ಬಾಂಬ್, ಗುಂಡಿನ ಸದ್ದು ನಮ್ಮನ್ನು ಎಚ್ಚರಿಸಿದವು: ಇಸ್ರೇಲ್ನ ಭಯಾನಕ ಅನುಭವ ವಿವರಿಸಿದ ನಟಿ ನುಶ್ರತ್ ಭರುಚಾ
ಇಸ್ರೇಲ್ನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಬಾಂಬು, ಗುಂಡಿನ ಸದ್ದು ಜೋರಾಗಿದೆ. ತಮ್ಮ ನೆಲಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ಈ ಯುದ್ಧ ಇಂದಿನದ್ದಲ್ಲ. ಯುದ್ಧ ಪೀಡಿತ ಪ್ರದೇಶದಲ್ಲಿ ಬಾಲಿವುಡ್ ನಟಿ ನುಶ್ರತ್ ಭರುಚಾ ಸಿಲುಕಿಕೊಂಡಿದ್ದರು. ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದ್ದ ವೇಳೆ ಸಿಲುಕಿಕೊಂಡಿದ್ದ ನಟಿ ನುಶ್ರತ್ ಭರುಚಾ ಕೊನೆಗೂ ತಮ್ಮ ಭಯಾನಕ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಮರೆಯಲಾಗದ ಮತ್ತು ಭಯಾನಕ ಅನುಭವ ಎಂದು ಹೇಳಿದ್ದರು. ತಮ್ಮ ಹೊಸ ಚಿತ್ರ ಅಖೇಲಿ ಪ್ರದರ್ಶನಕ್ಕೆ ಇಸ್ರೇಲ್ಗೆ ತೆರಳಿದ್ದರು.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ನುಶ್ರತ್ ಹೇಳಿದ್ದೇನು?
ನುಶ್ರತ್ ಭರುಚಾ ಮಂಗಳವಾರ (ಅಕ್ಟೋಬರ್ 10) ರಂದು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಸೆಲ್ಫಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಚೆನ್ನಾಗಿ ಮತ್ತು ಸುರಕ್ಷಿತವಾಗಿದ್ದಾರೆ ಎಂದು ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.
"ಎರಡು ದಿನಗಳ ಹಿಂದೆ, ಟೆಲ್ ಅವೀವ್ನಲ್ಲಿರುವ ನನ್ನ ಹೋಟೆಲ್ ಕೋಣೆಯಲ್ಲಿ ಬಾಂಬ್ ಸ್ಫೋಟಗಳು ಮತ್ತು ಸೈರನ್ಗಳ ಶಬ್ದಗಳಿಂದ ನಾನು ಎಚ್ಚರವಾಯಿತು. ನಮ್ಮನ್ನು ತಕ್ಷಣ ಆಶ್ರಯ ಪ್ರದೇಶದಲ್ಲಿ ನೆಲಮಾಳಿಗೆಗೆ ಕರೆದೊಯ್ಯಲಾಯಿತು. ನಾನು ಈ ರೀತಿಯ ಪರಿಸ್ಥಿತಿಯಲ್ಲಿ ಯಾವತ್ತೂ ಇರಲಿಲ್ಲ" ಎಂದು ನುಶ್ರತ್ ಹೇಳಿಕೊಂಡಿದ್ದಾರೆ.
ಇಲ್ಲಿ ಬದುಕಲು ನಾವು ತುಂಬಾ ಅದೃಷ್ಟವಂತರು!
" ಆದರೆ, ಇಂದು ನಾನು ನನ್ನ ಮನೆಯಲ್ಲಿ ಇದ್ದೇನೆ. ಯಾವುದೇ ಬಾಂಬ್ ಸ್ಫೋಟಗಳು ಅಥವಾ ಸೈರನ್ಗಳ ಸದ್ದಿಲ್ಲದೇ ಎದ್ದಿದ್ದೇನೆ. ಹೀಗಾಗಿ ಇವತ್ತು ನನಗೆ ಅರ್ಥವಾಗಿದ್ದು, ಹೀಗೆ ಎಚ್ಚರವಾಗುವುದೇ ದೊಡ್ಡ ವಿಷಯ. ಈ ದೇಶದಲ್ಲಿ ಬದುಕಲು ನಾವು ತುಂಬಾ ಅದೃಷ್ಟವಂತರು, ನಮಗೆ ರಕ್ಷಣೆಯಿದೆ ಮತ್ತು ಸುರಕ್ಷಿತವಾಗಿರುತ್ತೇವೆ" ಎಂದು ಭಾರತಕ್ಕೆ ಮರಳಿದಕ್ಕೆ ಸಂಭ್ರಮಿಸಿದ್ದಾರೆ.

ವಿಡಿಯೋ ಜೊತೆಗೆ ಒಂದು ನೋಟ್ ಕೂಡ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಭಾರತ ಸರ್ಕಾರ, ಭಾರತ ಮತ್ತು ಇಸ್ರೇಲಿ ರಾಯಭಾರ ಕಚೇರಿಗಳು ಮತ್ತು ತನ್ನ ಸುರಕ್ಷತೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಶೀಘ್ರದಲ್ಲೇ ಇಸ್ರೇಲ್ನಲ್ಲಿ ಶಾಂತಿ ನೆಲೆಸಲಿ ಎಂದು ಬೇಡಿಕೊಂಡಿದ್ದಾರೆ. ತಾವು ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಇಸ್ರೇಲ್ನಲ್ಲಿನ ತನ್ನ ಅನುಭವಗಳನ್ನು ಮತ್ತಷ್ಟು ವಿವರವಾಗಿ ವಿವರಿಸಿದ್ದಾರೆ.
ಶನಿವಾರ (ಅಕ್ಟೋಬರ್ 7) ರಂದು ನಟಿ ನುಶ್ರತ್ ಭರುಚಾ ಅವರು ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದರು. ಈ ಬಗ್ಗೆ ತಂಡದ ಸದಸ್ಯರ ಹೇಳಿಕೆಯೊಂದರಲ್ಲಿ "ನುಶ್ರತ್ ದುರದೃಷ್ಟವಶಾತ್ ಇಸ್ರೇಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದರು. ನಾವು ಅವರೊಂದಿಗೆ ಕೊನೆಯ ಬಾರಿಗೆ ಶನಿವಾರ ಮಧ್ಯಾಹ್ನ ಸುಮಾರು 12.30 ಕ್ಕೆ ಮಾತನಾಡಿದ್ದೇವೆ. ಆದಾದ ಬಳಿಕ ಮತ್ತೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ನಾವು ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಮಾಹಿತಿ ನೀಡಿದ್ದರು.
ನಟಿ ನುಶ್ರತ್ 36 ಗಂಟೆಗಳ ಬಳಿಕ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರ ಮುಖದಲ್ಲಿ ನೋವು ಮತ್ತು ಭಯವಿತ್ತು. ಕಣ್ಣಿನ ತುಂಬಾ ನೀರು ತುಂಬಿಕೊಂಡಿತ್ತು.
ನುಶ್ರತ್ ವೀಡಿಯೊಗೆ ಬಾಲಿವುಡ್ ನಟರ ಪ್ರತಿಕ್ರಿಯೆ
ಹಲವಾರು ಇನ್ಸ್ಟಾಗ್ರಾಮ್ ಬಳಕೆದಾರರು, ಬಾಲಿವುಡ್ ನಟ ನಟಿಯರು ನುಶ್ರತ್ ಅವರ ಪೋಸ್ಟ್ಗಳಿಗೆ ಕಾಮೆಂಟ್ ಮಾಡಿದ್ದಾರೆ. ನಟ ವರುಣ್ ಧವನ್, ಹರ್ಷವರ್ಧನ್ ಕಪೂರ್, ಅಭಿಮನ್ಯು ದಸ್ಸಾನಿ ಕೂಡ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











