ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು: ನಟಿ ಕಂಗನಾ ರಣಾವತ್
ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಿವಸೇನೆ ಜೊತೆಗಿನ ವಾಕ್ಸಮರ ಮತ್ತು ಮುಂಬೈ ಮಹಾನಗರ ಪಾಲಿಕೆ, ಬಾಂದ್ರಾದಲ್ಲಿರುವ ಕಂಗನಾ ಕಚೇರಿಯನ್ನು ಒಡೆದು ಹಾಕಿದ ನಂತರ ಕಂಗನಾ, ರಾಜ್ಯಪಾಲರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ಸರ್ಕಾರದ ಕ್ರಮ ಮತ್ತು ಶಿವಸೇನೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಂಗನಾ ರಾಜ್ಯಪಾಲರಿಗೆ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಕಂಗನಾ ರಣಾವತ್ ಗೆ ಸಹೋದರಿ ರಂಗೋಲಿ ಸಾಥ್ ನೀಡಿದ್ದಾರೆ. ನನಗಾದ ಅನ್ಯಾಯದ ಬಗ್ಗೆ ವಿವರಿಸಿದೆ, ರಾಜ್ಯಪಾಲರು ಮಗಳಂತೆ ನನ್ನ ಎಲ್ಲಾ ಮಾತುಗಳನ್ನು ಆಲಿಸಿದರು ಎಂದು ಹೇಳಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾಗಿ ಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಕಂಗನಾ, "ರಾಜ್ಯಪಾಲರನ್ನು ಭೇಟಿಯಾಗಿರುವುದು ನನ್ನ ಸೌಬಾಗ್ಯ. ನನಗಾದ ಅನ್ಯಾಯದ ಬಗ್ಗೆ ವಿವರಿಸಿದೆ. ನ್ಯಾಯ ದೊರಕುತ್ತದೆ ಎಂದು ನಾನು ಭಾವಿಸುತ್ತೇನೆ. ರಾಜ್ಯಪಾಲರು ನನ್ನನ್ನು ಮಗಳಂತೆ ಕಂಡರು. ನನ್ನ ಮಾತುಗಳನ್ನು ಸಮಾಧಾನದಿಂದ ಆಲಿಸಿದರು" ಎಂದು ಹೇಳಿದ್ದಾರೆ.

ಇತ್ತೀಚಿಗೆ ಮುಂಬೈ ಮಹಾನಗರ ಪಾಲಿಕೆ ಕಂಗನಾ ಬಂಗಲೆಯನ್ನು ಒಡೆದು ಹಾಕಿತ್ತು. ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ಹೈ ಕೋರ್ಟ್ ಒಡೆಯುವ ಪ್ರತಿಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಒಡೆದ ಕಚೇರಿಯಲ್ಲಿಯೇ ಕೆಲಸ ಮಾಡುವುದಾಗಿ ಕಂಗನಾ ಸವಾಲು ಹಾಕಿದ್ದಾರೆ.

ಸೆಪ್ಟಂಬರ್ 9ರಂದು ಭಾರಿ ಭದ್ರೆತೆಯೊಂದಿಗೆ ಮುಂಬೈಗೆ ಆಗಮಿಸಿರುವ ಕಂಗನಾ ಸೆಪ್ಟಂಬರ್ 14ರಂದು ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











