'ಆದಿಪುರುಷ್' ಸಿನಿಮಾ ಬ್ಯಾನ್ ಮಾಡುವಂತೆ ಅರ್ಜಿ: ದೆಹಲಿ ಹೈಕೋರ್ಟ್ ಹೇಳಿದ್ದೇನು?
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ವಿವಾದ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಟೀಸರ್ ರಿಲೀಸ್ ಆದ ದಿನದಿಂದಲೂ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡ್ತಿದೆ. ಸಿನಿಮಾ ತೆರೆಗೆ ಬಂದು ಮತ್ತಷ್ಟು ವಿವಾದ ಸೃಷ್ಟಿಸಿದೆ. ಕ್ರಿಯೇಟಿವ್ ಲಿಬರ್ಟಿ ಹೆಸರಿನಲ್ಲಿ ಓಂ ರಾವುತ್ ಮನಸ್ಸಿಗೆ ಬಂದಂತೆ ಸಿನಿಮಾ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ.
ರಾಮಾಯಣಕ್ಕೆ ಭಾರತೀಯರಲ್ಲಿ ಶ್ರೇಷ್ಠ ಸ್ಥಾನವಿದೆ. ಆದರೆ ಅದೇ ರಾಮಾಯಣವನ್ನು 'ಆದಿಪುರುಷ್' ಚಿತ್ರದಲ್ಲಿ ತಿರುಚಲಾಗಿದೆ. ಹಾಲಿವುಡ್ ಸಿನಿಮಾ ಛಾಯೆ ಎದ್ದು ಕಾಣುತ್ತಿದೆ. ರಾವಣ, ಹನುಮಂತನ ಪಾತ್ರಗಳನ್ನು ಚಿತ್ರಿಸಿರುವ ಬಗೆ ಬೇಸರ ತರಿಸಿದೆ. ಚಿತ್ರರಂಗದವರೇ ಸಿನಿಮಾ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕೂಡಲೇ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಹೈಕೋರ್ಟ್ ಈ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು.

'ಆದಿಪುರುಷ್ ಸಿನಿಮಾ ಬಿಡುಗಡೆ ಬೆನ್ನಲ್ಲೇ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ದೆಹಲಿ ಹೈಕೋರ್ಟ್ನಲ್ಲಿ ಸ್ವಯಂ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ರಾಮಾಯಣವನ್ನು ತಿರುಚಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಸಿನಿಮಾ ಬ್ಯಾನ್ ಮಾಡಿ ಎಂದು ಆಗ್ರಹಿಸಿದ್ದರು. ಹೈಕೋರ್ಟ್ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವ ಕುತೂಹಲ ಇತ್ತು. ಆದರೆ ವಿಚಾರಣೆಯಲ್ಲಿ ಚಿತ್ರಕ್ಕೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ತರಾತುರಿ ಇಲ್ಲ ಎಂದ ಕೋರ್ಟ್
ಅರ್ಜಿಗೆ ಸಂಬಂಧಿಸಿ ಮತನಾಡಿದ ಹಿಂದೂ ಸೇನಾ ಪರ ವಕೀಲರು "ನೇಪಾಳ ಈ ಚಿತ್ರವನ್ನು ಬ್ಯಾನ್ ಮಾಡಿದೆ. ಚಿತ್ರದಲ್ಲಿ ಸಾಕಷ್ಟು ವಿವಾದಾತ್ಮಕ ಅಂಶಗಳಿವೆ. ಸಿನಿಮಾ ಬಿಡುಗಡೆಗೂ ಮುನ್ನ ಇದನ್ನೆಲ್ಲಾ ತೆಗೆದು ಹಾಕುವುದಾಗಿ ನಿರ್ದೇಶಕರು ಹೇಳಿದ್ದರು. ಆದರೆ ಆ ರೀತಿ ಮಾಡದೇ ಸಿನಿಮಾ ರಿಲೀಸ್ ಮಾಡಿದ್ದಾರೆ. ವಾಲ್ಮೀಕಿ, ತುಳಸಿದಾಸರು ರಚಿಸಿದಂತಹ ರಾಮಾಯಣ ಬಿಟ್ಟು 'ಆದಿಪುರುಷ್' ಎಂದು ಅನುಚಿತ ರೀತಿಯಲ್ಲಿ ಸಿನಿಮಾ ಮಾಡಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು" ಎಂದು ವಾದಿಸಿದ್ದರು.

ವಕೀಲರ ವಾದವನ್ನು ಆಲಿಸಿದ ಕೋರ್ಟ್ ತಕ್ಷಣಕ್ಕೆ ಅರ್ಜಿ ವಿಚಾರಣೆ ನಡೆಸಲು ನಿರಾಕರಸಿದೆ. "ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಸದ್ಯಕ್ಕೆ ತರಾತುರಿ ಏನಿಲ್ಲ. ಜೂನ್ 30ಕ್ಕೆ ಬನ್ನಿ" ಎಂದು ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಸಹಜವಾಗಿಯೇ 'ಆದಿಪುರುಷ್' ಚಿತ್ರಕ್ಕೆ ರಿಲೀಫ್ ಸಿಕ್ಕಂತಾಗಿದೆ. ಇನ್ನು 8 ದಿನಗಳ ಕಾಲ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ.
ಡಲ್ಲಾಯ್ತು 'ಆದಿಪುರುಷ್' ಕಲೆಕ್ಷನ್
ಸಾಕಷ್ಟು ಆಕ್ರೋಶದ ನಡುವೆಯೂ 'ಆದಿಪುರುಷ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಅಷ್ಟೇ ಅಲ್ಲ ಫಸ್ಟ್ ವೀಕೆಂಡ್ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಪ್ರಭಾಸ್ ಕಾರಣಕ್ಕೆ ಸಿನಿಮಾ ಈ ಪಾಟಿ ಗಳಿಕೆ ಕಂಡಿದೆ ಎನ್ನಲಾಗಿತ್ತು. ಆದರೆ ಸೋಮವಾರದ ನಂತರ ಚಿತ್ರಣ ಸಂಪೂರ್ಣ ಬದಲಾಗಿದೆ. ಕಲೆಕ್ಷನ್ ಡಲ್ಲಾಗಿದೆ. ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ.
5 ದಿನಕ್ಕೆ 395 ಕೋಟಿ ಕಲೆಕ್ಷನ್
ಫಸ್ಟ್ ವೀಕೆಂಡ್ನಲ್ಲಿ 340 ಕೋಟಿ ಗಳಿಕೆ ಕಂಡಿದ್ದ 'ಆದಿಪುರುಷ್' ಸಿನಿಮಾ ಸೋಮವಾರ, ಮಂಗಳವಾರ ಗಳಿಸಿದ್ದು ಕೇವಲ 55 ಕೋಟಿ ರೂ. ಮಾತ್ರ. ಅಂದಾಜು 550 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. 5 ದಿನಕ್ಕೆ 395 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ. ಇದರಲ್ಲಿ 180 ಕೋಟಿ ಶೇರ್ ಸಿಕ್ಕಿರುವ ಅಂದಾಜಿದೆ. ಆ ಲೆಕ್ಕದಲ್ಲಿ ಚಿತ್ರತಂಡ ಬಂಡವಾಳ ಪಡೆಯೋದೇ ಕಷ್ಟ ಎನ್ನಲಾಗುತ್ತಿದೆ. ನಾನ್ ಥ್ರಿಯೇಟ್ರಿಕಲ್ ಬ್ಯುಸಿನೆಸ್ ಚೆನ್ನಾಗಿತ್ತು. ಹಾಗಾಗಿ ಲಾಸ್ ಏನೂ ಆಗುವುದಿಲ್ಲ ಎನಿಸುತ್ತಿದೆ. ಆದರೆ ಇಷ್ಟು ದೊಡ್ಡ ಸಿನಿಮಾ ಮಾಡಿ ಚಿತ್ರತಂಡ ಲಾಭ ಗಳಿಸದೇ ಹೋಗಿದ್ದು ವಿಪರ್ಯಾಸ.


Click it and Unblock the Notifications











