ಸೈಕಲ್ ಏರಿ ನಾರ್ವೆಗೆ ಹೊರಡಲು ಸಜ್ಜಾಗಿದ ಶಾರುಖ್ ಖಾನ್: ಹಿಂದಿನ ಅಸಲಿ ಕಥೆಯೇನು?
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮೂರು ವರ್ಷಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪಠಾಣ್ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದಾರೆ. ಈ ನಡುವೆ ಶಾರುಖ್ ನಾರ್ವಿಗೆ ಸೈಕಲ್ ಏರಿ ಹೊರಡಲು ಸಜ್ಜಾಗಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಶಾರುಖ್ ಸೈಕಲ್ ನಲ್ಲಿ ನಾರ್ವೆಗೆ ಹೊರಡಲು ತಯಾರಾಗಿದ್ದು ಪ್ರೀತಿಗಾಗಿ. ಅಂದಹಾಗೆ ನಿಜ ಜೀವನದಲ್ಲಿ ಅಂತ ಯೋಚಿಸಬೇಡಿ ಪ್ರೀತಿ ಹುಡುಕಿ ಹೊರಟಿದ್ದು ಸಿನಿಮಾಗಾಗಿ. ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ನೈಜ ಘಟನೆ ಆಧಾರಿತ ಹೊಸ ಸಿನಿಮಾದಲ್ಲಿ ಶಾರುಖ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.
ಎರಡು ದಶಕಗಳ ಹಿಂದೆ ದೇವದಾಸ್ ಸಿನಿಮಾದಲ್ಲಿ ಶಾರುಖ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾ ಬಳಿಕ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಸಮಯ ಬಂದಿರಲಿಲ್ಲ. ಈ ಸಿನಿಮಾ ಸೂಪರ್ ಸಕ್ಸಸ್ ಆದ ಬಳಿಕ ಶಾರುಖ್ ಮತ್ತು ಬನ್ಸಾಲಿ ಸಿನಿಮಾಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಇದುವರೆಗೂ ಪ್ರೇಕ್ಷಕರ ಆಸೆ ಈಡೆರಿರಲಿಲ್ಲ. ಇದೀಗ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಸಮಯ ಹತ್ತಿರ ಬಂದಿದೆ.

ರೊಮ್ಯಾಂಟಿಕ್ ಸಿನಿಮಾಗಾಗಿ ಶಾರುಖ್ ಮತ್ತೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೈಜೋಡಿಸುತ್ತಿದ್ದಾರೆ. ಈಗಾಗಲೇ ಬನ್ಸಾಲಿ ನಟ ಶಾರುಖ್ ಖಾನ್ ಗೆ ಕಥೆ ವಿವರಿಸಿದ್ದಾರಂತೆ. ನಾಲ್ಕು ವರ್ಷಗಳ ಹಿಂದೆಯೇ ಕಥೆ ತಯಾರಾಗಿದೆಯಂತೆ. ಭಾರತೀಯ ವ್ಯಕ್ತಿ ಮತ್ತು ನಾರ್ವೆ ದೇಶದ ಹುಡುಗಿಯ ಪ್ರೇಮ ಕಥೆಯಾಗಿದೆಯಂತೆ.
ಪ್ರೀತಿಯನ್ನು ಹುಡುಕಿ ನಾರ್ವೆಗೆ ಸೈಕಲ್ ನಲ್ಲಿ ಪ್ರಯಾಣ ಮಾಡಿದ ವ್ಯಕ್ತಿಯ ನಿಜ ಜೀವನದ ಕಥೆ. ಈ ಕಥೆಗೆ ಶಾರುಖ್ ಜೀವ ತುಂಬುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶಾರುಖ್, ಬನ್ಸಾಲಿ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿ ನಾರ್ವೆಗೆ ಸೈಕಲ್ ಏರಿ ಹೊರಡುತ್ತಾರಾ ಎಂದು ಕಾದು ನೋಡಬೇಕು.
ಶಾರುಖ್ ಸದ್ಯ ಸಿದ್ದಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಮಿಂಚುತ್ತಿದ್ದಾರೆ. ಈ ಸಿನಿಮಾ ಬಳಿಕ ತಮಿಳು ನಿರ್ದೇಶಕ ಆಟ್ಲೀ ಜೊತೆ ಶಾರುಖ್ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.


Click it and Unblock the Notifications











