ಪುರುಷರ ತಪ್ಪಿಗೆ ಹೆಣ್ಣಿಗೇಕೆ ನಿಂದನೆ: ಶಿಲ್ಪಾ ಶೆಟ್ಟಿ ಪರ ರೀಚಾ ಹೇಳಿಕೆ
ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸಾರ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾದ ಬಳಿಕ ನಟಿ ಶಿಲ್ಪಾ ಶೆಟ್ಟಿ ಬಗ್ಗೆಯೂ ಅನುಮಾನದ ಕಣ್ಣುಗಳಿಂದಲೇ ನೋಡಲಾಗುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, 'ನಾವಿನ್ನೂ ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ನೀಡಿಲ್ಲ' ಎಂದಿದ್ದಷ್ಟೆ ತಡ, ಶಿಲ್ಪಾ ಶೆಟ್ಟಿ ಸಹ ಈ ಪ್ರಕರಣದಲ್ಲಿ ಇದ್ದಾರೆ ಎಂದು ಕೆಲವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ತೀರ್ಪು ನೀಡಿಯಾಗಿದೆ.
ಶಿಲ್ಪಾ ಶೆಟ್ಟಿ ವಿರುದ್ಧ ಟ್ರೋಲ್ ನಡೆಯುತ್ತಿದ್ದು, ಕೆಲವು ಮಾಧ್ಯಮಗಳಲ್ಲಿ ಶಿಲ್ಪಾ ಶೆಟ್ಟಿ ಅವರದ್ದೇ ತಪ್ಪು ಎಂಬಂತೆ ವರದಿಗಳು ಸಹ ಪ್ರಸಾರವಾಗಿವೆ. ಇದರ ವಿರುದ್ಧ ಶಿಲ್ಪಾ ಶೆಟ್ಟಿ ಕೋರ್ಟ್ ಮೆಟ್ಟಿಲೇರಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗಿಲ್ಲ.
ರಾಜ್ ಕುಂದ್ರಾ ಬಂಧನ ಆದಾಗಿನಿಂದಲೂ ಶಿಲ್ಪಾ ಶೆಟ್ಟಿ ಭಾರಿ ಒತ್ತಡದಲ್ಲಿದ್ದು, ಕೆಲವು ದಿನಗಳ ಹಿಂದಷ್ಟೆ ನಿರ್ದೇಶಕ ಹನ್ಸಲ್ ಮೆಹ್ತಾ ಶಿಲ್ಪಾ ಶೆಟ್ಟಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಜೊತೆಗೆ ಇತರ ಸೆಲೆಬ್ರಿಟಿಗಳು ಶಿಲ್ಪಾ ಶೆಟ್ಟಿ ಪರವಾಗಿ ಮಾತನಾಡದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ ನಟಿಯೊಬ್ಬರು ಶಿಲ್ಪಾ ಶೆಟ್ಟಿ ಪರವಾಗಿ ಮಾತನಾಡಿದ್ದಾರೆ.

ರಾಷ್ಟ್ರೀಯ ಕ್ರೀಡೆಯಂತಾಗಿದೆ: ರೀಚಾ
ಬಾಲಿವುಡ್ನ ಪ್ರತಿಭಾವಂತ ನಟಿ ರೀಚಾ ಚಡ್ಡಾ, ಶಿಲ್ಪಾ ಶೆಟ್ಟಿ ಪರವಾಗಿ ಟ್ವೀಟ್ ಮಾಡಿದ್ದಾರೆ. ಹನ್ಸಲ್ ಮೆಹ್ತಾ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ರೀಚಾ ಚಡ್ಡಾ, ''ಪುರುಷರು ಮಾಡುವ ತಪ್ಪಿಗೆ ಮಹಿಳೆಯರನ್ನು ನಿಂದಿಸುವುದು ನಮ್ಮಲ್ಲಿ ರಾಷ್ಟ್ರೀಯ ಕ್ರೀಡೆ ಎಂಬಂತಾಗಿಬಿಟ್ಟಿದೆ. ತಮ್ಮನ್ನು ಅಕಾರಣವಾಗಿ ನಿಂದಿಸುತ್ತಿರುವವರ ವಿರುದ್ಧ ಮೊಕದ್ದಮೆ ಹೂಡಲು ಶಿಲ್ಪಾ ಶೆಟ್ಟಿ ನಿರ್ಧರಿಸಿರುವುದು ಒಳ್ಳೆಯ ಕಾರ್ಯ'' ಎಂದಿದ್ದಾರೆ ರೀಚಾ ಚಡ್ಡಾ.

ಮಹಿಳಾ ಹೋರಾಟಗಾರ್ತಿಯೂ ಆಗಿರುವ ರೀಚಾ
ಅತ್ಯುತ್ತಮ ನಟಿಯಾಗಿರುವ ರೀಚಾ ಚಡ್ಡಾ ಮಹಿಳಾ ಪರ ಹೋರಾಟಗಾರ್ತಿಯೂ ಆಗಿದ್ದಾರೆ. ಮಹಿಳೆಯರ ಮೇಲಿನ ದೈಹಿಕ ದೌರ್ಜನ್ಯದ ಜೊತೆಗೆ ಆನ್ಲೈನ್ನಲ್ಲಿ ನಡೆವ ದೌರ್ಜನ್ಯವನ್ನೂ ಖಂಡಿಸುತ್ತಾ ಬಂದಿದ್ದಾರೆ. ಇದೀಗ ತಮ್ಮದೇ ಉದ್ಯಮದ ಹಿರಿಯ ನಟಿಯ ಮೇಲೆ ಟ್ರೋಲ್ ದಾಳಿ ಆಗುತ್ತಿದ್ದು ಅದನ್ನು ಖಂಡಿಸಿದ್ದಾರೆ ರೀಚಾ ಚಡ್ಡಾ. 'ಗ್ಯಾಂಗ್ಸ್ ಆಫ್ ವಾಸೇಪುರ್', 'ಮಸಾನ್', 'ಸರಬ್ಜೀ೦ತ್', 'ಗೋಲಿಯೋಂಕಿ ರಾಸ್ಲೀಲ ರಾಮ್ಲೀಲ', 'ಪಂಗಾ' ಸಿನಿಮಾಗಳಲ್ಲಿನ ರೀಚಾ ನಟನೆಯ ಜನಪ್ರಿಯ. ಇಂದ್ರಜಿತ್ ಲಂಕೇಶ್ ನಿರ್ದೇಶೀಸಿದ್ದ 'ಶಕೀಲ' ಸಿನಿಮಾದಲ್ಲಿಯೂ ರೀಚಾ ನಟಿಸಿದ್ದಾರೆ.

ಸರಣೀ ಟ್ವೀಟ್ ಮಾಡಿದ್ದ ಹನ್ಸಲ್ ಮೆಹ್ತಾ
ಶಿಲ್ಪಾ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದ ನಿರ್ದೇಶಕ ಹನ್ಸಲ್ ಮೆಹ್ತಾ, ಶಿಲ್ಪಾ ಶೆಟ್ಟಿ ಅವರ ಖಾಸಗಿತನದ ಹಕ್ಕಿಗೆ ಗೌರವ ಕೊಡಿ. ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಆರೋಪಗಳಿಗೆ ಗುರಿ ಆದಾಗ ತೀರ್ಪು ಬರುವ ಮುನ್ನವೇ ಅವರನ್ನು ತಪ್ಪಿತಸ್ಥರು ಎಂದು ತೋರಿಸಲಾಗುತ್ತದೆ. ನಿಮಗೆ ಶಿಲ್ಪಾ ಶೆಟ್ಟಿ ಪರ ನಿಲ್ಲಲು ಸಾಧ್ಯವಿಲ್ಲವಾದರೆ ಆಕೆಯ ಪಾಡಿಗೆ ಆಕೆಯನ್ನು ಬಿಟ್ಟುಬಿಡಿ, ತೀರ್ಪು ಬರುವವರೆಗೆ ಕಾಯಿರಿ'' ಎಂದಿದ್ದರು.

ಬಾಲಿವುಡ್ಡಿಗರ ಮೌನದ ಬಗ್ಗೆ ಹನ್ಸಲ್ ಪ್ರಶ್ನೆ
ಶಿಲ್ಪಾ ಶೆಟ್ಟಿ ಪ್ರಕರಣದಲ್ಲಿ ಮೌನವಹಿಸಿರುವ ಬಾಲಿವುಡ್ ಹಿರಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹನ್ಸಲ್ ಮೆಹ್ತಾ, ''ಒಳ್ಳೆಯ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಪಾರ್ಟಿ ಮಾಡುತ್ತಾರೆ. ಆದರೆ ಕಷ್ಟದ ಸಮಯ ಬಂದಾಗ ಮೌನಕ್ಕೆ ಶರಣಾಗುತ್ತಾರೆ. ಪ್ರಕರಣದ ಅಂತಿಮ ಸತ್ಯ ಏನೇ ಆಗಿರಲಿ, ಶಿಲ್ಪಾ ಶೆಟ್ಟಿಗೆ ಹಾನಿ ಆಗಿಬಿಟ್ಟಿದೆ. ಈ ಹಾನಿ ಆಗಲು ಕಾರಣ ಉದ್ಯಮದ ದೊಡ್ಡವರ ಮೌನ'' ಎಂದಿದ್ದಾರೆ ಹನ್ಸಲ್ ಮೆಹ್ತಾ.

ಮನವಿ ಮಾಡಿರುವ ಶಿಲ್ಪಾ ಶೆಟ್ಟಿ
ರಾಜ್ ಕುಂದ್ರಾ ಬಂಧನವಾದಾಗಿನಿಂದಲೂ ಇದೇ ಮೊದಲ ಬಾರಿಗೆ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಶಿಲ್ಪಾ ಶೆಟ್ಟಿ, ''ಕಳೆದ ಕೆಲವು ದಿನಗಳು ನನಗೆ ತುಂಬಾ ಸವಾಲಿನ ದಿನಗಳಾಗಿವೆ. ಪ್ರತಿಯೊಂದು ವಿಚಾರದಲ್ಲೂ. ಸಾಕಷ್ಟು ವದಂತಿಗಳು ಮತ್ತು ಆರೋಪಗಳು ಬಂದಿವೆ. ಮಾಧ್ಯಮಗಳು ನನ್ನ ಮಾನಹಾನಿ ಮಾಡುತ್ತಿವೆ. ಬಹಳಷ್ಟು ಟ್ರೋಲ್ ಮತ್ತು ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನನಗೆ ಮಾತ್ರವಲ್ಲ ನನ್ನ ಕುಟುಂಬಕ್ಕೂ ಸಹ" ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ನನ್ನ ಹಾಗೂ ಕುಟುಂಬದ ಖಾಸಗಿತನದ ಹಕ್ಕನ್ನು ಗೌರವಿಸಿ: ಶಿಲ್ಪಾ
ಕಾನೂನನ್ನು ಪಾಲಿಸುವ ಭಾರತೀಯ ನಾಗರೀಕಳಾಗಿ ಮತ್ತು ಕಳೆದ 29 ವರ್ಷಗಳಿಂದ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು ಯಾರಿಗೂ ಬೇಸರ ಮಾಡುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಮುಖ್ಯವಾಗಿ ನನ್ನ ಕುಟುಂಬ ಮತ್ತ ನನ್ನ ಹಕ್ಕು ಮತ್ತು ಖಾಸಗಿತನವನ್ನು ಗೌರವಿಸಿ" ಎಂದು ಮನವಿ ಮಾಡಿದ್ದಾರೆ.


Click it and Unblock the Notifications











