ಆದಿಪುರುಷ್ ಟಿಕೆಟ್ ದರ ಮತ್ತಷ್ಟು ಇಳಿಕೆ; ಡೈಲಾಗ್ ಬದಲಿಸಿದ್ದೇವೆ ಥಿಯೇಟರ್ಗೆ ಬನ್ನಿ ಎಂದ ಚಿತ್ರತಂಡ!

ಶುಕ್ರವಾರ ( ಜೂನ್ 16 ) ಬಾಲಿವುಡ್ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಗೊಂಡಿತು. ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಹಾಗೂ ಕೃತಿ ಸೆನನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.
ಮೂಲ ಹಿಂದಿ ಚಿತ್ರವಾಗಿರುವ ಈ ಚಿತ್ರ ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಈ ಚಿತ್ರ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ. ಇನ್ನು ಚಿತ್ರ ಬಿಡುಗಡೆಗೊಂಡು ಮೊದಲ ಪ್ರದರ್ಶನ ಮುಗಿದ ಬೆನ್ನಲ್ಲೇ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡಿತು.
ಬಿಡುಗಡೆಗೂ ಮುನ್ನವೇ ಈ ರೀತಿಯ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಆದಿಪುರುಷ್ ಚಿತ್ರ ಬಿಡುಗಡೆಯಾದ ನಂತರವೂ ಸಹ ಅದೇ ರೀತಿಯ ವಿಮರ್ಶೆಗಳನ್ನು ಪಡೆದುಕೊಂಡಿದೆ. ಹೌದು, ಆದಿಪುರುಷ್ ತನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಕೆಟ್ಟ ಟೀಕೆಗಳನ್ನು ಪಡೆದುಕೊಳ್ತಿದೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಇದು ರಾಮಾಯಣ ಅಲ್ಲ, ಮಾಡರ್ನ್ ಅಪ್ಡೇಟೆಡ್ ರಾಮಾಯಣ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದವು.
ಹೀಗೆ ಮಿಶ್ರ ಪ್ರತಿಕ್ರಿಯೆ ಎಂಬ ಹಿನ್ನಡೆ ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರದ ವಿವಾದಗಳು ಹಲವರ ಮೇಲೆ ಪರಿಣಾಮ ಬೀರಿದ್ದು ಬ್ಯಾನ್ ವಿರೋಧ ಪಡೆದುಕೊಳ್ಳುವಷ್ಟು ಹಿನ್ನಡೆ ಅನುಭವಿಸಿದೆ. ಇಷ್ಟೆಲ್ಲಾ ಚಟುವಟಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಜರುಗುತ್ತಿದ್ದರೆ ಅತ್ತ ಆಫ್ಲೈನ್ನಲ್ಲಿ ಆದಿಪುರುಷ್ ಚಿತ್ರ ನಿನ್ನೆಗೆ ( ಜೂನ್ 25 ) ಹತ್ತು ದಿನಗಳ ಪ್ರದರ್ಶನವನ್ನು ಪೂರೈಸಿದ್ದು, ಚಿತ್ರತಂಡ ಸಿನಿಮಾ 450 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ ಎಂಬುದನ್ನು ಅಧಿಕೃತವಾಗಿ ಘೋಷಿಸಿದೆ.
500 ಕೋಟಿ ಬಜೆಟ್ನಲ್ಲಿ ತಯಾರಾಗಿರುವ ಆದಿಪುರುಷ್ ಇನ್ನೂ ಸಹ ತನ್ನ ಬಜೆಟ್ಗಿಂತ ಹೆಚ್ಚು ಗಳಿಸಲಾಗದೇ ಒದ್ದಾಡುತ್ತಿದೆ. ಹೀಗೆ ಹಿನ್ನಡೆ ಅನುಭವಿಸುತ್ತಿರುವ ಆದಿಪುರುಷ್ ಚಿತ್ರತಂಡ ಸಿನಿ ರಸಿಕರನ್ನು ತನ್ನತ್ತ ಸೆಳೆಯಲು ದುಬಾರಿಯಾಗಿದ್ದ ಟಿಕೆಟ್ ದರವನ್ನು ಇಳಿಸಿದ್ದು, 112 ರೂಪಾಯಿಗಳಿಗೆ ಒಂದು ಟಿಕೆಟ್ ಎಂದು ಘೋಷಿಸಿದೆ. ಜತೆಗೆ ಈ ಘೋಷಣೆಯ ಪೋಸ್ಟರ್ನ ಕೊನೆಯಲ್ಲಿ 'ಎಡಿಟ್ ಮಾಡಲಾದ ಹಾಗೂ ಬದಲಾಯಿಸಿದ ಸಂಭಾಷಣೆಗಳೊಂದಿಗೆ' ಎಂದು ಬರೆದುಕೊಂಡಿದೆ.
ಈ ರೀತಿ ಜನರಿಗೆ ಅನುಕೂಲಕರವಾಗುವಂತಹ ಆಫರ್ ಘೋಷಿಸುವ ಮೂಲಕ ಆದಿಪುರುಷ್ ಚಿತ್ರದ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆಯಲ್ಲಿದೆ. ಒಟ್ಟಿನಲ್ಲಿ ಚಿತ್ರ ನೀರಸ ಗಳಿಕೆ ಕಂಡು ನಷ್ಟದತ್ತ ಹೆಜ್ಜೆ ಹಾಕಿದ್ದು, ಚಿತ್ರತಂಡ ತೀವ್ರ ನಷ್ಟದಿಂದ ಪಾರಾಗಲು ಟಿಕೆಟ್ ದರವನ್ನು ಇಳಿಸಿದೆ.


Click it and Unblock the Notifications











