ಸೆಲೆಬ್ರಿಟಿ ಆಗಿರುವುದಕ್ಕೆ ತೆರುತ್ತಿರುವ ಬೆಲೆ ಇದು: ಐಟಿ ದಾಳಿ ಬಗ್ಗೆ ತಾಪ್ಸಿ ಪನ್ನು ಮಾತು
ಬಾಲಿವುಡ್ ನಟಿ ತಾಪ್ಸಿ ಪನ್ನು ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಮಾರ್ಚ್ 3 ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಈ ದಾಳಿಯು ಉದ್ದೇಶಪೂರ್ವಕ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಐಟಿ ದಾಳಿಯ ಬಗ್ಗೆ ಕೆಲವು ದಿನಗಳ ಹಿಂದೆ ವ್ಯಂಗ್ಯದ ಟ್ವೀಟ್ ಮಾಡಿದ್ದ ನಟಿ ತಾಪ್ಸಿ ಪನ್ನು ಇದೀಗ, ಮಾಧ್ಯಮಗಳ ಬಳಿ ಇದೇ ವಿಷಯದ ಕುರಿತು ಮಾತನಾಡಿದ್ದಾರೆ.
'ನಾನು ತಪ್ಪು ಮಾಡಿದ್ದಲ್ಲಿ ಶಿಕ್ಷೆ ಅನುಭವಿಸಲು ತಯಾರಾಗಿದ್ದೇನೆ. ಇದು ಆದಾಯ ತೆರಿಗೆ ದಾಳಿ, ಇಲ್ಲಿ ಎಲ್ಲವೂ ನಿಯಮದಂತೆ ನಡೆಯುತ್ತದೆ. ಇದೀಗ ಅವರು ನಿಯಮದಂತೆ ದಾಳಿ ಮಾಡಿದ್ದಾರೆ, ಮುಂದಿನ ಪ್ರಕ್ರಿಯೆಗಳು ಹಾಗೆಯೇ ನಡೆಯುವ ವಿಶ್ವಾಸವಿದೆ' ಎಂದು ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ತಾಪ್ಸಿ.

'ನಾನು ಏನೂ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ದಾಳಿಯ ವೇಳೆ ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ. ನಾನು ಮೋಸ ಮಾಡಿದ್ದರೆ, ಸರ್ಕಾರದಿಂದ ಏನಾದರೂ ಮುಚ್ಚಿಟ್ಟಿದ್ದರೆ ಅದೆಲ್ಲವೂ ಬಹಿರಂಗವಾಗಲಿದೆ. ಒಂದೊಮ್ಮೆ ನಾನು ತಪ್ಪು ಮಾಡಿರುವುದು ಸಾಬೀತಾದಲ್ಲಿ ಶಿಕ್ಷೆ ಅನುಭವಿಸಲು ತಯಾರಿದ್ದೇನೆ' ಎಂದಿದ್ದಾರೆ ತಾಪ್ಸಿ.
'ಇದು ಸಾಮಾನ್ಯ ಐಟಿ ದಾಳಿ ಅಷ್ಟೆ ಇದನ್ನು ಉದ್ರಿಕ್ತಗೊಳಿಸಿ ತೋರಿಸುವ ಅಗತ್ಯವಿಲ್ಲ' ಎಂದು ಹೇಳಿಕೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಾತಿಗೆ ತಾಪ್ಸಿ ಪನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ನನ್ನ ದೆಹಲಿ, ಮುಂಬೈ ಮನೆಗಳ ಮೇಲೆ ದಾಳಿ ಮಾಡಿದ್ದರು. ಕಚೇರಿಗಳು, ನನ್ನ ವ್ಯವಸ್ಥಾಪಕನ ಕಚೇರಿ ಹಾಗೂ ಮನೆಯ ಮೇಲೂ ದಾಳಿ ಮಾಡಲಾಗಿದೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನನ್ನ ಕುಟುಂಬದವರಿಗಂತೂ ಇದು ತೀವ್ರ ಆತಂಕ ತಂದಿತ್ತು. ಆದರೆ ಸಾವರಿಸಿಕೊಂಡು ನಾವೆಲ್ಲರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಿದೆವು' ಎಂದಿದ್ದಾರೆ ತಾಪ್ಸಿ.
'ಜೀವನದಲ್ಲಿ ಏನು ಬೇಕಾದರೂ ಆಗಬಹುದು ಎಂಬುದನ್ನು ಕೆಲವು ತಿಂಗಳಿನಿಂದ ಅರಿತುಕೊಂಡಿದ್ದೇನೆ. ಸೆಲೆಬ್ರಿಟಿ ಆಗಿರುವುದಕ್ಕೆ, ಸತ್ಯ ಮಾತನಾಡುವುದಕ್ಕೆ ತೆರಬೇಕಾದ ದಂಡ ಇದು ಎನಿಸುತ್ತದೆ. ನಾನಂತೂ ಧೈರ್ಯವಾಗಿದ್ದೇನೆ. ತಪ್ಪು ಮಾಡಿದವರಿಗಷ್ಟೆ ಹೆದರಿಕೆ ಇರುತ್ತದೆ' ಎಂದಿದ್ದಾರೆ ತಾಪ್ಸಿ ಪನ್ನು.
ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಅವರುಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ಮುಗಿದ ಮರು ದಿನವೇ ಇಬ್ಬರೂ ತಮ್ಮ ಹೊಸ ಸಿನಿಮಾ 'ದೊಬಾರಾ' ದ ಚಿತ್ರೀಕರಣದಲ್ಲಿ ಭಾಗಿಯಾದರು.


Click it and Unblock the Notifications











