗಳೊಳಗೆ ಪರಿಹಾರದ ಬಗ್ಗೆ ಆದೇಶ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, 'ಸರ್ಕಾರದ ವಿರುದ್ಧ ಒಬ್ಬರೆ ನಿಂತು ಹೋರಾಡಿ ಗೆಲವು ಸಿಕ್ಕಿದೆ, ಇದು ಕೇವಲ ಒಬ್ಬರ ಗೆಲುವಲ್ಲ, ಪ್ರಜಾಪ್ರಭುತ್ವದ ಗೆಲುವು. ನನಗೆ ಧೈರ್ಯ ತುಂಬಿ ನನ್ನ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.


Click it and Unblock the Notifications











