'ಧುರಂಧರ್ 2’ ಕಥೆ ವಿವಾದ ; ಚಿಂದಿ ಚೋರ್ ಎಂದ ಕನ್ನಡದ ನಿರ್ದೇಶಕನಿಗೆ ಆದಿತ್ಯ ಧರ್ ತಿರುಗೇಟು
ಭಾರತೀಯ ಚಿತ್ರರಂಗದಲ್ಲಿ ಹಲವರಿಗೆ ಕದಿಯುವ ಮನೋವ್ಯಾದಿ ಇದೆ. ಕೆಲವರು ಸಂಗೀತ ಕದ್ದರೆ, ಇನ್ನೂ ಕೆಲವರು ಬೇರೆ ಭಾಷೆಯಲ್ಲಿ ಗಮನ ಸೆಳೆದ ಪೋಸ್ಟರ್ಗಳನ್ನು ಕೂಡ ತಮ್ಮದೇ ವಿನ್ಯಾಸವೆನ್ನುವಂತೆ ತೋರ್ಪಡಿಸುತ್ತಾರೆ. ಮತ್ತೂ ಕೆಲವರು ನಮ್ಮನ್ಯಾರು ಕೇಳ್ತಾರೆ ಎಂಬ ಮನೋಭಾವದಲ್ಲಿ ಕಥೆ ಹೇಳಿದವರ ಅಪ್ಪಣೆಯನ್ನು ಕೂಡ ಕೇಳದೇ ಯಥಾವತ್ತಾಗಿ ನಕಲು ಮಾಡುತ್ತಾರೆ.
ಈ ಸಾಲಿನಲ್ಲಿ ಬಾಲಿವುಡ್ನ ''ಧುರಂಧರ್'' ಆದಿತ್ಯ ಧರ್ ಕೂಡ ಇದ್ದಾರೆ ಎನ್ನುವ ಆರೋಪವನ್ನು ಕೆಲ ದಿನದ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಂತೋಷ್ ಕುಮಾರ್ ಆರ್.ಎಸ್ ಮಾಡಿದ್ದರು. ''ಧುರಂಧರ್'' ಕಥೆ ನನ್ನದು ಎಂದು ಹೇಳಿದ್ದರು. ಆದಿತ್ಯ ಧರ್ ಒಬ್ಬ 'ಚಿಂದಿ ಚೋರ್' ಎಂದು ಕಿಡಿ ಕಾರಿದ್ದರು.

ಮಾಧ್ಯಮದವರ ಎದುರು ನಾನು 2023ರಲ್ಲಿ ಕಷ್ಟಪಟ್ಟು ಈ ಕಥೆ ಬರೆದಿದ್ದೆ ಎಂದು ಹೇಳಿದ್ದ ಸಂತೋಷ್ ಕುಮಾರ್, ಆದಿತ್ಯ ರಾಯ್ ಕಪೂರ್ ಅವರನ್ನು ಈ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಬೇಕೆನ್ನುವ ಉದ್ದೇಶ ನನಗೆ ಇತ್ತು ಎಂದು ಹೇಳಿದ್ದರು.
ಇಂತಹ ದೊಡ್ಡ ಚಿತ್ರಕ್ಕೆ ದೊಡ್ಡ ಸಂಸ್ಥೆಯ ಬೆಂಬಲ ಬೇಕು, ಈ ಹಿನ್ನೆಲೆ ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸೀರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ನಂತಹ ದೊಡ್ಡ ಸಂಸ್ಥೆಗಳ ಜೊತೆ ಚರ್ಚೆ ಮಾಡಿರುವುದಾಗಿಯೂ ಹೇಳಿದ್ದ ಸಂತೋಷ್ ಕುಮಾರ್ ನವೆಂಬರ್ 2023 ರಲ್ಲೇ 'ಸ್ಕ್ರೀನ್ರೈಟರ್ಸ್ ಅಸೋಸಿಯೇಷನ್' (SWA) ನಲ್ಲಿ ನಾನು ಈ ಕಥೆ ನೋಂದಣಿ ಮಾಡಿಸಿದ್ದೆ ಎಂದಿದ್ದರು. ತಮ್ಮ ಈ ಆರೋಪಗಳಿಗೆ ತಮ್ಮ ಬಳಿ ಪುರಾವೆಗಳಿವೆ ಎಂದು ಕೂಡ ಹೇಳಿದ್ದರು. ಕಾನೂನು ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದ್ದರು.
ಇಂಥಾ ಸಂತೋಷ್ ಕುಮಾರ್ ವಿರುದ್ಧ ಆದಿತ್ಯ ಧರ್ ಈಗ ತಿರುಗಿ ಬಿದ್ದಿದ್ದಾರೆ. ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಆದಿತ್ಯ ಧರ್ ಅವರ ಕಾನೂನು ತಂಡ ಸಂತೋಷ್ ಕುಮಾರ್ಗೆ ನೋಟಿಸ್ ಜಾರಿಗೊಳಿಸಿದೆ.
ತಮ್ಮ ಮೇಲಿನ ಕೃತಿ ಚೌರ್ಯದ ಆರೋಪವನ್ನು ಅಲ್ಲಗೆಳೆದಿರುವ ಆದಿತ್ಯ ಧರ್ ತಂಡ, ಆಧಾರರಹಿತ ಆರೋಪ ಮಾಡದಿರುವಂತೆ ಸಂತೋಷ್ ಕುಮಾರ್ ಅವರಿಗೆ ಎಚ್ಚರಿಕೆಯನ್ನು ನೀಡಿದೆ. ಮುಂದುವರೆಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೂಡ ನೀಡಿದೆ.

ಆದರೆ, ಸಂತೋಷ್ ಕುಮಾರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದೇ ಬೇರೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿರುವ ಸಂತೋಷ್ ಕುಮಾರ್ ಮೌನವಾಗಿರಲು ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದಾರೆ.ನಾನು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇನೆ, ನ್ಯಾಯಾಲಯಕ್ಕೆ ಬನ್ನಿ ಎಂದು ಅವರಿಗೆ ಹೇಳಿದ್ದೇನೆ ಎಂದು ''ಹಿಂದೂಸ್ತಾನ್ ಟೈಮ್ಸ್''ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಂದುವರೆದು ಆದಿತ್ಯ ಧರ್ ತುಂಬಾ ಬುದ್ಧಿವಂತ ವ್ಯಕ್ತಿ, ಅವರು ನನ್ನ ಚಿತ್ರದ ಮುಖ್ಯ ಅಂಶಗಳನ್ನು ಮಾತ್ರ ತೆಗೆದುಕೊಂಡು ರಾಜಕೀಯದ ಅಂಶ ಸೇರಿಸಿದ್ದಾರೆ ಎಂದು ಹೇಳಿರುವ ಸಂತೋಷ್ ಕುಮಾರ್ ನನ್ನ ಬಳಿ ಎಲ್ಲಾ ಪುರಾವೆಗಳಿವೆ ಎಂದು ಪುನರುಚ್ಚಿಸಿದ್ದಾರೆ.
ನಿರ್ದೇಶಕ ಆದಿತ್ಯ ಧರ್ ಜೊತೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ಕೂಡ '' ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಸಂತೋಷ್ ಕುಮಾರ್ ಜಿಯೋ ಸ್ಟುಡಿಯೋಸ್ನವರನ್ನು ಸಂಪರ್ಸಿಸಿದಾಗ, ನಾವು ಕೇವಲ ನಿರ್ಮಾಪಕರು, ನೀವು ಬಿ62 ಸ್ಟುಡಿಯೋಸ್ನೊಂದಿಗೆ ಚರ್ಚಿಸಬೇಕು ಎಂದು ಹೇಳಿದ್ದಾರೆ, ನಾನು ಅವರ ವಿರುದ್ಧವೂ ಪ್ರಕರಣ ದಾಖಲಿಸುತ್ತಿದ್ದೇನೆ ಎಂದು ಹೇಳಿದ್ಧಾರೆ.
ಇನ್ನು ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ, ಸಂತೋಷ್ ಅವರ ಆರೋಪ ಆಧಾರ ರಹಿತವಾಗಿದ್ದು ಸೆಪ್ಟೆಂಬರ್ 2023ರಲ್ಲಿಯೇ ಆದಿತ್ಯ ಧರ್ ತಮ್ಮ ''ಧುರಂಧರ್'' ಕಥೆಯನ್ನು 'ಸ್ಕ್ರೀನ್ರೈಟರ್ಸ್ ಅಸೋಸಿಯೇಷನ್' (SWA) ನಲ್ಲಿ ನೋಂದಣಿ ಮಾಡಿಸಿದ್ದಾರೆ. ಖುದ್ದು ಸಂತೋಷ್ ಹಿಂದೆ ಹೇಳಿದಂತೆ ಸಂತೋಷ್ ತಮ್ಮ ಸ್ಕ್ರಿಪ್ಟ್ ಅನ್ನು ನವೆಂಬರ್ 2023ರಲ್ಲಿ ಮಾತ್ರ ನೋಂದಾಯಿಸಿದ್ದಾರೆ. ಈ ಹಿನ್ನೆಲೆ ಈ ಪ್ರಕರಣದಲ್ಲಿ ಆದಿತ್ಯ ಧರ್ ಅವರ ಕೈಯನ್ನು ಮೇಲಾಗುವ ಸಾಧ್ಯತೆ ಸದ್ಯ ಕಂಡು ಬರುತ್ತಿದೆ.
ಅಂದ್ಹಾಗೇ 2017ರಲ್ಲಿ ಕನ್ನಡದಲ್ಲಿ ''ಸ್ಟೂಡೆಂಟ್ಸ್'' ಎಂಬ ಚಿತ್ರ ಬಂದಿತ್ತು. ಈ ಚಿತ್ರದ ಮೂಲಕ ನಿರ್ದೇಶಕರಾದ ಸಂತೋಷ್ ಕುಮಾರ್ ಆ ನಂತರ ''ಬಿಂದಾಸ್ ಗೂಗ್ಲಿ'' ಮತ್ತು ''ಕ್ಯಾಂಪಸ್ ಕ್ರಾಂತಿ'' ಎಂಬ ಇನ್ನೆರಡು ಚಿತ್ರಗಳನ್ನು ಕೂಡ ಮಾಡಿದರು. ಹೀಗೆ ಕನ್ನಡದಲ್ಲಿ 3 ಚಿತ್ರಗಳನ್ನು ನಿರ್ದೇಶಿಸಿದ ಸಂತೋಷ್ ಕುಮಾರ್ ಅವರಿಗೆ ಅಂದುಕೊಂಡ ಗೆಲುವು ಸಿಗಲಿಲ್ಲ. ಈ ಹಿನ್ನೆಲೆ ಕಳೆದ ವರ್ಷ ಪಕ್ಕದ ಚೆನ್ನೈಗೆ ವಲಸೆ ಹೋದ ಸಂತೋಷ್ ಕುಮಾರ್ ''ಯುವನ್ ರಾಬಿನ್ಹುಡ್'' ಎಂಬ ಚಿತ್ರವನ್ನು ಘೋಷಿಸಿದ್ದರು. ಈಗ ''ಧುರಂಧರ್'' ಕಥೆ ನನ್ನದು ಎನ್ನುವ ಮೂಲಕ ಸುದ್ದಿಯಲ್ಲಿದ್ದಾರೆ.


Click it and Unblock the Notifications











