"ನನ್ನ ಡಿಸೈನ್ ಕದ್ದಿದ್ದಾರೆ, ಅದ್ಕೆ 'ಆದಿಪುರುಷ್' ಚಿತ್ರಕ್ಕೆ ಪದೇ ಪದೇ ಪೆಟ್ಟು ಬೀಳ್ತಿದೆ": ಕಾನ್ಸೆಪ್ಟ್ ಆರ್ಟಿಸ್ಟ್
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಒಂದಿಲ್ಲೊಂದು ವಿವಾದದಿಂದ ಪದೇ ಪದೇ ಸುದ್ದಿ ಆಗುತ್ತಲೇ ಇದೆ. ಟೀಸರ್ ರಿಲೀಸ್ ಆದ ಕ್ಷಣದಿಂದ ವಿವಾದಗಳು ಚಿತ್ರವನ್ನು ಬೆಂಬಿಡದೇ ಕಾಡುತ್ತಿದೆ. ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ ಈ ಪೌರಾಣಿಕ ಕಥಾಹಂದರದ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇದೀಗ ಸಿನಿಮಾ ಪೋಸ್ಟರ್ ಬಗ್ಗೆ ಕೃತಿಚೌರ್ಯದ ಆರೋಪ ಕೇಳಿಬಂದಿದೆ.
ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ 'ಆದಿಪುರುಷ್' ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದರೆ ಕೃತಿ ಸನೂನ್ ಸೀತಾಮಾತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿಖಾನ್ ರಾವಣಾಸುರನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಚಿತ್ರದಲ್ಲಿ ರಾಮ, ಹನುಮಂತ, ರಾವಣನ ಪಾತ್ರಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.

ಇತ್ತೀಚೆಗೆ ರಾಮನವಮಿ ವಿಶೇಷವಾಗಿ ರಿಲೀಸ್ ಆದ ಪೋಸ್ಟರ್ ಬಗ್ಗೆಯೂ ಕೆಲವರು ಚಕಾರ ಎತ್ತಿದ್ದರು. ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ಸಿನಿಮಾ ರೀ ವರ್ಕ್ ಕಾರಣಕ್ಕೆ ಜೂನ್ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇದಲ್ಲದರ ನಡುವೆ ಈಗ ಕಾನ್ಸೆಪ್ಟ್ ಆರ್ಟಿಸ್ಟ್ ಪ್ರತೀಕ್ ಸಂಗರ್ ಎಂಬುವವರು ಸಿನಿಮಾ ಪೋಸ್ಟರ್ ವಿಚಾರದಲ್ಲಿ ಕೃತಿಚೌರ್ಯದ ಆರೋಪ ಮಾಡಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಅನುಮತಿ ಇಲ್ಲದೇ 'ಆದಿಪುರುಷ್' ಚಿತ್ರತಂಡದವರು ನನ್ನ ಡಿಸೈನ್ ಕದ್ದಿದ್ದಾರೆ ಎಂದು ಪ್ರತೀಕ್ ಸಂಗರ್ ಆರೋಪಿಸಿದ್ದಾರೆ."ನಾನು ಭಾರತದ ಆರ್ಟಿಸ್ಟ್. ರಾಮಾಯಣದ ಶ್ರೀರಾಮನ ರೂಪಕ್ಕಾಗಿ ಅನ್ವೇಷಣೆ ಆರಂಭಿಸಿದೆ. ಕಳೆದ ವರ್ಷವೇ ಇದು ನಡೀತು. 'ಆದಿಪುರುಷ್' ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವ ಆರ್ಟಿಸ್ಟ್ ನನ್ನ ಕಲೆಯನ್ನು ಕಾಪಿ ಮಾಡಿದ್ದಾರೆ. ನನಗೆ ಯಾವುದೇ ಮಾಹಿತಿ ನೀಡಿದೇ ತಮ್ಮದೇ ಎನ್ನುವಂತೆ ಹೇಳಿಕೊಂಡಿದ್ದಾರೆ. ಈ ಪ್ರಾಜೆಕ್ಟ್ಗೆ ಪೆಟ್ಟು ಬೀಳಲು ಇದು ಕೂಡ ಒಂದು ಕಾರಣ."
"ಈ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಒಳ್ಳೆ ಅಭಿರುಚಿಯೇ ಇಲ್ಲ. ಅದಕ್ಕೆ ಇಂತಹ ಚೀಪ್ ಟ್ರಿಕ್ಸ್ ಬಳಸುತ್ತಿದ್ದಾರೆ. ಅವರು ಆರ್ಟ್ವರ್ಕ್ ತೆಗೆದಯದೇ ಇದ್ದರೆ ನನ್ನ ಆರ್ಟ್ ವರ್ಕ್ನ ಲಿಂಕ್ ಕೊಡ್ತೀನಿ. ನಾನು ಈಗಾಗಲೇ ಸ್ಕ್ರೀನ್ಶಾಟ್ ತಗೆದುಕೊಂಡಿದ್ದೇನೆ. ಯಾಕಂದರೆ ನನಗೆ ಗೊತ್ತು ಅವರು ಇದನ್ನು ತೆಗೆದು ಏನು ಮಾಡೇಇಲ್ಲ ಎನ್ನುಬಹುದು" ಎಂದು ಪ್ರತೀಕ್ ಬರೆದುಕೊಂಡಿದ್ದಾರೆ. ಸದ್ಯ ಈ ಆರೋಪಕ್ಕೆ ಚಿತ್ರತಂಡ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕಿ.
'ಆದಿಪುರುಷ್' ಚಿತ್ರದಲ್ಲಿ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ಮಿಂಚಿದ್ದು, ದೇವದತ್ ನಾಗೆ ಹನುಮಂತನಾಗಿ ಕಾಣಿಸಿಕೊಂಡಿದ್ದಾರೆ. 500 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಪಂಚದ ನಾನಾ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆಯಾಗಲಿದೆ. ತ್ರೀಡಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಟೀಸರ್ ನೋಡಿದ ಮೇಲೆ ಗ್ರಾಫಿಕ್ಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಗ್ರಾಫಿಕ್ಸ್ ಬದಲಿಸುವ ಕೆಲಸ ನಡೀತಿದೆ. ಹಾಗಾಗಿ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ.
ಈ ಹಿಂದೆ 'ತಾನಾಜಿ' ಸಿನಿಮಾ ಕಟ್ಟಿಕೊಟ್ಟಿದ್ದ ಓಂ ರಾವುತ್ 'ಆದಿಪುರುಷ್' ಸಿನಿಮಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅಜಯ್ ಅತುಲ್ ಸಂಗೀತ, ಕಾರ್ತಿಕ್ ಪಳನಿ ಛಾಯಾಗ್ರಹಣ ಚಿತ್ರಕ್ಕಿದೆ. 3 ವರ್ಷಗಳ ಹಿಂದೆ ಘೋಷಣೆಯಾಗಿದ್ದ ಸಿನಿಮಾ ಚಿತ್ರೀಕರಣ ಬೇಗ ಮುಗಿದಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ತಡವಾಯಿತು. ಟೀಸರ್ ಟ್ರೋಲ್ಗೆ ಗುರಿಯಾಗಿದ್ದರಿಂದ ಮತ್ತಷ್ಟು ತಡವಾಗುವಂತಾಯಿತು.


Click it and Unblock the Notifications











