ಸಲ್ಮಾನ್ ಖಾನ್ ನಂತರ ಶಾರುಖ್ ಖಾನ್ ಸರದಿ, 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ...!
ಏನೇ ಕಿಂಗ್ ಖಾನ್ ಆದ್ರೂ ಅದು ಬಾಲಿವುಡ್ ಗೆ ಮಾತ್ರ. ಸೌತ್ ಇಂಡಿಯಾಗೆ ಯಾವ ಕಿಂಗೂ ಇಲ್ಲ ಅನ್ನುವ ಮಾತು ಆಗಾಗ ಕೇಳಿ ಬರುತ್ತಾನೇ ಇರುತ್ತೆ. ಈ ಮಾತು ನಿಜಾನಾ, ಸುಳ್ಳಾ ಗೊತ್ತಿಲ್ಲ. ಆದರೆ ಶಾರುಖ್ ಖಾನ್ ಮಾತ್ರ ಅವತ್ತು ಚಾಲ್ತಿಯಲ್ಲಿದ್ದರು. ಇವತ್ತು ಚಾಲ್ತಿಯಲ್ಲಿದ್ದಾರೆ.
ಇಂಥಾ ಶಾರುಖ್ ಖಾನ್ ಪ್ರಾಣಕ್ಕೆ ಈಗ ಕುತ್ತು ಬಂದಿದೆ. ಸಲ್ಮಾನ್ ಖಾನ್ ಬೆನ್ನಲ್ಲಿಯೇ ಶಾರುಖ್ ಖಾನ್ಗೆ ಕೂಡ ಜೀವ ಬೆದರಿಕೆಯ ಕರೆ ಬಂದಿದೆ. ಶಾರುಖ್ ಖಾನ್ ಅವರ ವ್ಯೆಯಕ್ತಿಕ ಮೊಬೈಲ್ಗೆ ಇಂದು ಕರೆ ಬಂದಿದ್ದು ಕೂಡಲೇ ಐವತ್ತು ಲಕ್ಷವನ್ನು ನೀಡುವಂತೆ ಬೆದರಿಕೆಯನ್ನು ವ್ಯಕ್ತಿ ಹಾಕಿದ್ದಾನೆ. ಹಣ ನೀಡದೇ ಇದ್ದರೆ ಹೆಣ ಬೀಳುತ್ತೆ ಎಂದು ಬೆದರಿಕೆಯನ್ನು ಹಾಕಿದ್ದಾನೆ. ಬೆದರಿಕೆ ಕರೆಗೆ ಹೆದರಿದ ಶಾರುಖ್ ಖಾನ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಇನ್ನೂ ಶಾರುಖ್ ಖಾನ್ ನೀಡಿದ ದೂರಿನ ಅನ್ವಯ ಬಾಂದ್ರಾ ಪೊಲೀಸರು BNS ಕಾಯಿದೆಯ ಸೆಕ್ಷನ್ 308(4) ಮತ್ತು 351(3)(4) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಗೆ ಬಲೆಯನ್ನು ಬೀಸಿದ್ದಾರೆ. ಬೆದರಿಕೆ ಕರೆ ಮಾಡಿರುವ ವ್ಯಕ್ತಿಯ ಮೊಬೈಲ್ ಲೊಕೇಷನ್ ಪತ್ತೆ ಮಾಡಿರುವ ಪೊಲೀಸರು, ವ್ಯಕ್ತಿಯನ್ನು ಹುಡುಕುತ್ತಾ ಛತ್ತೀಸ್ ಘಡ್ ಗೆ ತೆರಳಿದ್ದಾರೆ.ಫೈಜಾನ್ ಹೆಸರಿನಲ್ಲಿ ನಂಬರ್ ನೊಂದಣಿಯಾಗಿದ್ದು ಛತ್ತೀಸ್ ಘಡ್ನ ರಾಯಪುರದಲ್ಲಿ ಕೊನೆಯ ಬಾರಿ ಲೊಕೇಷನ್ ಪತ್ತೆಯಾಗಿದೆ.
ಅಂದ್ಹಾಗೇ ಬಾಬಾ ಸಿದ್ದಿಕಿ ಹತ್ಯೆಯ ನಂತರ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಸಹವಾಸ ಯಾರೆಲ್ಲ ಮಾಡುತ್ತಾರೆ ಅವರಿಗೆಲ್ಲ ಬಾಬಾ ಸಿದ್ದಿಕಿಯಂತೆಯೇ ಹೊಡೆದುರುಳಿಸವುದಾಗಿ ಹೇಳಿದ್ದ. ಇನ್ನೂ ಬಾಬಾ ಸಿದ್ದಿಕಿಗೆ ಕೇವಲ ಸಲ್ಮಾನ್ ಖಾನ್ ಮಾತ್ರ ಆಪ್ತವಾಗಿರಲಿಲ್ಲ. ಶಾರುಖ್ ಖಾನ್ ಕೂಡ ಆಪ್ತರಾಗಿದ್ದರು. ಇನ್ನೂ ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ವಿರುದ್ಧ ದಿಕ್ಕಿನಲ್ಲಿದ್ದಾಗ ಇಬ್ಬರನ್ನು ಬಾಬಾ ಸಿದ್ದಿಕಿ ಒಂದು ಮಾಡಿದ್ದರು.

ಈ ಹಿನ್ನೆಲೆ ಸಲ್ಮಾನ್ ಖಾನ್ ಪ್ರಾಣ ತೆಗೆಯಲು ಹಾತೊರೆಯುತ್ತಿರುವ ಬಿಷ್ಣೋಯ್ ಆಂಡ್ ಗ್ಯಾಂಗ್ನಿಂದನೇ ಶಾರುಖ್ ಖಾನ್ಗೆ ಬೆದರಿಕೆ ಕರೆ ಬಂದಿರಬಹುದು ಎನ್ನುವ ಅನುಮಾನವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಕುರಿತು ಮುಂಬೈ ಪೊಲೀಸರು ಶಾರುಖ್ ಖಾನ್ ಬಳಿ ಪ್ರಶ್ನೆಯನ್ನು ಮಾಡಲಿದ್ದಾರೆ. ಇನ್ನುಳಿದಂತೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಶಾರುಖ್ ಖಾನ್ ಅಭಿಮಾನಿಗಳ ಅಭಿಮಾನದ ಮಳೆಯಲ್ಲಿ ಮಿಂದೆದ್ದಿದ್ದರು. ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸದ್ಯ ಶಾರುಖ್ ಖಾನ್ ಅವರಿಗೆ ಪ್ರಾಣ ಬೆದರಿಕೆ ಕರೆ ಬಂದಿದ್ದು ಈ ವಿಚಾರದ ಕುರಿತು ಪೊಲೀಸರು ಶೀಘ್ರದಲ್ಲಿಯೇ ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ.
ಇನ್ನುಳಿದಂತೆ ಶಾರುಖ್ ಖಾನ್ ಸದ್ಯ ತಮ್ಮ ಪುತ್ರಿ ಸುಹಾನಾ ಜೊತೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದಲ್ಲಿ ಬರಲಿರುವ ಸುಹಾನಾ ಖಾನ್ ಅಭಿನಯದ ಎರಡನೇ ಚಿತ್ರ ಈ ಜನವರಿಯಿಂದ ಆರಂಭವಾಗಲಿದೆ. ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್ ಸಮಯಕ್ಕೆ ಮುಗಿಯುವ ನಿರೀಕ್ಷೆ ಇದ್ದು, 2026ರ ಈದ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಫೈಟರ್, ವಾರ್, ಪಠಾಣ್ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಶಾರುಖ್ ಖಾನ್ ಪತ್ನಿ ಗೌರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಇನ್ನೂ ಅಭಿಷೇಕ್ ಬಚ್ಚನ್ ಕಿಂಗ್ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿರುವುದು ಈ ಚಿತ್ರದ ವಿಶೇಷತೆಯಲ್ಲೊಂದು.


Click it and Unblock the Notifications











