ಧುರಂಧರ್ ಕಥೆ ಕದ್ದ ಆರೋಪ ; ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಕನ್ನಡ ನಿರ್ದೇಶಕ ಸಂತೋಷ್ ಕುಮಾರ್
ಭಾರತೀಯ ಚಿತ್ರರಂಗದಲ್ಲಿ ಹಲವರಿಗೆ ಕದಿಯುವ ಮನೋವ್ಯಾದಿ ಇದೆ. ಆದರೆ ಇನ್ನೂ ಕೆಲವರಿಗೆ ಪ್ರಚಾರದ ಹುಚ್ಚಿದೆ. ಚಿತ್ರವೊಂದು ಬಿಡುಗಡೆಯಾಗಿ ಗೆದ್ದರೆ ಸಾಕು, ಇದು ನನ್ನ ಕಥೆ ಎಂದು ಇಲ್ಲಿ ಇವರು ಗುಡುಗುತ್ತಾರೆ. ಗೆದ್ದ ಚಿತ್ರದ ನಿರ್ದೇಶಕನ ಸೃಜನಶೀಲತೆಯ ಪ್ರಶ್ನೆ ಮಾಡುತ್ತಾರೆ. ನಿಂದಿಸುತ್ತಾರೆ. ಬಹಿರಂಗವಾಗಿಯೇ ಅವಮಾನವನ್ನು ಮಾಡುತ್ತಾರೆ.
ಇವರ ಈ ವಾದವನ್ನೆಲ್ಲಾ ಆಲಿಸಿದ ಸಾಮಾನ್ಯ ಸಿನಿಮಾಸಕ್ತರು ಕೂಡ ಬ್ಲಾಕ್ ಬಸ್ಟರ್ ಚಿತ್ರವನ್ನು ನೀಡಿದ ನಿರ್ದೇಶಕನ ಕೃತಿಯನ್ನು ಅನುಮಾನದ ದೃಷ್ಟಿಯಿಂದ ನೋಡಲು ಶುರು ಮಾಡುತ್ತಾರೆ. ಕಥೆ ಕದ್ದಿದ್ದರೂ ಕದ್ದಿರಬಹುದೇನೋ ಅಂದುಕೊಳ್ಳುತ್ತಾರೆ. ಚರ್ಚೆ ಮಾಡುತ್ತಾರೆ. ಆದರೆ, ಇದೇ ಸಮಯದಲ್ಲಿ ಆರಂಭದಲ್ಲಿ ಕೃತಿಚೌರ್ಯದ ಆರೋಪ ಮಾಡಿ ಗುಡುಗಿದ್ದವರು ತೆರೆಮರೆಯಲ್ಲಿ ಕ್ಷಮೆ ಕೇಳಿ ಕೈತೊಳೆದುಕೊಂಡಿರುತ್ತಾರೆ. ''ಧುರಂಧರ್'' ವಿಚಾರದಲ್ಲಿ ಸದ್ಯ ಇದೇ ಆಗಿದೆ.

ಹೌದು, ''ಧುರಂಧರ್'' ಕಥೆ ನನ್ನದು ಎಂದು ''ಧುರಂಧರ್ 2'' ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದ್ದ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಂತೋಷ್ ಕುಮಾರ್ ಆರ್.ಎಸ್ ಮಾಡಿದ್ದರು. ''ಧುರಂಧರ್'' ಕಥೆ ನನ್ನದು ಎಂದು ಹೇಳಿದ್ದರು. ಆದಿತ್ಯ ಧರ್ ಒಬ್ಬ 'ಚಿಂದಿ ಚೋರ್' ಎಂದು ಕಿಡಿ ಕಾರಿದ್ದರು.
ಮಾಧ್ಯಮದವರ ಎದುರು ನಾನು 2023ರಲ್ಲಿ ಕಷ್ಟಪಟ್ಟು ಈ ಕಥೆ ಬರೆದಿದ್ದೆ ಎಂದು ಹೇಳಿದ್ದ ಸಂತೋಷ್ ಕುಮಾರ್, ಆದಿತ್ಯ ರಾಯ್ ಕಪೂರ್ ಅವರನ್ನು ಈ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಬೇಕೆನ್ನುವ ಉದ್ದೇಶ ನನಗೆ ಇತ್ತು ಎಂದು ಹೇಳಿದ್ದರು. ಚಿತ್ರಕ್ಕೆ ನಾನು ''ಡಿ-ಸಾಹೇಬ್'' ಎಂದು ಹೆಸರಿಟ್ಟಿದ್ದೇ ಎಂದಿದ್ದರು.
ಇಂತಹ ದೊಡ್ಡ ಚಿತ್ರಕ್ಕೆ ದೊಡ್ಡ ಸಂಸ್ಥೆಯ ಬೆಂಬಲ ಬೇಕು, ಈ ಹಿನ್ನೆಲೆ ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸೀರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ನಂತಹ ದೊಡ್ಡ ಸಂಸ್ಥೆಗಳ ಜೊತೆ ಚರ್ಚೆ ಮಾಡಿರುವುದಾಗಿಯೂ ಹೇಳಿದ್ದ ಸಂತೋಷ್ ಕುಮಾರ್ ನವೆಂಬರ್ 2023 ರಲ್ಲೇ 'ಸ್ಕ್ರೀನ್ರೈಟರ್ಸ್ ಅಸೋಸಿಯೇಷನ್' (SWA) ನಲ್ಲಿ ನಾನು ಈ ಕಥೆ ನೋಂದಣಿ ಮಾಡಿಸಿದ್ದೆ ಎಂದಿದ್ದರು. ತಮ್ಮ ಈ ಆರೋಪಗಳಿಗೆ ತಮ್ಮ ಬಳಿ ಪುರಾವೆಗಳಿವೆ ಎಂದು ಕೂಡ ಹೇಳಿದ್ದರು. ಕಾನೂನು ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದ್ದರು.
ಇಂಥಾ ಸಂತೋಷ್ ಕುಮಾರ್ ವಿರುದ್ಧ ಆದಿತ್ಯ ಧರ್ ತಿರುಗಿ ಬಿದ್ದಿದ್ದರು. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಧಾರರಹಿತ ಆರೋಪ ಮಾಡದಿರುವಂತೆ ಸಂತೋಷ್ ಕುಮಾರ್ ಅವರಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಸದ್ಯ ಇದೇ ಪ್ರಕರಣದಲ್ಲಿಗ ಆದಿತ್ಯ ಧರ್ ಬಳಿ ಸಂತೋಷ್ ಕುಮಾರ್ ಕ್ಷಮೆ ಕೇಳಿದ್ದಾರೆ.

ಹೌದು, ಬಾಂಬೆ ಹೈಕೋರ್ಟ್ ನಲ್ಲಿ ಕೃತಿಚೌರ್ಯದ ವಿಚಾರಣೆಯನ್ನು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ನೇತೃತ್ವದ ವಿಭಾಗ ನಡೆಸಿದೆ. ಈ ಸಮಯದಲ್ಲಿ ಸಂತೋಷ್ ಕುಮಾರ್ ತಾವು ನೀಡಿದ್ದ ಹೇಳಿಕೆಗೆ ಬೇಷರತ್ ಕ್ಷಮೆ ಕೇಳಿದ್ದಾರೆ. ಲಿಖಿತ ರೂಪದಲ್ಲಿಯೂ ಬರೆದು ಕೊಟ್ಟಿದ್ದಾರೆ. ಸಂತೋಷ್ ಕುಮಾರ್ ಅವರ ಕ್ಷಮಾಪಣಾ ಅರ್ಜಿಯನ್ನು ಸ್ವೀಕರಿಸಿದ ಆದಿತ್ಯ ಧರ್ ಪರ ವಕೀಲರು ನಮಗೆ ಪರಿಹಾರದ ನಿರೀಕ್ಷೆಯೂ ಇಲ್ಲ ಅಥವಾ ಪ್ರಕರಣ ಮುಂದುವರೆಸುವ ಆಸಕ್ತಿ ಕೂಡ ಇಲ್ಲ ಎಂದು ಹೇಳಿದ್ದಾರೆ.
ಎರಡು ಕಡೆಯವರ ಸಮ್ಮತಿಯ ಮೇರೆಗೆ ಬಾಂಬೆ ಹೈಕೋರ್ಟ್ ಈ ಪ್ರಕರಣಕ್ಕೆ ಇತಿಶ್ರೀ ಹಾಡಿದೆ. ಇದೇ ಸಮಯದಲ್ಲಿ ಮಾನನಷ್ಟ ಮೊಕದ್ದಮೆ ಮುಕ್ತಾಯವಾದರೂ ಕೂಡ ಕಥೆಯ ಹಕ್ಕುಸ್ವಾಮ್ಯದ ವಿಚಾರದಲ್ಲಿ ಸ್ವತಂತ್ರವಾಗಿ ದೂರು ದಾಖಲಿಸಬಹುದು ಎಂದು ನ್ಯಾಯಾಲಯ ಹೇಳಿದ್ದು ಕಥೆಗೆ ಸಂಬಂಧಿಸಿದಂತೆ ಸಂತೋಷ್ ಕುಮಾರ್ ತಮ್ಮ ಹೋರಾಟವನ್ನು ಮುಂದುವರೆಸುತ್ತಾರಾ..? ಅಥವಾ ಸುಮ್ಮನಾಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಅಂದ್ಹಾಗೇ 2017ರಲ್ಲಿ ಕನ್ನಡದಲ್ಲಿ ''ಸ್ಟೂಡೆಂಟ್ಸ್'' ಎಂಬ ಚಿತ್ರ ಬಂದಿತ್ತು. ಈ ಚಿತ್ರದ ಮೂಲಕ ನಿರ್ದೇಶಕರಾದ ಸಂತೋಷ್ ಕುಮಾರ್ ಆ ನಂತರ ''ಬಿಂದಾಸ್ ಗೂಗ್ಲಿ'' ಮತ್ತು ''ಕ್ಯಾಂಪಸ್ ಕ್ರಾಂತಿ'' ಎಂಬ ಇನ್ನೆರಡು ಚಿತ್ರಗಳನ್ನು ಕೂಡ ಮಾಡಿದರು. ಹೀಗೆ ಕನ್ನಡದಲ್ಲಿ 3 ಚಿತ್ರಗಳನ್ನು ನಿರ್ದೇಶಿಸಿದ ಸಂತೋಷ್ ಕುಮಾರ್ ಅವರಿಗೆ ಅಂದುಕೊಂಡ ಗೆಲುವು ಸಿಗಲಿಲ್ಲ. ಈ ಹಿನ್ನೆಲೆ ಕಳೆದ ವರ್ಷ ಪಕ್ಕದ ಚೆನ್ನೈಗೆ ವಲಸೆ ಹೋದ ಸಂತೋಷ್ ಕುಮಾರ್ ''ಯುವನ್ ರಾಬಿನ್ಹುಡ್'' ಎಂಬ ಚಿತ್ರವನ್ನು ಘೋಷಿಸಿದ್ದರು.


Click it and Unblock the Notifications