"ಆದಿಪುರುಷ್' ಚಿತ್ರದ ಆಕ್ಷೇಪಾರ್ಹ ಡೈಲಾಗ್ಸ್ ತೆಗೆಯುತ್ತೇವೆ": ಕ್ಷಮೆ ಕೇಳದ ಸಂಭಾಷಣೆಕಾರನ ಟ್ವೀಟ್ಗೆ ನೆಟ್ಟಿಗರು ಗರಂ
ಟೀಸರ್ ರಿಲೀಸ್ ಆದ ದಿನದಿಂದಲೂ 'ಆದಿಪುರುಷ್'ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಇದೀಗ ರಿಲೀಸ್ ನಂತರ ಕೂಡ ಸಿನಿಮಾ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗ್ತಿದೆ. ರಾಮಾಯಣ ಕಾವ್ಯವನ್ನು ಚಿತ್ರದಲ್ಲಿ ತಮಗೆ ಇಷ್ಟಬಂದಂತೆ ಓಂ ರಾವುತ್ ಚಿತ್ರಿಸಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಪಾತ್ರಗಳ ವೇಷಭೂಷಣ ಮಾತ್ರವಲ್ಲ ಕೆಲ ಡೈಲಾಗ್ಗಳ ಬಗ್ಗೆ ಕೂಡ ವಿರೋಧ ವ್ಯಕ್ತವಾಗುತ್ತಿದೆ.
ಹನುಮಂತನ ಬಾಯಲ್ಲಿ ಕಮರ್ಷಿಯಲ್ ಚಿತ್ರದಲ್ಲಿ ಮಾಸ್ ಹೀರೊ ಹೇಳುವಂತಹ ಡೈಲಾಗ್ಸ್ ಹೇಳಿಸಲಾಗಿದೆ. ಮತ್ತೊಂದಷ್ಟು ವಿವಾದಾಸ್ಪದ ಸಂಭಾಷಣೆ ಚಿತ್ರದಲ್ಲಿದೆ. "ನಾವು ರಾಮಾಯಣ ಸಿನಿಮಾ ಮಾಡಿಲ್ಲ. ಬರೀ ರಾಮಾಯಣದಿಂದ ಸ್ಪೂರ್ತಿಗೊಂಡು ಈ ಸಿನಿಮಾ ಮಾಡಿದ್ದೀವಿ. ನಾವು ರಾಮಾಯಣ ಆಧರಿಸಿ ಸಿನಿಮಾ ಮಾಡಿದ್ದೀವಿ ಎಂದು ಹೇಳೇಯಿಲ್ಲ" ಎಂದಿದ್ದ ಸಂಭಾಷಣೆಕಾರ ಮನೋಜ್ ಮುಂತಶಿರ್ ಶುಕ್ಲಾ ಈಗ ಡೈಲಾಗ್ಸ್ ಬದಲಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಾಕಷ್ಟು ವಿವಾದ, ಟ್ರೋಲ್, ಟೀಕೆಗೆ ಗುರಿಯಾದರೂ ಸಿನಿಮಾ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೆಲವರು ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಸಿನಿಮಾ ಇಷ್ಟೆ ಟೀಕೆಗೆ ಗುರಿಯಾಗುತ್ತಿದ್ದರೂ ಚಿತ್ರತಂಡ ಮೌನ ವಹಿಸಿದೆ. ಹಿಂದಿ ಸಂಭಾಷಣೆ ಬರೆದ ಮನೋಜ್ ಮುಂತಶಿರ್ ಮಾತ್ರ ತಮ್ಮದೇ ಹೇಳಿಕೆಗೆ ಉಲ್ಟಾ ಹೊಡೆದು ಹೊಸ ಹೇಳಿಕೆ ಕೊಟ್ಟಿದ್ದಾರೆ. ಡೈಲಾಗ್ಸ್ನಲ್ಲಿ ಆಗಿರುವ ತಪ್ಪಿಗೆ ಕ್ಷಮೆ ಕೇಳದೇ ಸರಿಪಡಿಸುವುದಾಗಿ ಹೇಳಿದ್ದಾರೆ.
4000 ಸಾಲು ಸಂಭಾಷಣೆ ಬರೆದಿದ್ದೇನೆ
"ಪ್ರತಿಯೊಂದು ಭಾವೋದ್ವೇಗವನ್ನು ಗೌರವಿಸುವಂತೆ ರಾಮಾಯಣ ಹೇಳುತ್ತದೆ. ಆದಿಪುರುಷ್ ಚಿತ್ರಕ್ಕಾಗಿ ನಾನು 4000 ಸಂಭಾಷಣೆಯ ವಾಕ್ಯಗಳನ್ನು ಬರೆದಿದ್ದೇನೆ. ಆದರೆ ಕೇವಲ 5 ವಾಕ್ಯಗಳು ಮಾತ್ರ ನಿಮ್ಮ ಭಾವನೆಗೆ ಧಕ್ಕೆ ತಂದಿದೆ. ಆದರೆ ಶ್ರೀರಾಮನ ಕುರಿತು, ಸೀತೆಯ ಕುರಿತು ನಾನು ಬರೆದ ಒಳ್ಳೆ ಸಂಭಾಷಣೆಯನ್ನು ಯಾರು ಕೂ ಪ್ರಶಂಸಿಸಲಿಲ್ಲ. ನನ್ನ ಸ್ವಂತದವಬೇ ನನ್ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬರೆದರು. 3 ಗಂಟೆಗಳ ಸಿನಿಮಾದಲ್ಲಿ 3 ನಿಮಿಷಗಳ ಸಂಭಾಷಣೆ ನಿಮಗೆ ಇಷ್ಟವಾಗದಂತೆ ಬರೆದಿದ್ದೇನೆ ಅಷ್ಟಕ್ಕೆ ನನ್ನನ್ನು ಸನಾತನ ದ್ರೋಹಿ ಎನ್ನುತ್ತಿದ್ದೀರಾ."
ಸನಾತನ ಸೇವೆಗಾಗಿ ಈ ಸಿನಿಮಾ
"ನೀವು ಯಾಕೆ ಇಷ್ಟು ಆತುರಪಟ್ಟಿರೋ ಗೊತ್ತಿಲ್ಲ. ಇದೇ ಚಿತ್ರದಲ್ಲಿ ರಾಮನಿಗಾಗಿ ಅದ್ಭುತ ಹಾಡುಗಳನ್ನು ಬರೆದಿದ್ದೇನೆ. ನಾವು ಒಬ್ಬರಿಗೊಬ್ಬರನ್ನು ವಿರೋಧಿಸಿದರೆ ಸನಾತನ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಸನಾತನ ಸೇವೆಗಾಗಿಯೇ ನಾವು 'ಆದಿಪುರುಷ್' ಸಿನಿಮಾ ಸೃಷ್ಟಿಸಿದ್ದು. ನೀವು ಈಗ ನೋಡುತ್ತಿದ್ದೀರ. ಭವಿಷ್ಯದಲ್ಲೂ ನೋಡುತ್ತೀರ ಎಂದಿಕೊಳ್ಳುತ್ತೇನೆ. ನನ್ನ ಸಂಭಾಷಣೆಯನ್ನು ಸರಿ ಎಂದು ನಾನು ಎಷ್ಟು ಬೇಕಾದರೂ ವಾದ ಮಾಡಬಲ್ಲೆ. ಆದರೂ ಅದು ನಿಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಅನ್ನುವುದು ಗೊತ್ತಾಗುತ್ತದೆ."

ಆಕ್ಷೇಪಾರ್ಹ ಡೈಲಾಗ್ಸ್ ಬದಲಿಸುತ್ತೇವೆ
"ನಿಮ್ಮ ಮನಸ್ಸಿಗೆ ನೋವುಂಟು ಮಾಡಿದ ಕೆಲವು ಆಕ್ಷೇಪಾರ್ಹ ಸಂಭಾಷಣೆಯನ್ನು ಮರುಪರಿಶೀಲನೆ ಮಾಡಲು ನಾನು, ನಿರ್ದೇಶಕರು, ಚಿತ್ರತಂಡ ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಡೈಲಾಗ್ಸ್ ಬದಲಿಸಿ, ಇನ್ನೊಂದು ವಾರದಲ್ಲಿ ಅದು ಥಿಯೇಟರ್ಗಳಲ್ಲಿ ಬರುವಂತೆ ಮಾಡುತ್ತೇವೆ" ಎಂದು ಮನೋಜ್ ಮುಂತಶಿರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕೂಡ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನೆಟ್ಟಿಗರ ಅಸಮಾಧಾನ
ಈ ಕ್ಷಣಕ್ಕೂ ಚಿತ್ರತಂಡಕ್ಕೆ ತಮ್ಮ ತಪ್ಪಿನ ಅರಿವಾಗಿಲ್ಲ. ನಾವು ತಪ್ಪೇ ಮಾಡಿಲ್ಲ. ನಿಮ್ಮ ಮನಸ್ಸಿಗೆ ನೋವಾಗಿದೆ. ಹಾಗಾಗಿ ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಚಿತ್ರತಂಡ ಇಷ್ಟೆಲ್ಲಾ ಮೊಂಡುತನ ತೋರಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮನೋಜ್ ಮುಂತಶಿರ್ 'ಆದಿಪುರುಷ್' ಸಿನಿಮಾ ರಿಲೀಸ್ಗೂ ಮುನ್ನ ಇದು ರಾಮಾಯಣ ಆಧರಿಸಿದ ಸಿನಿಮಾ ಎಂದು ಹೇಳಿದ್ದರು. ಆದರೆ ರಿಲೀಸ್ ನಂತರ ಇದು ರಾಮಾಯಣ ಆಧರಿಸಿದ ಸಿನಿಮಾ ಅಲ್ಲ. ನಾವು ಅದನ್ನು ಎಲ್ಲೂ ಹೇಳಿಲ್ಲ ಎಂದಿದ್ದಾರೆ.


Click it and Unblock the Notifications











