ರಾಷ್ಟ್ರಪ್ರಶಸ್ತಿ ವಿಜೇತ 'ಗಾಯಕ'ನ ಬದುಕಿನಲ್ಲಿ ಬಿರುಗಾಳಿ, ಮುರಿದು ಬಿತ್ತು 17 ವರ್ಷದ ದಾಂಪತ್ಯ
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವ್ಯೆಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾನೇ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ.
ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ ಆ ನಂತರ ಏಕಾಏಕಿ ಡಿವೋರ್ಸ್ ಘೋಷಿಸುತ್ತಾರೆ.

ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ರಾಹುಲ್ ದೇಶಪಾಂಡೆ ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಹೌದು, ರಾಹುಲ್ ದೇಶಪಾಂಡೆ.. ಮರಾಠಿಯ ಖ್ಯಾತ ಗಾಯಕ ಮತ್ತು ನಾಯಕ. ''ಮಿ.ವಸಂತ್ ರಾವ್'' ಚಿತ್ರದಲ್ಲಿನ ''ಕೈವಲ್ಯಗಾನ" ಹಾಡಿಗೆ ಅತ್ಯುತ್ತಮ ಗಾಯಕ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದ ರಾಹುಲ್ ದೇಶಪಾಂಡೆ, ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ಕೂಡ ನಿರ್ವಹಿಸಿದ್ದರು. ಕಳೆದ 14-15 ವರ್ಷಗಳಿಂದ ಚಿತ್ರರಂಗದಲ್ಲಿ ಗಾಯಕರಾಗಿ ಹಲವಾರು ಹಾಡುಗಳನ್ನು ಹಾಡಿರುವ ರಾಹುಲ್ ದೇಶಪಾಂಡೆ ಎರಡು ಬಾರಿ ಅತ್ಯುತ್ತಮ ಗಾಯಕ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
ಇಂಥಾ ರಾಹುಲ್ ದೇಶಪಾಂಡೆ ಸದ್ಯ ತಮ್ಮ 17 ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ. ತಮ್ಮ ಪತ್ನಿ ನೇಹಾಗೆ ವಿಚ್ಛೇದನ ನೀಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಾಹುಲ್ ದೇಶಪಾಂಡೆ ನನ್ನ ಪ್ರಯಾಣದಲ್ಲಿ ಇಲ್ಲಿಯವರೆಗೆ ನೀವೆಲ್ಲರೂ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸಿದ್ದೀರಾ. ಈ ಹಿನ್ನೆಲೆ ನಾನು ನಿಮ್ಮ ಜೊತೆ ಪ್ರಮುಖವಾದ ವಿಚಾರವನ್ನು ಹಂಚಿಕೊಳ್ಳಲು ಬಯಸಿದ್ದೇನೆ, 17 ವರ್ಷಗಳ ನಂತರ ನಾನು ಮತ್ತು ನೇಹಾ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿಯೇ ನಮ್ಮ ವಿಚ್ಛೇದನದ ಪ್ರಕ್ರಿಯೆಗಳು ಪೂರ್ಣವಾಗಿದ್ದವು, ಆದರೂ.. ನಾನು ಈ ವಿಚಾರವನ್ನು ಹಂಚಿಕೊಳ್ಳಲು ಇಷ್ಟೊಂದು ಸಮಯ ತೆಗೆದುಕೊಳ್ಳಬೇಕಾಯ್ತು ಅದಕ್ಕೆ ಕಾರಣ ನಮ್ಮ ಮಗಳೂ ರೇಣುಕಾ ಎಂದಿರುವ ರಾಹುಲ್ ದೇಶಪಾಂಡೆ, ನಾನು ಮತ್ತು ನೇಹಾ ನಮ್ಮ ಮಗಳು ರೇಣುಕಾ ಭವಿಷ್ಯಕ್ಕೆ ಬೇಕಿರುವ ಕೆಲಸಗಳನ್ನು ಜೊತೆಯಾಗಿ ಮುಂಬರುವ ದಿನಗಳಲ್ಲಿ ಕೂಡ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಮಗಳು ನಮ್ಮಿಬ್ಬರ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ನಮ್ಮ ನಿರ್ಧಾರ ಮತ್ತು ಗೌಪ್ಯತೆಯನ್ನು ಕಾಪಾಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ ಎಂದು ಕೂಡ ಹೇಳಿದ್ಧಾರೆ.

ರಾಹುಲ್ ದೇಶಪಾಂಡೆ ಅವರ ಈ ನಿರ್ಧಾರ ಸದ್ಯ ಹಲವರಿಗೆ ಬೇಸರವನ್ನುಂಟು ಮಾಡಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ರಾಹುಲ್ ದೇಶಪಾಂಡೆ ಅವರಿಗೆ ನಿಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಂದು ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ರಾಹುಲ್ ದೇಶಪಾಂಡೆ ಖ್ಯಾತ ಹಿಂದೂಸ್ತಾನಿ ಗಾಯಕ ವಸಂತರಾವ್ ದೇಶಪಾಂಡೆ ಅವರ ಮೊಮ್ಮಗ. 2011ರಿಂದ ಮರಾಠಿ ಚಿತ್ರರಂಗದಲ್ಲಿರುವ ರಾಹುಲ್ ದೇಶಪಾಂಡೆ ಇಲ್ಲಿಯವರೆಗೆ ಹಲವಾರು ವೇದಿಕೆಗಳಲ್ಲಿ ಕೂಡ ಹಾಡಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಇವರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಹಾಡುಗಾರಿಕೆಗೆ ತಲೆದೂಗಿದ್ಧಾರೆ.


Click it and Unblock the Notifications











