ಅಭಿಷೇಕ್ ಬಚ್ಚನ್ ಅವರಿಂದ ದೂರವಾಗುತ್ತಾರಾ ಐಶ್ವರ್ಯ ರೈ ? ಆ ಫೋಸ್ಟ್ ನೋಡಿ ಅಭಿಮಾನಿಗಳು ಹೇಳಿದ್ದೇನು..?
ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಮತ್ತೆ ಒಂದಾಗಬಹುದು. ಇನ್ನೂ ಕೆಲವೊಮ್ಮೆ ಕೆಲ ದಿನಗಳವರೆಗೆ ದೂರ ಇದ್ದು ಆ ನಂತರ ಮತ್ತೆ ಒಂದೇ ಸೂರಿನಡಿ ಬದುಕಲು ಶುರು ಮಾಡಬಹುದು. ಇದೆಲ್ಲವೂ ಮಾಮೂಲು. ಆದರೆ, ಬಣ್ಣದ ಲೋಕದಲ್ಲಿ ಈ ಚಿಕ್ಕ ವಿಚಾರನೇ ದೊಡ್ಡದು. ಗಂಡ-ಹೆಂಡತಿ ಕೆಲ ಕಾಲ ಜೊತೆಯಾಗಿ ಕಾಣಿಸಿಕೊಳ್ಳದಿದ್ದರೆ ಅವರ ಸಂಬಂಧ ಹಳಸಿದೆ ಎಂದೇ ಅನೇಕರು ಅಂದುಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಮಾಡಲು ಶುರು ಮಾಡುತ್ತಾರೆ. ಇದಕ್ಕೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಾಂಸಾರಿಕ ಜೀವನ ಸದ್ಯದ ಉದಾಹರಣೆ.
ಹೌದು, ಕಳೆದ ಕೆಲ ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವೆ ಸಂಬಂಧ ಅಷ್ಟಕಷ್ಟೇ ಎನ್ನುವ ಮಾತು ಕೇಳಿ ಬರುತ್ತಿದೆ. ಯಾವುದೇ ಕ್ಷಣದಲ್ಲಾದರೂ ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯ ರೈ ದೂರವಾಗಬಹುದು ಎನ್ನುವ ಮಾತು ಕೂಡ ದಶದಿಕ್ಕುಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಈ ವರ್ಷದ ಆರಂಭದಲ್ಲಿಯೇ ಅಭಿಷೇಕ್ ಬಚ್ಚನ್ ಮನೆಯಿಂದ ಗಂಟುಮೂಟೆ ಸಮೇತ ಹೊರ ಬಂದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ.

ಹೀಗೆ ಇವರ ದಾಂಪತ್ಯ ಜೀವನದ ಕುರಿತು ಹತ್ತು ಹಲವು ಸುದ್ದಿಗಳು ಕಳೆದ ಮೂರು-ನಾಲ್ಕು ತಿಂಗಳಿಂದ ಕೇಳಿ ಬರುತ್ತಲೇ ಇವೆ. ಆದರೂ ಕೂಡ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಮೌನ ಮುರಿದಿಲ್ಲ. ಯಾವುದು ಸತ್ಯ ಯಾವುದು ಸುಳ್ಳು ಎಂದು ಹೇಳಿಲ್ಲ. ಈ ಕಾರಣಕ್ಕೆ ಅನೇಕರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದೂರವಾಗುವುದು ಖಚಿತ ಎಂದು ಅಂದುಕೊಂಡಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಮುರಿದು ಬೀಳಲು ಅಭಿಷೇಕ್ ಬಚ್ಚನ್ ಜೊತೆ ದಸವಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ನಿಮ್ರತ್ ಕೌರ್ ಕಾರಣ ಎಂದು ಪುಕಾರು ಹಬ್ಬಿಸಿದ್ದಾರೆ. ಆದರೆ ಈಗ ಇವರೆಲ್ಲರಿಗೆ ಐಶ್ವರ್ಯ ರೈ ಒಂದು ವಾಕ್ಯದಲ್ಲಿ ಉತ್ತರ ನೀಡಿದ್ದಾರೆ. ಬಾಯಿಗೆ ಬೀಗ ಜಡಿದಿದ್ದಾರೆ
ಹೌದು, ಮೊನ್ನೆ ಅಮಿತಾಭ್ ಬಚ್ಚನ್ ಅವರ ಬರ್ತ್ಡೇಯಂದು ಅನೇಕರು ಐಶ್ವರ್ಯ ರೈ ಅವರ ಸಾಮಾಜಿಕ ಜಾಲತಾಣದ ಮೇಲೊಂದು ಕಣ್ಣಿಟ್ಟಿದ್ದರು. ತಮ್ಮ ಮಾವನ ಹುಟ್ಟುಹಬ್ಬಕ್ಕೆ ಐಶ್ವರ್ಯ ರೈ ಶುಭಾಶಯವನ್ನು ಕೋರುತ್ತಾರಾ ಇಲ್ಲವಾ ಎಂದು ಜಿಜ್ಞಾಸೆಯಿಂದ ನೋಡುತ್ತಿದ್ದರು. ಆದರೆ, ಐಶ್ವರ್ಯ ರೈ ಮಾತ್ರ ರಾತ್ರಿಯಾದರು ಕೂಡ ಶುಭಾಶಯವನ್ನು ಕೋರಲಿಲ್ಲ. ಹೀಗಾಗಿಯೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಬಂಧ ಅಂತ್ಯವಾಯಿತು ಎಂದು ಹುಯಿಲೆಬ್ಬಿಸಲು ಅನೇಕರು ಮುಂದಾಗಿದ್ದರು. ಆದರೆ, ಅಷ್ಟರಲ್ಲಿಯೇ ಇನ್ನೇನು ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬದ ಸಂಭ್ರಮ ಸಡಗರ ಮುಕ್ತಾಯವಾಗಬೇಕೆನ್ನುವಷ್ಟರಲ್ಲಿ ಐಶ್ವರ್ಯ ರೈ ತಮ್ಮ ಮಾವ ಅಮಿತಾಭ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು. ಅಮಿತಾಭ್ ಜೊತೆ ಆರಾಧ್ಯ ಇರುವ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಪಾ-ದಾದಾಜಿ, ದೇವರ ಆಶೀರ್ವಾದ ಸದಾ ಮೇಲಿರಲಿ ಎಂದರು.
ಸದ್ಯಕ್ಕೆ ಐಶ್ವರ್ಯ ರೈ ಮಾಡಿದ್ದ ಈ ಪೋಸ್ಟ್ಗೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಚ್ಚನ್ ಕುಟುಂಬದಿಂದ ಐಶ್ವರ್ಯ ರೈ ದೂರವಾಗಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿಯೆನ್ನುತ್ತಿದ್ದಾರೆ. ವಿಚ್ಚೇದನದ ಕುರಿತು ಸುದ್ದಿ ಹಬ್ಬಿಸುತ್ತಿರುವವರಿಗೆ ಒಂದು ಫೋಸ್ಟ್ ಮೂಲಕ ಐಶ್ವರ್ಯ ತಿರುಗೇಟು ನೀಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಅವರಿಂದ ಯಾವುದೇ ಕಾರಣಕ್ಕೂ ದೂರವಾಗಬೇಡಿ ಎಂಬ ಮನವಿಯನ್ನು ಕೂಡ ಕೆಲವರು ಮಾಡುತ್ತಿದ್ದಾರೆ.


Click it and Unblock the Notifications











