ಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದ ಪ್ರಕರಣ: ಕಂಗನಾ ರಣಾವತ್ ಪ್ರತಿಕ್ರಿಯೆ
ಮದುವೆಯಾಗಲು ನಿರಾಕರಿಸಿದ ನಟಿ ಮಾಲ್ವಿ ಮಲ್ಹೋತ್ರಾಗೆ ಆಕೆಯ ಫೇಸ್ಬುಕ್ ಗೆಳೆಯ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ ಪ್ರಕರಣದ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣವನ್ನು ಖಂಡಿಸಿರುವ ಕಂಗನಾ ಮತ್ತೆ ನೆಪೋಟಿಸಂ ಬಗ್ಗೆ ಉಲ್ಲೇಖಿಸಿದ್ದಾರೆ.
ಟಿವಿ ಶೋ ಉಡಾನ್, ಸಿನಿಮಾ ಹೋಟೆಲ್ ಮಿಲನ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮಾಲ್ವಿ ಮಲ್ಹೋತ್ರಾಗೆ ಆಕೆಯ ಫೇಸ್ಬುಕ್ ಗೆಳೆಯ ಸೋಮವಾರ ಸಂಜೆ ಮುಂಬೈ ನ ವರ್ಸೋವಾ ರಸ್ತೆಯಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಚಾಕು ಇರಿದ ವ್ಯಕ್ತಿ ತನ್ನನ್ನು ತಾನು ನಿರ್ಮಾಪಕ ಎಂದು ಹೇಳಿಕೊಂಡಿದ್ದ ಯೋಗೇಶ್ ಮಣಿಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಮಾಲ್ವಿ ಮಲ್ಹೋತ್ರಾಗೆ ಚಾಕುವಿನಿಂದ ಇರಿದ ಕೂಡಲೇ ಸ್ಥಳದಿಂದ ತನ್ನ ಆಡಿ ಕಾರಿನಲ್ಲಿ ಪರಾರಿಯಾಗಿದ್ದಾನೆ. ಪ್ರಕರಣ ಈಗ ಇಡೀ ಬಾಲಿವುಡ್ ಅನ್ನೇ ಬೆಚ್ಚಿಬೀಳಿಸಿದೆ.

ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ನಟಿಯ ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದೆ. ಸದ್ಯ ಮಾಲ್ವಿ ಮಲ್ಹೋತ್ರಾ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ಸಂಪರ್ಕವಿಲ್ಲದ ಸಣ್ಣ ಪಟ್ಟಣದಿಂದ ಬಂದ ಹೋರಾಟಗಾರರಿಗೆ ಏನಾಗುತ್ತಿದೆ ಎನ್ನುವುದನ್ನು ಹೇಳಿದ್ದಾರೆ.

ಕಂಗನಾ ರಣಾವತ್ ಪ್ರತಿಕ್ರಿಯೆ
'ಇದು ಚಲನಚಿತ್ರೋದ್ಯಮದ ಸತ್ಯ. ಸರಿಯಾದ ಸಂಪರ್ಕವಿಲ್ಲದ ಸಣ್ಣ ಪಟ್ಟಣದಿಂದ ಬಂದ ಹೋರಾಟಗಾರರ ಸ್ಥಿತಿ. ನೆಪೋಟಿಸಂ ಮಕ್ಕಳು ತಮ್ಮನ್ನು ತಾವು ಸಮರ್ತಿಸಿಕೊಳ್ಳಬಹುದು, ಅಂತವರಲ್ಲಿ ಎಷ್ಟು ಜನರಿಗೆ ಚಾಕು ಹಾಕಲಾಗಿದೆ, ಕೊಲೆ ಮಾಡಲಾಗಿದೆ ಮತ್ತು ಅತ್ಯಾಚಾರ ನಡೆದಿದೆ' ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಮತ್ತೆ ಕಂಗನಾ ಮತ್ತೆ ನೆಪೋ ಮಕ್ಕಳನ್ನು ಗುರಿಯಾಗಿಸಿಕೊಂಡು ಬಾಲಿವುಡ್ ಹೊರಗಿನವರು ಮತ್ತು ಒಳಗಿನವರು ಎನ್ನುವ ಚರ್ಚೆಗೆ ನಾಂದಿಹಾಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ಪತ್ತೆ
ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ, ಮುಂಬೈನ ಕೆಫೆಯಿಂದ ಮಾಲ್ವಿ ಹಿಂದಿರುಗಿದ್ದಾಗ ಆರೋಪಿ ಆಕೆಯನ್ನು ದಾರಿಯಲ್ಲಿ ತಡೆದು ನಿಲ್ಲಿಸುತ್ತಾನೆ. ಅವನು ಅವಳೊಂದಿಗೆ ಮಾತನಾಡಲು ಬಲವಂತವಾಗಿ ಪ್ರಯತ್ನಿಸಿದ್ದಾನೆ. ಆದರೆ ಮಾಲ್ವಿ ಮಾತನಾಡಲು ವಿರೋಧಿಸಿದ್ದಾರೆ. ಆಗ ಆತ ಚಾಕು ಹೊರತೆಗೆದು ಅವಳಿಗೆ ಇರಿದು ಪರಾರಿಯಾಗಿದ್ದಾನೆ.

ಪೊಲೀಸರಿಗೆ ಹೇಳಿಕೆ ನೀಡಿದ ಮಾಲ್ವಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಲ್ವಿಯ ಸ್ಥಿತಿ ಸ್ಥಿರವಾಗಿದೆ. ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಮಾಲ್ವಿ, ಕೆಲಸಕ್ಕಾಗಿ ಆತನ ಜೊತೆ ಫೋಸ್ ಬುಕ್ ನಲ್ಲಿ ಸಂಪರ್ಕ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಒಮ್ಮೆ ಮಾತ್ರ ಭೇಟಿಯಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಮದುವೆಯಾಗಲು ಒತ್ತಾಯಿಸುತ್ತಿದ್ದನಂತೆ. ಆದರೆ ಮಾಲ್ವಿ ವಿರೋಧಿಸಿರುವುದಾಗಿ ಪೊಲೀಸರ ಬಳಿ ಹೇಳಿದ್ದಾರೆ.

ನ್ಯಾಯಕ್ಕಾಗಿ ಕಂಗನಾ ಸಹಾಯ ಕೋರಿದ ಮಾಲ್ವಿ?
ಸೆಕ್ಷನ್ 307 ರ ಅಡಿಯಲ್ಲಿ ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಯೋಗೇಶ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಮಾಲ್ವಿ ಮಲ್ಹೋತ್ರ ನಟಿ ಕಂಗನಾ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸಹಾಯ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











