"ನಾನು ಕೂಡ ಒಬ್ಬ ಹಿಂದೂ.. ನಮ್ ಸಿನ್ಮಾ ಡೈಲಾಗ್ಸ್ ಕೇಳಿ ನಂಗೆ ನೋವಾಯ್ತು" ಎಂದ 'ಆದಿಪುರುಷ್' ಕುಂಭಕರ್ಣ
ಇತ್ತೀಚಿನ ವರ್ಷಗಳಲ್ಲಿ 'ಆದಿಪುರುಷ್' ರೀತಿ ಚಿತ್ರವಿಚಿತ್ರ ಕಾರಣಗಳಿಗೆ ಟೀಕೆಗೆ ಒಳಗಾದ ಮತ್ತೊಂದು ಸಿನಿಮಾ ಇಲ್ಲ ಎನ್ನಿಸುತ್ತದೆ. ಸಿನಿಮಾ ಬಗ್ಗೆ ಆಕ್ರೋಶ ಮುಂದುವರೆಸಿದೆ. ಅಲಹಾಬಾದ್ ಹೈ ಕೋರ್ಟ್ ಅಂತೂ ಚಿತ್ರತಂಡ ಹಾಗೂ ಸೆನ್ಸಾರ್ ಮಂಡಳಿಗೆ ಛೀಮಾರಿ ಹಾಕಿದೆ. "ಕುರಾನ್ ಬಗ್ಗೆ ಇದೇ ರೀತಿ ಒಂದು ಡಾಕ್ಯುಮೆಂಟರಿ ಮಾಡಿ ನೋಡಿ ಏನಾಗುತ್ತದೆ?" ಎಂದು ಕೋರ್ಟ್ ಕುಟುಕಿದೆ.
ರಾಮಾಯಣದ ಪಾತ್ರಗಳನ್ನು ನಿರ್ದೇಶಕ ಓಂ ರಾವುತ್ ಚಿತ್ರದಲ್ಲಿ ತಮ್ಮಗಿಷ್ಟ ಬಂದಂತೆ ತಿದ್ದಿದ್ದಾರೆ. ಕಾಸ್ಟ್ಯೂಮ್, ಲುಕ್, ಡೈಲಾಗ್ಸ್ ಎಲ್ಲದರಲ್ಲೂ ಪ್ರಯೋಗ ಮಾಡಲು ಹೋಗಿ ಎಡವಿದ್ದಾರೆ. ಇದು ರಾಮಾಯಣವನ್ನು ಅದರಲ್ಲಿರುವ ಪಾತ್ರಗಳನ್ನು ದೇವರಂತೆ ಪೂಜಿಸುವ ಹಿಂದೂಗಳ ಭಾವನಗೆ ಧಕ್ಕೆ ತಂದಿದೆ. ಇದೇ ಕಾರಣಕ್ಕೆ ಸಿನಿಮಾ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. 'ಆದಿಪುರುಷ್' ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ೀ ಬಗ್ಗೆ ಮಾತನಾಡದೇ ಮೌನಕ್ಕೆ ಜಾರಿದೆ.

'ಆದಿಪುರುಷ್' ಚಿತ್ರದಲ್ಲಿ ನಟಿಸಿರುವ ಕುಂಭಕರ್ಣ ಪಾತ್ರಧಾರಿ ಲವಿ ಪಜ್ನಿ ಕೂಡ ತಮ್ಮದೇ ಸಿನಿಮಾ ಡೈಲಾಗ್ಸ್ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ರಾವಣನ ಸಹೋದರ ಕುಂಭಕರ್ಣನ ಪಾತ್ರದ ಸಣ್ಣ ಎಪಿಸೋಡ್ ಇದೆ. ಆಜಾನುಬಾಹು ನಟ ಲವಿ ಪಜ್ನಿ ಕುಂಭಕರ್ಣನಾಗಿ ಕಾಣಿಸಿಕೊಂಡಿದ್ದಾರೆ.
ನಾನು ಒಬ್ಬ ಹಿಂದೂ ಆಗಿ ಬೇಸರಸ
"ಚಿತ್ರದ ಚಿತ್ರೀಕರಣ ನಡೆಯುವಾಗ, ಕಲಾವಿದರಿಗೆ ಇಷ್ಟೆಲ್ಲಾ ವಿವಾದ ಸೃಷ್ಟಿಯಾಗುತ್ತದೆ ಎಂದು ಗೊತ್ತಿರಲಿಲ್ಲ. ಚಿತ್ರದ ವಿವಾದಾತ್ಮಕ ಡೈಲಾಗ್ಗಳನ್ನು ಈಗ ತೆಗೆದುಹಾಕಲಾಗಿದೆ. ಆದರೂ, ಒಬ್ಬ ಹಿಂದೂ ಆಗಿ ನನಗೂ ಆ ಡೈಲಾಗ್ಗಳಿಂದ ನೋವಾಗಿದೆ" ಎಂದು ಲವಿ ಪಜ್ನಿ ಹೇಳಿದ್ದಾರೆ. ಹಿಂದಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ಲವಿ ನಟಿಸಿದ್ದಾರೆ. ಸೂಪರ್ ಹಿಟ್ 'ಬಾಹುಬಲಿ' ಚಿತ್ರದ ಕಾಲಕೇಯ ಗುಂಪಿನ ಸದಸ್ಯರಾಗಿ ಇವರು ಅಬ್ಬರಿಸಿದ್ದರು.

ತೆರೆಮೇಲೆ ಏನು ಬರುತ್ತೆ ಗೊತ್ತಿರಲಿಲ್ಲ
"ನಾವು ನಿರ್ದೇಶಕರು ಏನು ಹೇಳಿದರೆ ಅದು ಮಾಡಬೇಕು. ಯಾಕಂದರೆ ಸಿನಿಮಾದಲ್ಲಿ ನಟಿಸಲು ಒಪ್ಪಂದ ಆಗಿರುತ್ತದೆ. ಚಿತ್ರವನ್ನು ಸಣ್ಣ ಸಣ್ಣ ಶೆಡ್ಯೂಲ್ಗಳಲ್ಲಿ ಚಿತ್ರೀಕರಿಸುತ್ತಾ ಹೋದರು. ತೆರೆಮೇಲೆ ಏನು ಬರುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಫೈನಲ್ ಸ್ಕ್ರೀನ್ಪ್ಲೇ ಏನು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ" ಎಂದು ಲವಿ ಪಜ್ನಿ ವಿವರಿಸಿದ್ದಾರೆ. ಒಟ್ನಲ್ಲಿ ತಮ್ಮದೇ ಸಿನಿಮಾ ಬಗ್ಗೆ ನಟ ಹೀಗೆ ಹೇಳಿರುವುದು ಕೆಲವರ ಅಚ್ಚರಿಗೆ ಕಾರಣವಾಗಿದೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ಮನೋಜ್
'ಆದಿಪುರುಷ್' ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಟೀಕೆ ಬಗ್ಗೆ ನಿರ್ದೇಶಕರು, ನಿರ್ಮಾಪಕರು, ಪ್ರಭಾಸ್ ಪ್ರತಿಕ್ರಿಯಿಸಿಲ್ಲ. ಆದರೆ ಹಿಂದಿ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಶುಕ್ಲಾ ಮಾತ್ರ ಮತ್ತಷ್ಟು ವಿವಾದಾತ್ಮಕ ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ನಾವು ರಾಮಾಯಣ ಆಧರಿಸಿ ಸಿನಿಮಾ ಮಾಡಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. "ಹನುಮಂತ ದೇವರಲ್ಲ, ಆತನ ಶ್ರೀರಾಮನ ಭಕ್ತ ಮಾತ್ರ. ನಾವು ಆತನನ್ನು ದೇವರನ್ನಾಗಿ ಮಾಡಿದ್ದೇವೆ" ಎಂದು ಮನೋಜ್ ಹೇಳಿದ್ದು ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು.
ಡೈಲಾಗ್ಸ್ ಬದಲಾವಣೆ
'ಆದಿಪುರುಷ್' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಹನುಮಂತ ಹೇಳುವ ಕೆಲ ಡೈಲಾಗ್ಸ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮಾಸ್ ಸಿನಿಮಾ ಹೀರೊ ರೀತಿಯಲ್ಲಿ ಹನುಮಂತನಿಂದ ಹೇಳಿಸಿದ್ದ ಡೈಲಾಗ್ಸ್ ಕೆಲವರಿಗೆ ಬೇಸರ ತಂದಿತ್ತು. ಕೊನೆಗೆ ಈ ಡೈಲಾಗ್ಸ್ ಚಿತ್ರತಂಡ ಬದಲಿಸಿದೆ. ಈ ಬಗ್ಗೆ ಮನೋಜ್ ಪ್ರತಿಕ್ರಿಯಿಸಿ, "ನಾವೇನು ತಪ್ಪು ಮಾಡಿಲ್ಲ. ಈ ಡೈಲಾಗ್ಸ್ ಬಗ್ಗೆ ಚರ್ಚೆಗೆ ನಾನು ಸಿದ್ಧ, ಆದರೂ ಎಲ್ಲರೂ ಹೇಳುತ್ತಿರುವುದರಿಂದ ಡೈಲಾಗ್ಸ್ ಬದಲಿಸುತ್ತಿದ್ದೇವೆ" ಎಂದಿದ್ದರು.


Click it and Unblock the Notifications











