ನಟಿ ಕಂಗನಾ ರಣಾವತ್ ಗೆ 'ವೈ ಪ್ಲಸ್' ಭದ್ರತೆ
ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಭೇಟಿಗೆ ಕೇಂದ್ರ ಸರ್ಕಾರ 'ವೈ ಪ್ಲಸ್' ಶ್ರೇಣಿಯ ಭದ್ರತೆ ನೀಡಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಕಂಗನಾಗೆ ಭದ್ರತೆ ನೀಡುವುದಾಗಿ ಹೇಳಿದ ಬೆನ್ನಲ್ಲೇ, ಕೇಂದ್ರ ಸರ್ಕಾರ 'ವೈ ಪ್ಲಸ್' ಶ್ರೇಣಿಯ ಭದ್ರತೆ ಒದಗಿಸಿದೆ.
Recommended Video
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ರಣಾವತ್ ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ತಿಳಿಸಿದ್ದಾರೆ. "ಇದು ದೇಶ ಭಕ್ತರ ಧ್ವನಿಯನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದೆ. ಅಮಿತ್ ಶಾ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಅವರು ಬಯಸಿದರೆ, ಕೆಲವು ದಿನಗಳ ಬಳಿಕ ಮುಂಬೈಗೆ ಹೋಗಬೇಕೆಂದು ಹೇಳಬಹುದಿತ್ತು. ಆದರೆ ಅವರು ಭಾರತದ ಮಗಳನ್ನು ಗೌರವಿಸಿದರು. ಹೆಮ್ಮೆ ಮತ್ತು ಸ್ವಾಭಿಮಾನವನ್ನು ರಕ್ಷಿಸಿದರು. ಜೈ ಹಿಂದ್" ಟ್ವೀಟ್ ಮಾಡಿದ್ದಾರೆ.

'ವೈ ಪ್ಲಸ್' ಶ್ರೇಣಿ ಭದ್ರತೆ
'ವೈ ಪ್ಲಸ್' ಶ್ರೇಣಿ ಭದ್ರತೆ ಎಂದರೆ, ಕಂಗನಾ ರಣಾವತ್ ಅವರನ್ನು ವೈಯಕ್ತಿಕ ಭದ್ರತಾ ಅಧಿಕಾರಿ ಮತ್ತು ಕಮಾಂಡೋಗಳು ಸೇರಿದಂತೆ 11 ಸಶಸ್ತ್ರ ಪೊಲೀಸರು ರಕ್ಷಿಸಲಿದ್ದಾರೆ.

ಹಿಮಾಚಲ ಪ್ರದೇಶ ಸಿಎಂ ಹೇಳಿದ್ದೇನು?
ಕಂಗನಾ ಸಹೋದರಿ ರಂಗೋಲಿ ಮತ್ತು ತಂದೆ ಮಗಳಿಗೆ ಭದ್ರತೆ ನೀಡುವಂತೆ ಹಿಮಾಚಲ ಪ್ರದೇಶ ಸರ್ಕಾರವನ್ನು ಕೇಳಿಕೊಂಡಿದ್ದರು. ಈ ಸಂಬಂಧ ಹಿಮಾಚಲ ಪ್ರದೇಶ ಸಿಎಂ, 'ಕಂಗನಾ ಹಿಮಾಚಲ ಪ್ರದೇಶದ ಮಗಳು ಮತ್ತು ಸೆಲೆಬ್ರಿಟಿ ಕೂಡ ಹೌದು. ಅವರಿಗೆ ಭದ್ರತೆ ನೀಡುವುದು ನಮ್ಮ ಕರ್ತವ್ಯ. ಆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿದ್ದೇನೆ" ಎಂದು ಹೇಳಿದ್ದರು.

ಸೆಪ್ಟಂಬರ್ 9ಕ್ಕೆ ಮುಂಬೈ ಬರುತ್ತಿರುವ ಕಂಗನಾ
ಕಂಗನಾ ಮತ್ತು ಶಿವಸೇನೆ ಮುಖಂಡ ಸಂಜಯ್ ರಾವತ್ ನಡುವೆ ನಡೆಯುತ್ತಿರುವ ವಾಕ್ಸಮರದ ನಡುವೆಯೂ ಕಂಗನಾ ಸೆಪ್ಟಂಬರ್ 9 ರಂದು ಮುಂಬೈಗೆ ಬರುತ್ತಿದ್ದಾರೆ.

ಘಟನೆ ಹಿನ್ನಲೆ
ನಟಿ ಕಂಗನಾ ರಣಾವತ್ ಮುಂಬೈ ಪೊಲೀಸರ ಭದ್ರತೆ ನಿರಾಕರಿಸಿ, 'ಮುಂಬೈ ಪೊಲೀಸರು, ಮಾಫಿಯಾ ಗೂಂಡಾಗಳಿಗಿಂತಲೂ ಭಯ ಹುಟ್ಟಿಸುತ್ತಾರೆ' ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್ 'ಮುಂಬೈ ಬರಬೇಡಿ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಬೆದರಿಕೆ ಕರೆಗಳು ಬರುತ್ತಿವೆ ಎನ್ನುತ್ತಲೇ, ಸಂಜಯ್ ರಾವತ್ ಗೆ ತಿರುಗೇಟು ನೀಡಿದ್ದ ಕಂಗನಾ 'ಮುಂಬೈ ನಗರ ಪಾಕ್ ಆಕ್ರಮಿತ ಪಾಕಿಸ್ತಾನದಂತೆ ಕಾಣುತ್ತಿದೆ' ಎಂದು ಹೇಳಿ ವಿವಾದದ ಕಿಡಿ ಹೊತ್ತಿಸಿದ್ದರು. ಆದರೂ ಕಂಗನಾ 'ಮುಂಬೈಗೆ ಬಂದೆ ಬರ್ತೀನಿ, ಧೈರ್ಯ ಇದ್ದರೆ ತಡೀರಿ' ಎಂದು ಸವಾಲ್ ಹಾಕಿ, ಮುಂಬೈಗೆ ಎಂಟ್ರಿ ಕೊಡುತ್ತಿದ್ದಾರೆ.


Click it and Unblock the Notifications











