'ಆದಿಪುರುಷ್' ಬಗ್ಗೆ ಟೀಕೆ: ನಿರ್ದೇಶಕನ ಬೆನ್ನಿಗೆ ನಿಂತ ಕೃತಿ ಸೆನನ್, ಬಿಡುಗಡೆ ವಿಳಂಬಕ್ಕೆ ಕೊಟ್ಟರು ಕಾರಣ
ಪ್ರಭಾಸ್ ನಟನೆಯ ರಾಮಾಯಣ ಕತೆಯನ್ನು ಹೊಂದಿರುವ 'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾದ ಗುಣಮಟ್ಟದ ಬಗ್ಗೆ ತೀವ್ರ ಟೀಕೆಗಳು ಎದುರಾಗಿವೆ.
ಸಿನಿಮಾದಲ್ಲಿ ಬಳಸಲಾಗಿರುವ ವಿಎಫ್ಎಕ್ಸ್, ಗ್ರಾಫಿಕ್ಸ್ ಗುಣಮಟ್ಟದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಇದರ ಜೊತೆಗೆ ಆಕ್ಷನ್ ದೃಶ್ಯಗಳನ್ನು ನಕಲು ಮಾಡಿರುವುದು, ರಾವಣನ ಪಾತ್ರವನ್ನು ಮೂಲ ರಾಮಾಯಣಕ್ಕೆ ವ್ಯತಿರಿಕ್ತವಾಗಿ ತೋರಿಸಿರುವುದು ಇನ್ನಿತರೆ ವಿಷಯಗಳಿಗೆ ಈ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ಟೀಕಿಸಲಾಗಿದೆ.
ಸಿನಿಮಾದಲ್ಲಿ ಸೀತೆಯ ಮಾತ್ರದಲ್ಲಿ ನಟಿಸಿರುವ ನಟಿ ಕೃತಿ ಸೆನನ್ ಇದೀಗ ತಮ್ಮ 'ಆದಿಪುರುಷ್' ಸಿನಿಮಾದ ವಿರುದ್ಧ ಎದುರಾಗುತ್ತಿರುವ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ನಿರ್ದೇಶಕ ಓಂ ರಾವತ್ ಪರವಹಿಸಿ ಮಾತನಾಡಿದ್ದಾರೆ. ಅಲ್ಲದೆ, ಸಿನಿಮಾ ಬಿಡುಗಡೆ ತಡವಾಗುತ್ತಿರುವುದಕ್ಕೆ ನಿಜ ಕಾರಣವನ್ನೂ ತಿಳಿಸಿದ್ದಾರೆ.
ಸಿನಿಮಾದ ಬಗ್ಗೆ ವ್ಯಕ್ತವಾಗಿರುವ ಟೀಕೆಗಳ ಬಗ್ಗೆ ಮಾತನಾಡಿರುವ ಕೃತಿ ಸೆನನ್, ''ನಾವು ಮಾಡಿರುವ ಸಿನಿಮಾದ ಬಗ್ಗೆ ನಮಗೆ ಹೆಮ್ಮೆ ಇದೆ. ಸ್ವತಃ ಓಂ ರಾವತ್ ಸಹ ಹೇಳಿರುವಂತೆ, 'ಆದಿಪುರುಷ್' ತಂಡದ ಪ್ರತಿಯೊಬ್ಬರಿಗೂ ತಾವು ಮಾಡಿರುವ ಸಿನಿಮಾದ ಬಗ್ಗೆ ಹೆಮ್ಮೆ ಇದೆ. ಈಗ ಬಂದಿರುವುದು ಒಂದು ನಿಮಿಷದ ಟೀಸರ್ ಅಷ್ಟೆ, ಸಿನಿಮಾದಲ್ಲಿ ಇನ್ನೂ ಅನೇಕ ಅದ್ಭುತ ವಿಷಯಗಳು ಅಡಕವಾಗಿವೆ'' ಎಂದಿದ್ದಾರೆ.

ಸಿನಿಮಾ ಬಿಡುಗಡೆ ತಡವಾಗುತ್ತಿರುವುದಕ್ಕೆ ಕಾರಣ ನೀಡಿದ ಕೃತಿ ಸೆನನ್, ''ಒಂದುವರೆ ನಿಮಿಷದ ಟ್ರೈಲರ್ ಕಟ್ ಮಾಡಲು ಸಾಕಷ್ಟು ಸಮಯ ಹಿಡಿದಿದೆ. ಈಗ ಇಡೀ ಸಿನಿಮಾದ ಕೆಲಸ ಬಾಕಿ ಇದೆ. ವಿಎಫ್ಎಕ್ಸ್, ಸೌಂಡ್ಸ್, ಎಡಿಟಿಂಗ್ ಎಲ್ಲವನ್ನೂ ದಿ ಬೆಸ್ಟ್ ನೀಡಲು ಓಂ ರಾವತ್ ಮತ್ತು ತಂಡ ನಿರ್ಧರಿಸಿದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗಿದೆ. ಹಾಗಾಗಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ'' ಎಂದಿದ್ದಾರೆ ಕೃತಿ ಸೆನನ್.
ಕೃತಿ ಸೆನನ್ ನಟಿಸಿರುವ 'ಬೇಡಿಯಾ' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ವರುಣ್ ಧವನ್ ನಾಯಕ ನಟನಾಗಿ ನಟಿಸಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕೃತಿ ಸೆನನ್ ಬ್ಯುಸಿಯಾಗಿದ್ದಾರೆ.


Click it and Unblock the Notifications










