ನನಗೆ ಕಪಾಳಮೋಕ್ಷ ಆದ್ರು ಯಾರು ಮಾತಾಡಲ್ವಾ? ಬಾಲಿವುಡ್ ವಿರುದ್ಧ ಕಂಗನಾ ಗರಂ
ಬಾಲಿವುಡ್ ನಟಿ ಕಂಗನಾ ರಾಣಾವತ್ ಇದೀಗ ಸಂಸದೆ ಆಗಿ ಚುನಾಯಿತರಾಗಿದ್ದಾರೆ. 2024 ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶನದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನು ಇತ್ತೀಚೆಗೆ ನೂತನ ಸಂಸದೆಗೆ ಕಪಾಳಮೋಕ್ಷವಾದ ಘಟನೆ ಕೂಡ ನಡೆದಿದೆ. ಈ ಬಗ್ಗೆ ಮೌನವಾಗಿರುವ ಬಾಲಿವುಡ್ ಬಗ್ಗೆ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ.
ಚಂಡಿಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ಕೆನ್ನೆಗೆ ಸಿಐಎಸ್ಎಫ್ ಮಹಿಳಾ ಕಾನ್ಸ್ಸ್ಟೇಬಲ್ ಕುಲ್ವಿಂದರ್ ಕೌರ್ ಬಾರಿಸಿದ್ದರು. ಕುಲ್ವಿಂದರ್ ಕೌರ್ ಯಾಕೆ ಕಂಗನಾಗೆ ಕಪಾಳಮೋಕ್ಷ ಮಾಡಿದರು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಅವರದ್ದು ರೈತ ಕುಟುಂಬ. ಆಕೆಯ ತಾಯಿ 2020-21ರಲ್ಲಿ ನಡೆದ ರೈತರ ಚಳುವಳಿಯಲ್ಲಿ ಭಾಗಿ ಆಗಿದ್ದರು. ಆಗ ನಟಿ ಕಂಗನಾ ರೈತ ಚಳುವಳಿ ವಿರೋಧಿಸಿ ಹೇಳಿಕೆ ನೀಡಿದ್ದರು. ಆ ಹೇಳಿಕೆಯಿಂದ ಆಕ್ರೋಶಗೊಂಡಿದ್ದರು. ಕಂಗನಾ ಕಂಡಾಗ ತಮ್ಮ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿ ಆಗಿದೆ.

ಕುಲ್ವಿಂದರ್ ಕೌರ್ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು ಆಕೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ನಟಿ ಕಂಗನಾ ಕೂಡ ವೀಡಿಯೋ ಮಾಡಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದರು. "ಪಂಜಾಬ್ನಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹೆಚ್ಚಾಗಿದೆ" ಎಂದು ಕ್ಯಾಪ್ಷನ್ ಕೊಟ್ಟು ಟ್ವಿಟರ್ನಲ್ಲಿ ವಿಡಿಯೋ ಹಾಕಿದ್ದರು.
"ನಮಸ್ತೆ ಸ್ನೇಹಿತರೇ.. ನನ್ನ ಹಿತೈಷಿಗಳು ಹಾಗೂ ಮಾಧ್ಯಮದವರಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ನಾನು ಸುರಕ್ಷಿತವಾಗಿದ್ದೇನೆ. ಚಂಡಿಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್ ವೇಳೆ ಈ ಘಟನೆ ನಡೆಯಿತು. ನಾನು ಸೆಕ್ಯುರಿಟಿ ಚೆಕ್ ಮುಗಿಸಿ ಮುಂದೆ ಹೊರಟಾಗ ಪಕ್ಕದ ಕ್ಯಾಬಿನ್ನಲ್ಲಿ ಇದ್ದ ಸಿಐಎಸ್ಎಫ್ (CISF) ಭದ್ರತಾ ಸಿಬ್ಬಂದಿ ಬಂದು ನನ್ನ ಮುಖಕ್ಕೆ ಹೊಡೆದರು. ಅಲ್ಲದೇ ನನಗೆ ಬೈಯ್ಯಲು ಶುರು ಆರಂಭಿಸಿದರು. ಯಾಕೆ ಹೀಗೆ ಮಾಡಿದ್ರಿ ಅಂತ ನಾನು ಕೇಳಿದೆ. ರೈತರ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ಅವರು ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ. ಆದರೆ ಪಂಜಾಬ್ನಲ್ಲಿ ಹೆಚ್ಚುತ್ತಿರುವ ಉಗ್ರವಾದ ಮತ್ತು ಆತಂಕವಾದವನ್ನು ನಾವು ಹೇಗೆ ನಿಭಾಯಿಸುವುದು ಎನ್ನುವುದೇ ನನ್ನ ಕಳಕಳಿ, ಧನ್ಯವಾದ" ಎಂದು ವಿಡಿಯೋದಲ್ಲಿ ಹೇಳಿದ್ದರು.
ತಮಗೆ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ಬಾಲಿವುಡ್ ತಾರೆಯರು ಯಾರು ಕೂಡ ಪ್ರತಿಕ್ರಿಯಿಸದ ಬಗ್ಗೆ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ಪ್ರೀತಿಯ ಚಲನಚಿತ್ರೋದ್ಯಮವೇ, ನೀವೆಲ್ಲರೂ ನನ್ನ ಮೇಲಿನ ವಿಮಾನ ನಿಲ್ದಾಣದ ದಾಳಿಯನ್ನು ಸಂಭ್ರಮಿಸುತ್ತಿದ್ದೀರಿ ಅಥವಾ ಮೌನವಾಗಿದ್ದೀರಿ, ನಾಳೆ ನೀವು ನಿಮ್ಮ ದೇಶದ ಯಾವುದೋ ಬೀದಿಯಲ್ಲಿ ಅಥವಾ ಪ್ರಪಂಚದ ಬೇರೆಲ್ಲಿಯಾದರೂ ನಿಶ್ಯಸ್ತ್ರವಾಗಿ ನಡೆಯುತ್ತಿದ್ದರೆ ಮತ್ತು ಕೆಲವು ಇಸ್ರೇಲಿ / ಪ್ಯಾಲೆಸ್ಟೀನಿಯಾದವರು ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಹೊಡೆದರೆ ಹೇಗೆ ನೆನಪಿಸಿಕೊಳ್ಳಿ" ಎಂದು ಪ್ರಶ್ನಿಸಿದ್ದಾರೆ.

"ಇಸ್ರೇಲ್ ಒತ್ತೆಯಾಳು ಅಥವಾ ರಫಾಗಾಗಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಆ ರೀತಿ ಆಗಬಹುದು. ಆಗ ನಿಮ್ಮ ವಾಕ್ ಸ್ವಾತಂತ್ರ್ಯದ ಹಕ್ಕುಗಳಿಗಾಗಿ ನಾನು ಹೋರಾಡುತ್ತೇನೆ ನೋಡುತ್ತೀರಿ, ಒಟ್ನಲ್ಲಿ ನಾನು ಮಾತ್ರ ನಿಮ್ಮಂತೆ ಅಲ್ಲ" ಎಂದು ಸಂಸದೆ ಕಂಗನಾ ರಾಣಾವತ್ ಬರೆದುಕೊಂಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಆಕೆ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ತಮ್ಮ ಮೇಲಿನ ದಾಳಿ ಘಟನೆಗೆ ಬಗ್ಗೆ ತಾರೆಯರು ಪ್ರತಿಕ್ರಿಯಿಸದ ಕಾರಣಕ್ಕೆ ಆಕೆ ಈ ಪೋಸ್ಟ್ ಮಾಡಿದ್ದರು ಎನ್ನಲಾಗ್ತಿದೆ.
ಮತ್ತೊಂದು ಕಡೆ ಕಂಗನಾಗೆ ಕಪಾಳ ಮೋಕ್ಷ ಮಾಡಿದ್ದ ಸಿಐಎಸ್ಎಫ್ ಮಹಿಳಾ ಕಾನ್ಸ್ಸ್ಟೇಬಲ್ ಕುಲ್ವಿಂದರ್ ಕೌರ್ ಕೆಲಸ ಕಳೆದುಕೊಳ್ಳಬಹುದು ಎನ್ನುವ ಚರ್ಚೆ ಶುರುವಾಗಿದೆ. ಒಂದು ವೇಳೆ ಆಕೆಗೆ ಕೆಲಸ ಹೋದರೆ ನಾನು ಕೆಲಸ ಕೊಡ್ತೀನಿ ಎಂದು ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಹೇಳಿದ್ದಾರೆ. ಈ ಬಗ್ಗೆ ಅವರು ಮಾಡಿದ ಪೋಸ್ಟ್ ವೈರಲ್ ಆಗ್ತಿದೆ.
"ನಾನು ಹಿಂಸೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ. ಆದರೆ ಈ ಸಿಐಎಸ್ಎಫ್ ಸಿಬ್ಬಂದಿಯ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಸಿಐಎಸ್ಎಫ್ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ.. ಆಕೆಗೆ ಕೆಲಸ ನೀಡಲು ನಾನು ಸಿದ್ಧ. ಜೈ ಹಿಂದ್, ಜೈ ಜವಾನ್ ಜೈ ಕಿಸಾನ್" ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications










