ಸೋಲುತ್ತಿರುವ ಚಿತ್ರ ಉಳಿಸಲು ಕಂಗನಾ ಮನವಿ, ತಾಳ್ಮೆ ಇರಲಿ ಸ್ವಾತಂತ್ರ್ಯ ಬಂದಿರೋದೆ 2014ರಲ್ಲಿ ಎಂದ ಪ್ರಕಾಶ್ ರಾಜ್!
ನಟಿ ಕಂಗನಾ ರನೌತ್ ಇತ್ತೀಚೆಗೆ ಸಿನಿಮಾಗಳಿಗಿಂತಲೂ ಇತರ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ನವರಾತ್ರಿ ಸಂಭ್ರಮದಲ್ಲಿ ರಾವಣ ದಹನ ಮಾಡುವಾಗ ಪೇಚಿಗೆ ಸಿಲುಕಿದ್ದರು. ಅದಕ್ಕೂ ಮುನ್ನ ಇಸ್ರೆಲ್- ಹಮಾಸ್ ವಿಷಯದಲ್ಲಿ ತಾವು ಇಸ್ರೇಲ್ಗೆ ಬೆಂಬಲ ನೀಡುವುದಾಗಿ ತಿಳಿಸಿ ರಾಯಭಾರಿಯನ್ನೂ ಭೇಟಿಯಾಗಿದ್ದರು. ಇವೆಲ್ಲದರ ನಡುವೆ ಅಕ್ಟೋಬರ್ 27 ರಂದು ಅವರ ತೇಜಸ್ ಸಿನಿಮಾ ಬಿಡುಗಡೆಯಾಗಿದೆ.
'ತೇಜಸ್' ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಯಾವುದೇ ಸದ್ದು ಮಾಡುತ್ತಿಲ್ಲ. ಸಿನಿಮಾ ಬಿಡುಗಡೆಯಾದ ಮೊದಲ ದಿನ 1.25 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ಅಷ್ಟೇ ಕಲೆಕ್ಷನ್ ಮಾಡಿದ್ದು, ಒಟ್ಟು 2.5 ಕೋಟಿ ರೂಪಾಯಿ ಗಳಿಸಿದೆ. ಇದರ ಬೆನ್ನಲ್ಲೇ ನಟಿ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

ಕಂಗನಾ ರನೌತ್ ಕಾಲೆಳೆದ ನಟ ಪ್ರಕಾಶ್ ರಾಜ್
ಕಂಗನಾ ರನೌತ್ ಅವರು ಥಿಯೇಟರ್ಗಳಲ್ಲಿ ಹಿಂದಿ ಚಲನಚಿತ್ರಗಳನ್ನು ನೋಡುವಂತೆ ಜನರನ್ನು ಒತ್ತಾಯಿಸಿದ್ದಾರೆ. COVID ನಂತರ ಥಿಯೇಟರ್ಗಳಲ್ಲಿ ಜನ ಕಡಿಮೆಯಾಗುತ್ತಿದ್ದಾರೆ ಎಂದಿದ್ದರು. ಈ ವಿಡಿಯೋ ಬಳಿಕ ನಟ, ರಾಜಕಾರಣಿ ಪ್ರಕಾಶ್ ರಾಜ್ ಟ್ವಿಟರ್ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಂಗನಾ ರನೌತ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್ "ಭಾರತಕ್ಕೆ ಇತ್ತೀಚೆಗಷ್ಟೇ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ... ದಯವಿಟ್ಟು ನಿರೀಕ್ಷಿಸಿ .. ಅದು ಪಿಕಪ್ ಆಗುತ್ತದೆ" ಎಂದು ಕಾಲೆಳೆದಿದ್ದು, ಜಸ್ಟ್ ಆಸ್ಕಿಂಗ್ ಹ್ಯಾಶ್ಟ್ಯಾಗ್ ಬಳಸಿದ್ದಾರೆ.
ವಿಡಿಯೋದಲ್ಲಿ ನಟಿ ಕಂಗನಾ ರನೌತ್ ಹೇಳಿದ್ದೇನು?
ವಿಡಿಯೋದಲ್ಲಿ ನಟಿ ಕಂಗನಾ ರನೌತ್, "ಸ್ನೇಹಿತರೇ, ನನ್ನ ತೇಜಸ್ ಚಿತ್ರ ನಿನ್ನೆ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೋಡಿದವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಆಶೀರ್ವಾದಿಸಿದ್ದಾರೆ. ಆದರೆ ಸ್ನೇಹಿತರೇ, ಕೋವಿಡ್ 19 ರ ನಂತರ, ನಮ್ಮ ಹಿಂದಿ ಚಲನಚಿತ್ರೋದ್ಯಮವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. 99% ಚಿತ್ರಗಳಿಗೆ ಪ್ರೇಕ್ಷಕರು ಆ ಅವಕಾಶವನ್ನೇ ನೀಡುವುದಿಲ್ಲ. ಇಂದಿನ ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮೊಬೈಲ್, ಟಿವಿ ಇರುವುದು ನನಗೆ ಗೊತ್ತು. ಆದರೆ ಚಿತ್ರಮಂದಿರಗಳಲ್ಲಿ ಒಟ್ಟಿಗೆ ಸಿನಿಮಾ ವೀಕ್ಷಿಸುವುದು, ನೃತ್ಯ, ಜಾನಪದ ಕಲೆಗಳು, ಕುಣಿತ ಮೊದಲಿನಿಂದಲೂ ನಮ್ಮ ನಾಗರಿಕತೆಯ ಪ್ರಮುಖ ಭಾಗವಾಗಿರುವುದರಿಂದ ಇವೆಲ್ಲವೂ ಅತ್ಯಗತ್ಯ. ಹಾಗಾಗಿ, ಹಿಂದಿ ಚಿತ್ರ ಪ್ರೇಕ್ಷಕರಿಗೆ ಮತ್ತು ವಿಶೇಷವಾಗಿ ಮಲ್ಟಿಪ್ಲೆಕ್ಸ್ನವರಿಗೆ ನನ್ನ ವಿನಂತಿ ಏನಂದರೆ, ನಿಮಗೆ ಉರಿ, ಮೇರಿ ಕೋಮ್ ಮತ್ತು ನೀರ್ಜಾ ಸಿನಿಮಾಗಳು ಇಷ್ಟವಾಗಿದ್ದರೆ, ತೇಜಸ್ ಸಿನಿಮಾವನ್ನು ಸಹ ನೀವು ಇಷ್ಟಪಡುತ್ತೀರಿ" ಎಂದು ಹೇಳಿದ್ದಾರೆ.

ಕಂಗನಾ ರನೌತ್ ಹೇಳಿಕೆಗೆ ದೀಪಾ ಮೆಹ್ತಾ ಪ್ರತಿಕ್ರಿಯೆ
ಇತ್ತೀಚೆಗೆ ಇಸ್ರೇಲ್ ಮತ್ತು ಹಮಾಸ್ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಕಂಗನಾ ರನೌತ್ ಅವರ ಹೇಳಿಕೆಯನ್ನು ಪ್ರಕಾಶ್ ರಾಜ್ ಮಾತ್ರವಲ್ಲದೆ, ಚಲನಚಿತ್ರ ನಿರ್ಮಾಪಕಿ ದೀಪಾ ಮೆಹ್ತಾ ಕೂಡ ಟೀಕಿಸಿದ್ದಾರೆ. ಕಂಗನಾ ಇತ್ತೀಚೆಗೆ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರನ್ನು ಭೇಟಿಯಾಗಿ ತಮ್ಮ ಬೆಂಬಲವನ್ನು ನೀಡಿದ್ದರು.


Click it and Unblock the Notifications











