"ಇದು 'ಆದಿಪುರುಷ್'.. ರಾಮಾಯಣ ಅಲ್ಲ.. ರಾಮಾಯಣ ಅಂತ ನಾವು ಹೇಳಲೇಯಿಲ್ಲ": ವರಸೆ ಬದಲಿಸಿದ ಚಿತ್ರತಂಡ
ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ರಾಮಾಯಣವನ್ನು ವಕ್ರೀಕರಿಸಿ ತಮಗೆ ಇಷ್ಟಬಂದಂತೆ ಸಿನಿಮಾ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಚಿತ್ರತಂಡ ತನ್ನ ವರಸೆ ಬದಲಿಸಿದೆ.
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರವನ್ನು ಬರೋಬ್ಬರಿ 500 ಕೋಟಿ ರೂ. ಬಜೆಟ್ನಲ್ಲಿ ತೆರೆಗೆ ತರಲಾಗಿದೆ. ಇಂದಿನ ತಂತ್ರಜ್ಞಾನವನ್ನು ಆಧರಿಸಿ ಚಿತ್ರವನ್ನು ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಆದರೆ ಈ ಹಾದಿಯಲ್ಲಿ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಸಿನಿಮಾ ಮಾಡಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾ ನೋಡಿದವರು ಕೆಂಡಾಮಂಡಲವಾಗಿದ್ದಾರೆ. ಹಣದ ಆಸೆಗೆ ಏನು ಬೇಕಾದರೂ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ದೆಹಲಿ ಹೈಕೋರ್ಟ್ನಲ್ಲಿ ಪಿಐಎಲ್ಗೂ ಸಹ ದಾಖಲಾಗಿದೆ.

ಟೀಕೆ ಎದುರಾಗುತ್ತದೆ ಎನ್ನುವ ಕಾರಣಕ್ಕೋ ಏನೋ ಸಿನಿಮಾ ಬಗ್ಗೆ ಚಿತ್ರತಂಡ ಪ್ರಚಾರ ಮಾಡುವ ಗೋಜಿಗೆ ಹೋಗಲಿಲ್ಲ. ಇಷ್ಟೆಲ್ಲಾ ಟೀಕೆ ಎದುರಾಗುತ್ತಿರುವ ಸಮಯದಲ್ಲಿ ಚಿತ್ರದ ಹಿಂದಿ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ. ನಾವು ತಪ್ಪು ಮಾಡೇಯಿಲ್ಲ ಎನ್ನುವಂತೆ ಮಾತು ಬದಲಿಸಿದ್ದಾರೆ.

ಆಜ್ತಕ್ ಸುದ್ದಿವಾಹಿನಿಯ ನೇರ ಸಂದರ್ಶನದಲ್ಲಿ ಭಾಗಿ ಆಗಿರುವ ಮನೋಜ್ ಮುಂತಶೀರ್ ನಾವು ರಾಮಾಯಣ ಸಿನಿಮಾ ಮಾಡಿಲ್ಲ ಎಂದಿದ್ದಾರೆ. ಮನೋಜ್ ಹೇಳಿಕೆ ಬಗ್ಗೆ ಮತ್ತೆ ಟೀಕೆ ವ್ಯಕ್ತವಾಗುತ್ತಿದೆ. "ಸಿನಿಮಾ ಹೆಸರೇನು ಹೇಳಿ. ಆದಿಪುರುಷ್. ನಾವು ಆದಿಪುರುಷ್ ಸಿನಿಮಾ ಮಾಡಿದ್ದೀವಿ. ಮತ್ತೆ ಮತ್ತೆ ಹೇಳ್ತಿದ್ದೀವಿ ನಾವು ರಾಮಾಯಣ ಸಿನಿಮಾ ಮಾಡಿಲ್ಲ" ಎಂದಿದ್ದಾರೆ.
ನಾವು ರಾಮಾಯಣ ಸಿನಿಮಾ ಮಾಡಿಲ್ಲ
ಮನೋಜ್ ಮಾತನಾಡುತ್ತಾ " ನಾನು ಈ ಹಿಂದೆ ಕೂಡ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನಾವು ರಾಮಾಯಣ ಸಿನಿಮಾ ಮಾಡಿಲ್ಲ. ನಾವು ರಾಮಾಯಣದಿಂದ ತುಂಬಾ ಸ್ಫೂರ್ತಿ ಪಡೆದಿದ್ದೇವೆ. ನಾವು ಹಾಕಿರುವ ಡಿಸ್ಕ್ಲೈಮರ್ನಲ್ಲೂ ಅದನ್ನೇ ಹೇಳಿದ್ದೇವೆ. ಮಾರ್ಕೆಟಿಂಗ್ ಸ್ಟ್ರಾಟರ್ಜಿ ಸಮಯದಲ್ಲೂ 'ಆದಿಪುರುಷ್' ರಾಮಾಯಣ ಎನ್ನಲಿಲ್ಲ. ನಾವು ಆರಂಭದಿಂದಲೂ ಹೇಳುತ್ತಿರುವುದು ಒಂದೇ ರಾಮಾಯಣದಿಂದ ಪ್ರೇರಣೆಗೊಂಡಿದ್ದೇವೆ."
ಸಂಪೂರ್ಣ ರಾಮಾಯಣ ಅಲ್ಲ
"ನಾವು ರಾಮಾಯಣ ಸಿನಿಮಾ ಮಾಡಿಲ್ಲ. ನಾವು ಅದನ್ನೇ ಹೇಳಿದ್ದೇವೆ. ನಾವು ಸಂಪೂರ್ಣ ರಾಮಾಯಣ ಕೂಡ ಮಾಡಿಲ್ಲ. ರಾಮಾಯಣದ ಯುದ್ಧಕಾಂಡದ ಸಣ್ಣ ಕಥೆ ಮಾತ್ರ ಸಿನಿಮಾದಲ್ಲಿದೆ" ಎಂದು ಮನೋಜ್ ಹೇಳಿದ್ದಾರೆ. ಆತನ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಸಿನಿಮಾ ರಿಲೀಸ್ ಬಳಿಕ ನಟ ಪ್ರಭಾಸ್ ಸೇರಿದಂತೆ ಇಡೀ ಚಿತ್ರತಂಡ ಸೈಲೆಂಟ್ ಆಗಿದೆ. ಥಿಯೇಟರ್ಗಳಲ್ಲಿ ಹನುಮಂತನಿಗಾಗಿ ಮೀಸಲಿಟ್ಟ ಸೀಟ್ಗಳಲ್ಲಿ ಹನುಮಂತನ ಫೋಟೊ ಇಟ್ಟು ಪೂಜೆ ಮಾಡಿರುವ ಫೋಟೊ ಹಂಚಿಕೊಂಡು ಓಂ ರಾವುತ್ 'ಜೈ ಶ್ರೀರಾಮ್' ಎಂದು ಬರೆದುಕೊಂಡಿದ್ದರು.
140 ಕೋಟಿ ರೂ. ಕಲೆಕ್ಷನ್
ಮಿಶ್ರಪ್ರತಿಕ್ರಿಯೆ ನಡುವೆಯೂ ಮೊದಲ ದಿನವೇ ಸಿನಿಮಾ ಬರೋಬ್ಬರಿ 140 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. 'ಆದಿಪುರುಷ್' ಡಿವೈನ್ ಹಿಟ್ ಎಂದು ಚಿತ್ರತಂಡ ಹೇಳಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿತ್ತು. ಇತ್ತೀಚಿನ ದಿನಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಬರದ ಹಿನ್ನಲೆಯಲ್ಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದರು.
ಅಜ್ಞಾತರಾದ ಪ್ರಭಾಸ್
'ಆದಿಪುರುಷ್' ಸಿನಿಮಾ ಸಾಮಾನ್ಯ ಪ್ರೇಕ್ಷಕರಿಗೆ ಮಾತ್ರವಲ್ಲ, ಪ್ರಭಾಸ್ ಅಭಿಮಾನಿಗಳಿಗೂ ಇಷ್ಟವಾಗಿಲ್ಲ. ಎಂತಹ ಸಿನಿಮಾ ಮಾಡ್ಬಿಟ್ಟೆ ಡಾರ್ಲಿಂಗ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಭಾಸ್ ಕಳೆದ ಮೂರು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಯುಎಸ್ನಲ್ಲಿ ಸ್ನೇಹಿತರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಆ ಬಗ್ಗೆ ಖಚಿತ ಮಾಹಿತಿ ಇಲ್ಲ. ಇನ್ನು ಈ ಸಿನಿಮಾ ಬಗ್ಗೆ ಮುಂದೆ ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











