ಮೀಟೂ ಅಭಿಯಾನಕ್ಕೆ ಮೊದಲ ಜಯ: 'ಮೊಘಲ್' ಚಿತ್ರದ ನಿರ್ದೇಶಕ ಕಿಕ್ ಔಟ್.!
ಕಳೆದ ಎರಡು ವಾರಗಳಿಂದ ಭಾರತದಲ್ಲಿ ಅದರಲ್ಲೂ ಬಾಲಿವುಡ್ ನಲ್ಲಿ 'ಮೀಟೂ ಅಭಿಯಾನ' ಜೋರಾಗಿದೆ. ನಾನಾ ಪಾಟೇಕರ್ ಹಾಗೂ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಗುಡುಗಿದ ಮೇಲೆ ಇತರೆ ನಟಿಯರು ಕೂಡ ಖ್ಯಾತನಾಮರ ಬಂಡವಾಳ ಬಯಲು ಮಾಡುತ್ತಿದ್ದಾರೆ.
ನಿರ್ದೇಶಕ ಸುಭಾಷ್ ಕಪೂರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಇದೆ. 2014 ರಲ್ಲಿಯೇ ಸುಭಾಷ್ ಕಪೂರ್ ವಿರುದ್ಧ ನಟಿ ಗೀತಿಕಾ ತ್ಯಾಗಿ ಸಿಡಿದೆದ್ದಿದ್ದರು. ಈ ಪ್ರಕರಣ ಸದ್ಯ ಕೋರ್ಟ್ ನಲ್ಲಿದೆ. ಇದೇ ವಿಚಾರದ ಕುರಿತಾಗಿ, ನಟಿ ಗೀತಿಕಾ ತ್ಯಾಗಿ, ಸುಭಾಷ್ ಕಪೂರ್ ನಿರ್ದೇಶನದ ಚಿತ್ರ ನಿರ್ಮಾಣ ಮಾಡುತ್ತಿರುವ ಕಿರಣ್ ರಾವ್ ಹಾಗೂ ಆಮೀರ್ ಖಾನ್ ಗೂ ಒಂದು ಟ್ವೀಟ್ ಮಾಡಿದ್ದರು.
''ಮೀಟೂ ಅಭಿಯಾನದಲ್ಲಿ ಆರೋಪ ಎದುರಿಸುತ್ತಿರುವ ಕಾಮುಕ ನಿರ್ದೇಶಕ/ನಿರ್ಮಾಪಕರನ್ನ ಮುಂಬೈ ಚಲನಚಿತ್ರೋತ್ಸವ ದೂರ ಇಟ್ಟಿದೆ. ಆದ್ರೆ, ಅದರ ಮುಖ್ಯಸ್ಥೆ ಆಗಿರುವ ಕಿರಣ್ ರಾವ್ ಅವರ ಪತಿ ಆಮೀರ್ ಖಾನ್ ಮಾತ್ರ ಲೈಂಗಿಕ ದೌರ್ಜನ್ಯ ಎಸಗಿರುವ ಸುಭಾಷ್ ಕಪೂರ್ ಜೊತೆ ಕೆಲಸ ಮಾಡುತ್ತಿದ್ದಾರೆ'' ಎಂದು ಗೀತಿಕಾ ತ್ಯಾಗಿ ಟ್ವೀಟ್ ಮಾಡಿದ್ದರು.
ಇದನ್ನ ಗಂಭೀರವಾಗಿ ಪರಿಗಣಿಸಿದ ಕಿರಣ್ ರಾವ್ ಹಾಗೂ ಆಮೀರ್ ಖಾನ್, ಸುಭಾಷ್ ಕಪೂರ್ ನಿರ್ದೇಶನದ 'ಮೊಘಲ್' ಚಿತ್ರದಿಂದ ಹೊರಬಂದಿದ್ದಾರೆ. ಇದರ ಪರಿಣಾಮ, 'ಮೊಘಲ್' ಚಿತ್ರದಿಂದ ಸುಭಾಷ್ ಕಪೂರ್ ರನ್ನ ಕಿತ್ತೊಗಿಯಲಾಗಿದೆ. ಮುಂದೆ ಓದಿರಿ...
ಆಮೀರ್ ಖಾನ್ ಮಾಡಿದ ಟ್ವೀಟ್ ನಲ್ಲಿ ಏನಿದೆ.?
''ಆಮೀರ್ ಖಾನ್ ಪ್ರೊಡಕ್ಷನ್ಸ್ ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎಂದೂ ಸಹಿಸುವುದಿಲ್ಲ. ಅಂತಹ ಪ್ರಕರಣಗಳನ್ನು ನಾವು ಖಂಡಿಸುತ್ತೇವೆ. ಎರಡು ವಾರಗಳಿಂದ ''ಮೀಟೂ'' ಕಥೆಗಳು ನಮ್ಮ ಗಮನಕ್ಕೆ ಬಂದಿವೆ. ಜೊತೆಗೆ ನಾವು ಕೆಲಸ ಮಾಡಲು ಮುಂದಾಗಿರುವ ವ್ಯಕ್ತಿಯ ವಿರುದ್ಧವೂ ಆರೋಪ ಕೇಳಿ ಬಂದಿದೆ. ಪ್ರಕರಣ ಕೋರ್ಟ್ ನಲ್ಲಿದೆ. ಹೀಗಾಗಿ, ಅದರ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಾರದೆ ಚಿತ್ರದಿಂದ ಹೊರಗೆ ಬರಲು ನಿರ್ಧರಿಸಿದ್ದೇವೆ. ಚಿತ್ರರಂಗದಲ್ಲಿ ದೊಡ್ಡ ಬದಲಾವಣೆ ತರಲು ಇದೊಂದು ಸದಾವಕಾಶ. ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ಕಿರುಕುಳ ನಿಲ್ಲಬೇಕು. ಚಿತ್ರರಂಗವನ್ನು ಸೇಫ್ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ'' ಎಂದು ಆಮೀರ್ ಖಾನ್ ಹಾಗೂ ಕಿರಣ್ ರಾವ್ ಟ್ವೀಟ್ ಮಾಡಿದ್ದರು.

ಹೆಸರು ಹೇಳದ ಆಮೀರ್ ಖಾನ್
''ನಾವು ಕೆಲಸ ಮಾಡಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಆರೋಪ ಕೇಳಿಬಂದಿದೆ. ಹೀಗಾಗಿ ಚಿತ್ರದಿಂದ ಹೊರಬರುತ್ತಿದ್ದೇವೆ'' ಎಂದು ಆಮೀರ್ ಖಾನ್ ಬರೆದಿದ್ದಾರೆ ವಿನಃ ಆ ವ್ಯಕ್ತಿ ಯಾರು, ಯಾವ ಚಿತ್ರ ಎಂಬ ಸ್ಪಷ್ಟ ಉಲ್ಲೇಖ ತಮ್ಮ ಟ್ವೀಟ್ ನಲ್ಲಿ ಮಾಡಿರಲಿಲ್ಲ.
ಧನ್ಯವಾದ ಅರ್ಪಿಸಿದ ಗೀತಿಕಾ
ಆಮೀರ್ ಖಾನ್ ಹಾಗೂ ಕಿರಿಣ್ ರಾವ್ ರವರ ಈ ನಡೆ ಬಗ್ಗೆ ಗೀತಿಕಾ ತ್ಯಾಗಿ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಅದು ಸುಭಾಷ್ ಕಪೂರ್ ಎಂದ ಭೂಷಣ್ ಕುಮಾರ್.!
''ನಿರ್ದೇಶಕ ಸುಭಾಷ್ ಕಪೂರ್ ಬಗ್ಗೆ ಆಮೀರ್ ಖಾನ್ ಮತ್ತು ಕಿರಣ್ ರಾವ್ ಹೇಳಿಕೆ ನೀಡಿದ್ದಾರೆ ಎಂದು ನಾನು ಅರ್ಥೈಸಿಕೊಂಡಿದ್ದೇನೆ. 'ಮೊಘಲ್' ಚಿತ್ರಕ್ಕೆ ಸುಭಾಷ್ ಕಪೂರ್ ಆಕ್ಷನ್ ಕಟ್ ಹೇಳಲ್ಲ'' ಎಂದು ಚಿತ್ರ ಕೋ-ಪ್ರೊಡ್ಯೂಸರ್ ಭೂಷಣ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಗುಲ್ಷನ್ ಕುಮಾರ್ ಜೀವನಚರಿತ್ರೆ ಆಧಾರಿತ ಚಿತ್ರ
ಅಷ್ಟಕ್ಕೂ, 'ಮೊಘಲ್' ಟಿ-ಸೀರೀಸ್ ಸ್ಥಾಪಕ ಗುಲ್ಷನ್ ಕುಮಾರ್ ಜೀವನಚರಿತ್ರೆ ಆಧಾರಿತ ಸಿನಿಮಾ. ಈ ಚಿತ್ರಕ್ಕೆ ಆಮೀರ್ ಖಾನ್ ಜೊತೆಗೆ ಗುಲ್ಷನ್ ಕುಮಾರ್ ಪುತ್ರ ಭೂಷಣ್ ಕುಮಾರ್ ಕೂಡ ಬಂಡವಾಳ ಹಾಕುತ್ತಿದ್ದಾರೆ.

ಭೂಷಣ್ ಕುಮಾರ್ ಏನಂತಾರೆ.?
''ನಮ್ಮ ಚಿತ್ರರಂಗ ಎಲ್ಲರಿಗೂ ಸೇಫ್ ಆಗಿರಬೇಕು. ಸುಭಾಷ್ ಕಪೂರ್ ವಿರುದ್ಧ ಪ್ರಕರಣ ದಾಖಲಾಗಿರುವುದು ನಮ್ಮ ಗಮನಕ್ಕೆ ಬಂದಿರುವ ಕಾರಣ, ಆತನ ಜೊತೆಗೆ ಕೆಲಸ ಮಾಡದಿರಲು ಟಿ-ಸೀರೀಸ್ ನ ಎಲ್ಲರೂ ನಿರ್ಧಾರ ಕೈಗೊಂಡಿದ್ದಾರೆ'' ಅಂತಾರೆ ಭೂಷಣ್ ಕುಮಾರ್.

'ಮೊಘಲ್' ಚಿತ್ರದಲ್ಲಿ ನಟಿಸ್ತಾರಾ ಆಮೀರ್.?
'ಮೊಘಲ್' ಚಿತ್ರತಂಡದಿಂದ ಸುಭಾಷ್ ಕಪೂರ್ ರನ್ನ ಕಿಕ್ ಔಟ್ ಮಾಡಿರುವ ಕಾರಣ, ಮತ್ತೆ 'ಮೊಘಲ್' ಚಿತ್ರಕ್ಕೆ ಆಮೀರ್ ಖಾನ್ ಗ್ರೀನ್ ಸಿಗ್ನಲ್ ಕೊಡ್ತಾರಾ.? ಅನ್ನೋದಿನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ''ಆಮೀರ್ ಖಾನ್ ಗೆ ನಿರ್ದೇಶಕರು ಬಿಟ್ಟರೆ ಇನ್ಯಾರೂ ಸಮಸ್ಯೆ ಅಲ್ಲ'' ಅಂತ ಭೂಷಣ್ ಕುಮಾರ್ ಕೂಡ ಸ್ಪಷ್ಟ ಪಡಿಸಿದ್ದಾರೆ. 'ಮೊಘಲ್' ಕಥೆ ಮುಂದೇನಾಗುತ್ತೋ, ನೋಡಬೇಕು.


Click it and Unblock the Notifications











