"ರಾಮ, ರಾವಣ, ಸೀತೆ ತೋರಿಸಿ ರಾಮಾಯಣ ಅಲ್ಲ ಅಂತೀರಾ?" ಚಾಟಿ ಬೀಸಿದ ಅಲಹಾಬಾದ್ ಹೈ ಕೋರ್ಟ್
'ಆದಿಪುರುಷ್' ಸಿನಿಮಾ ಬಿಡುಗಡೆಯಾಗಿ 2 ವಾರ ಕಳೆದರೂ ವಿವಾದ ಮಾತ್ರ ತಣ್ಣಗಾಗುತ್ತಿಲ್ಲ. ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ಸಂಬಂಧ ಕೋರ್ಟ್ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಹ ದಾಖಲಾಗಿವೆ. ಸದ್ಯ ಅಲಹಾಬಾದ್ ಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಿ ಸೆನ್ಸಾರ್ ಮಂಡಳಿಗೆ ಚಾಟಿ ಬೀಸಿದೆ.
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದಾರೆ. ರಾಮಾಯಣ ಕಾವ್ಯ ಆಧರಿಸಿ 500 ಕೋಟಿಗೂ ಅಧಿಕ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಮೂಲ ರಾಮಾಯಣದಲ್ಲಿರುವ ಇರುವಂತಹ ಪಾತ್ರಗಳನ್ನು ಚಿತ್ರದಲ್ಲಿ ತಿರುಚಿ ತೋರಿಸಲಾಗಿದೆ ಎನ್ನುವ ಆರೋಪ ಕೇಳಿಬರುತ್ತಲೇ ಇದೆ. ಪ್ರೇಕ್ಷಕರು ಇದೇ ಕಾರಣಕ್ಕೆ ಸಿನಿಮಾ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಾಕ್ಸಾಫೀಸ್ನಲ್ಲೂ ಚಿತ್ರಕ್ಕೆ ಹಿನ್ನಡೆಯಾಗಿದೆ. ಇನ್ನು 'ಆದಿಪುರುಷ್' ಸಿನಿಮಾ ಬ್ಯಾನ್ ಮಾಡುವಂತೆ ಪಿಟಿಷನ್ಗಳು ದಾಖಲಾಗಿದೆ.

ಆದಿಪುರುಷ್ ಸಿನಿಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಹಾಗೂ ಆಕ್ರೋಶ ವ್ಯಕ್ತವಾದ ಡೈಲಾಗ್ಗಳ ಬಗ್ಗೆ ಅಲಹಾಬಾದ್ ಹೈಕೋರ್ಟ್ ಚಿತ್ರತಂಡವನ್ನು ಪ್ರಶ್ನಿಸಿದೆ. ಈ ಪ್ರಕರಣದಲ್ಲಿ ಸಂಭಾಷಣೆಕಾರ ಮನೋಜ್ ಮುಂತಾಶೀರ್ನ ಕೂಡ ಸೇರಿಸುವಂತೆ ಕೋರ್ಟ್ ಸೂಚಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಮನೋಜ್ಗೆ ನೋಟಿಸ್ ಜಾರಿ ಮಾಡಿದೆ. ವಾರದಲ್ಲಿ ಉತ್ತರಿಸುವಂತೆ ಆದೇಶಿಸಿದೆ.
ಹಿಂದೂಗಳ ಸಹನೆ ಪರೀಕ್ಷಿಸಬಾರದು
"ರಾಮಾಯಣ ನಮಗೆ ಆದರ್ಶ. ಜನ ಮನೆಯಿಂದ ಹೊರಡುವ ಮೊದಲು ರಾಮನ ಚರಿತ್ರೆ ಓದುತ್ತಾರೆ. ಸಿನಿಮಾ ಸಂಭಾಷಣೆಯೇ ದೊಡ್ಡ ಸಮಸ್ಯೆ. ಸಿನಿಮಾಗಳು ಕೆಲ ವಿಚಾರಗಳನ್ನು ಟಚ್ ಮಾಡದೇ ಇರುವುದೇ ಒಳಿತು. ಹಿಂದೂ ಧರ್ಮಕ್ಕೆ ಸೇರಿದ ಜನರು ತುಂಬಾ ಸಹನೆಯಿಂದ ಇರುತ್ತಾರೆ. ಇದನ್ನು ಕೂಡ ಪರೀಕ್ಷೆಸ್ತಾರಾ? ಎಂದು ಈ ಸಂದರ್ಭದಲ್ಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸೆನ್ಸಾರ್ ಬೋರ್ಡ್ ತನ್ನ ಜವಾಬ್ದಾರಿಯನ್ನು ಸರಿಯಾಗಿ ಪೂರೈಸಿದ್ಯಾ?" ಎಂದು ಈ ಸಂದರ್ಭದಲ್ಲಿ ನ್ಯಾಯಾಲಯ ಪ್ರಶ್ನಿಸಿದೆ.
ಇದು ಬಹಳ ಗಂಭೀರವಾದ ವಿಷಯ
"ಸಿನಿಮಾ ನೋಡಿ ಜನರು ಶಾಂತಿಭದ್ರತೆಗೆ ಧಕ್ಕೆ ತರದೇ ಇರುವುದು ವಿಶೇಷ. ಏನೂ ಆಗುವುದಿಲ್ಲ ಧೈರ್ಯದಿಂಧ ಚಿತ್ರದಲ್ಲಿ ಹನುಮಂತ ಮತ್ತು ಸೀತೆಯನ್ನು ತೋರಿಸಲಾಗಿದೆ. ಈ ಅಂಶಗಳನ್ನು ಮೊದಲೇ ಚಿತ್ರದಿಂದ ತೆಗೆದು ಹಾಕಬೇಕಿತ್ತು. ಕೆಲವು ದೃಶ್ಯಗಳು ಸರಿಯಿಲ್ಲ. ಇಂತಹ ಸಿನಿಮಾಗಳನ್ನು ನೋಡುವುದು ತುಂಬಾ ಕಷ್ಟ. ಇದು ಬಹಳ ಗಂಭೀರವಾಗಿ ಪರಿಗಣಿಸುವಂತಹ ವಿಷಯ. ಸೆನ್ಸಾರ್ ಮಂಡಳಿ ಈ ವಿಚಾರದಲ್ಲಿ ಏನು ಮಾಡಿದೆ?

ಡೈಲಾಗ್ಸ್ ತೆಗೆದರೆ ಸಾಲಲ್ಲ
ಚಿತ್ರದಲ್ಲಿ ವಿವಾದಾತ್ಮಕ ಡೈಲಾಗ್ಸ್ ತೆಗೆದು ಹಾಕಲಾಗಿದೆ ಎಂದು ಡೆಪ್ಯುಟಿ ಸೋಲಿಯಿಟರ್ ಜನರಲ್ ಕೋರ್ಟ್ಗೆ ತಿಳಿಸಿದ್ದಾರೆ. ಈ ಸಂಬಂಧ ಕೋರ್ಟ್ ಸ್ಪಂದನಿ "ಅದರಿಂದ ಮಾತ್ರ ಪ್ರಯೋಜನ ಇಲ್ಲ. ಸಿನಿಮಾದಲ್ಲಿನ ಸನ್ನಿವೇಶಗಳ ಬಗ್ಗೆ ಏನು ಮಾಡುತ್ತೀರಾ ಅನ್ನುವುದರ ಮೇಲೆ ಕ್ರಮ ಕೈಗೊಳ್ಳಿ. ಆಗ ನಾವು ಏನು ಮಾಡಬೇಕೋ ಅದನ್ನು ಮಾಡಬಹುದು. ಒಂದು ವೇಳೆ ಸಿನಿಮಾ ಪ್ರದರ್ಶನ ನಿಂತರೆ ಪ್ರೇಕ್ಷಕರ ಮನೋಭಾವಕ್ಕೆ ಧಕ್ಕೆಯಾಗಿದ್ದಕ್ಕೆ ಕೊಂಚ ಪರಿಹಾರ ಸಿಗಬಹುದು"
ದೇಶವಾಸಿಗಳು, ಯುವಕರು ದಡ್ಡರಲ್ಲ
ಇನ್ನು ವಿಚಾರಣೆ ವೇಳೆ ಪ್ರತಿವಾದಿಗಳು ಡಿಸ್ಕ್ಲಮೈರ್ ಹಾಕಿದ್ದಾರೆ ಎನ್ನುವ ಮಾತಿಗೆ ಪೀಠ "ಡಿಸ್ಕ್ಲಮೈರ್ ಹಾಕಿದ ಮಾತ್ರಕ್ಕೆ ರಾಮ, ಸೀತೆ, ಲಂಕೆ, ಹನುಮಂತನನ್ನು ತೋರಿಸಿ ರಾಮಾಯಣ ಅಲ್ಲ ಎಂದರೆ ಕೇಳಲು ದೇಶವಾಸಿಗಳು ಹಾಗೂ ಯುವಜನತೆ ದಡ್ಡರು ಎಂದುಕೊಂಡಿದ್ದೀರಾ? ಎಂದು ಕೋರ್ಟ್ ತಿರುಗೇಟು ನೀಡಿದೆ.


Click it and Unblock the Notifications











