ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಅಂತ ಈಗ ಗೊತ್ತಾಯ್ತು; ಆದಿಪುರುಷ್ ಟ್ರೋಲ್ ಮಾಡಿದ ಸೆಹ್ವಾಗ್!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಟ್ರೋಲ್ಗೆ ಒಳಗಾಗಿರುವ ವಿಷಯವೆಂದರೆ ಅದು ಆದಿಪುರುಷ್. ಹೌದು, ಭಾರತದ ಬಹುತೇಕ ಎಲ್ಲಾ ಟ್ರೋಲಿಗರು ಆದಿಪುರುಷ್ ಚಿತ್ರವನ್ನು ಟ್ರೋಲ್ ಮಾಡಿದ್ದಾರೆ. ರಾಮಾಯಣ ಕಥೆ ಆಧಾರಿತ ಸಿನಿಮಾವೆಂದು ಬಂದಿದ್ದ ಆದಿಪುರುಷ್ ಚಿತ್ರವನ್ನು ಜನರು ಒಪ್ಪಿಕೊಳ್ಳಲೇ ಇಲ್ಲ.
ಚಿತ್ರದ ಕುರಿತಾದ ವಿಮರ್ಶೆಗಳನ್ನು ಓದಲು ಶುರು ಮಾಡಿದರೆ ಹತ್ತರ ಮಧ್ಯದಲ್ಲಿ ಒಂದು ಕಾಮೆಂಟ್ ಮಾತ್ರ ಚಿತ್ರ ಚೆನ್ನಾಗಿದೆ ಎಂದು ಕಂಡುಬರುವಷ್ಟು ಹೀನಾಯ ವಿಮರ್ಶೆಗಳನ್ನು ಆದಿಪುರುಷ್ ಪಡೆದುಕೊಂಡಿತು. ಇನ್ನು ಬಿಡುಗಡೆಗೂ ಮುಂಚೆಯಿಂದಲೂ ತೀವ್ರ ನೆಗೆಟಿವ್ ವಿಮರ್ಶೆಗಳನ್ನು ಟೀಸರ್ ಮೂಲಕ ಪಡೆದುಕೊಂಡಿದ್ದ ಆದಿಪುರುಷ್ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ.

ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಇದು ರಾಮಾಯಣ ಅಲ್ಲ, ಮಾಡರ್ನ್ ಅಪ್ಡೇಟೆಡ್ ರಾಮಾಯಣ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದವು.
ಚಿತ್ರದಲ್ಲಿ ಎಲ್ಲಾ ಪಾತ್ರಗಳ ವಸ್ತ್ರದ ವಿಧಾನ ರಾಮಾಯಣಕ್ಕೆ ಹೋಲಿಕೆಯಾಗ್ತಿಲ್ಲ, ಪಾತ್ರಗಳ ಲುಕ್ ಅನ್ನೂ ಸಹ ದೊಡ್ಡ ಮಟ್ಟದಲ್ಲಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಹನುಮಂತನ ಪಾತ್ರದಲ್ಲೂ ಸಹ ಬದಲಾವಣೆ ಇದೆ ಎಂದು ಆರೋಪಿಸಿದ್ದ ಸಿನಿ ರಸಿಕರು ಹನುಮಂತ ಹೇಳುವ ಬಹುತೇಕ ಡೈಲಾಗ್ಗಳು ಈಗಿನ ಕಾಲದಲ್ಲಿ ಮಾತನಾಡುವ ಹಾಗೆ ಇದೆ, ಈ ಸಂಭಾಷಣೆಗಳನ್ನು ಕೇಳಿದಾಗ ಇದೊಂದು ಪೌರಾಣಿಕ ಚಿತ್ರ ಎನಿಸುವುದೇ ಇಲ್ಲ ಎಂದು ಕಿಡಿಕಾರಿದ್ದರು.
ಹೀಗೆ ಹಲವಾರು ಕಾರಣಗಳಿಂದಾಗಿ ಆದಿಪುರುಷ್ ತೀವ್ರ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು ಹಾಗೂ ಈಗಲೂ ಸಹ ಆಗುತ್ತಲೇ ಇದೆ. ಇನ್ನು ಈ ಚಿತ್ರವನ್ನು ಕೇವಲ ಸಾಮಾನ್ಯ ಸಿನಿ ರಸಿಕರು ಮಾತ್ರವಲ್ಲದೇ ಸಿನಿಮಾ ರಂಗದ ಹಲವು ಕಲಾವಿದರೂ ಸಹ ಟ್ರೋಲ್ ಮಾಡಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹ ಆದಿಪುರುಷ್ ಚಿತ್ರವನ್ನು ಟ್ರೋಲ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ತಮ್ಮ ಟ್ವೀಟ್ಗಳ ಮೂಲಕ ಟ್ರೋಲ್ ಮಾಡುವ ವಿರೇಂದ್ರ ಸೆಹ್ವಾಗ್ ಆದಿಪುರುಷ್ ಚಿತ್ರ ಚೆನ್ನಾಗಿಲ್ಲ ಎಂಬುದನ್ನೂ ಸಹ ಟ್ರೋಲ್ ರೂಪದಲ್ಲಿಯೇ ತಿಳಿಸಿದ್ದಾರೆ. "ಆದಿಪರುಷ್ ಚಿತ್ರವನ್ನು ನೋಡಿದ ನಂತರ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬುದು ತಿಳಿಯಿತು" ಎಂದು ಬರೆದುಕೊಂಡಿದ್ದಾರೆ.
ಆದಿಪುರುಷ್ ಚಿತ್ರದಲ್ಲಿ ರಾಮನ ಪಾತ್ರ ಹಾಗೂ ಬಾಹುಬಲಿ ಚಿತ್ರದಲ್ಲಿ ಬಾಹುಬಲಿಯ ಪಾತ್ರವನ್ನು ಪ್ರಭಾಸ್ ನಿರ್ವಹಿಸಿದ್ದು, ಆದಿಪುರುಷ್ ಚಿತ್ರ ಚೆನ್ನಾಗಿರದ ಕಾರಣ ಕಟ್ಟಪ್ಪ ಪ್ರಭಾಸ್ ಬೆನ್ನಿಗೆ ಚೂರಿ ಹಾಕಿದ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಆದಿಪುರುಷ್ ಒಂದೆಡೆ ಟ್ರೋಲಿಗರ ಕೈಗೆ ಸಿಕ್ಕಿ ಕೆಟ್ಟ ಟೀಕೆಗಳನ್ನು ಎದುರಿಸುತ್ತಿದ್ದರೆ ಮತ್ತೊಂದೆಡೆ ಕಲೆಕ್ಷನ್ ವಿಷಯದಲ್ಲಿಯೂ ಸಹ ಚಿತ್ರ ಮಕಾಡೆ ಮಲಗಿದೆ. ಮೊದಲ ದಿನ 140 ಕೋಟಿ ಗಳಿಸಿದ್ದ ಆದಿಪುರುಷ್ ಎರಡನೇ ದಿನ 100, ಮೂರನೇ ದಿನವೂ ಸಹ 100 ಕೋಟಿ ಗಲ್ಲಾಪೆಟ್ಟಿಗೆ ಸೇರಿತು, ನಾಲ್ಕನೇ ದಿನ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತು, ಐದನೇ ದಿನ 20 ಕೋಟಿ ಕಲೆಕ್ಷನ್ ಮಾಡಿತು, ಆರನೇ ದಿನ ಕೇವಲ 15 ಕೋಟಿ ಗಳಿಕೆ ಮಾಡಿತು. ಹೀಗೆ ಚಿತ್ರ 6 ದಿನಗಳ ಪ್ರದರ್ಶನವನ್ನು ಪೂರೈಸಿದ್ದು ವಿಶ್ವ ಬಾಕ್ಸ್ ಆಫೀಸ್ನಲ್ಲಿ 415 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ನಂತರದ ದಿನಗಳ ಕಲೆಕ್ಷನ್ ವಿವರವನ್ನು ನೀಡಿಲ್ಲ. ಹೀಗೆ ದಿನದಿಂದ ದಿನಕ್ಕೆ ಕಲೆಕ್ಷನ್ ಕ್ಷೀಣಿಸಿದ್ದು, ಚಿತ್ರ ಏನಿಲ್ಲವೆಂದರೂ ಕನಿಷ್ಟ 50 ಕೋಟಿ ನಷ್ಟ ಅನುಭವಿಸುವುದಂತೂ ಪಕ್ಕಾ.


Click it and Unblock the Notifications











