ಐಶ್ವರ್ಯ ರೈ ವಿರುದ್ಧ ಸೇಡಿನ ಜ್ವಾಲೆ ; ಹೊಟ್ಟೆ ಉರಿಸಲು ಸ್ನೇಹಾ ಉಲ್ಲಾಳ್ನ ಕರೆತಂದ್ರಾ ಸಲ್ಮಾನ್ ಖಾನ್ ? ಸತ್ಯವೇನು?
ಮಣಿರತ್ನಂ ಅವರ ''ಇರುವರ್'' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವರ್ಯ ಹೊರ ಹೊಮ್ಮಿದರು. ನೇಮು, ಫೇಮನ್ನು ಗಳಿಸಿದರು. ಹಿಂದಿ ಉದ್ಯಮವನ್ನು ಅಕ್ಷರಶಃ ಆಳಿದರು.
ಇಂಥಾ ಐಶ್ವರ್ಯ ರೈ ಅವರನ್ನು ಹೋಲುವ ಅನೇಕರು ಇಲ್ಲಿಯವರೆಗೆ ಗಮನ ಸೆಳೆದಿದ್ದಾರೆ. ಆ ಪೈಕಿ ಸ್ನೇಹಾ ಉಲ್ಲಾಳ್ ಕೂಡ ಒಬ್ಬರು. ಹೌದು, ಸ್ನೇಹಾ ಉಲ್ಲಾಳ್.. ನೋಡಲು ಥೇಟ್ ಐಶ್ವರ್ಯ ರೈ ಅವರಂತೆಯೇ ಇದ್ಧಾರೆ ಎನ್ನುವ ಕಾರಣಕ್ಕೆ ಒಂದ್ಕಾಲದಲ್ಲಿ ಸದ್ದು ಮಾಡಿ ಸುದ್ದಿಯಾದ ಚೆಲುವೆ.

ಸಲ್ಮಾನ್ ಖಾನ್ ಅಭಿನಯದ ''ಲಕ್ಕಿ - ನೋ ಟೈಮ್ ಫಾರ್ ಲವ್'' ಇವರ ಮೊದಲ ಚಿತ್ರ. ಇಲ್ಲಿಂದ ಇವರ ಬದುಕು ಬದಲಾಯ್ತಾದರೂ ಚಿತ್ರರಂಗದಲ್ಲಿ ಮಿಂಚುವ ''ಲಕ್'' ಇವರಿಗೆ ಇರಲಿಲ್ಲ. ಐಶ್ವರ್ಯ ರೈ ಜೊತೆಗಿನ ಹೋಲಿಕೆಯೇ ಇವರ ಪಾಲಿಗೆ ಮುಳ್ಳಾಯ್ತು.
ಬಾಲಿವುಡ್ನಲ್ಲಿ ಅವಕಾಶ ಮರಿಚೀಕೆಯಾಯ್ತು. ಈ ಹಿನ್ನೆಲೆ ದಕ್ಷಿಣದತ್ತ ವಲಸೆ ಬಂದ ಸ್ನೇಹಾ ಆ ನಂತರ ತೆಲುಗಿನಲ್ಲಿ '''ಉಲ್ಲಾಸಂಗ ಉತ್ಸಾಹಂಗ'' ಚಿತ್ರದಲ್ಲಿ ಕಾಣಿಸಿಕೊಂಡರು. ವಿಶೇಷ ಅಂದರೆ ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿದರು. ಇನ್ನೂ ವಿಶೇಷ ಅಂದರೆ ಇದೇ ಚಿತ್ರದಲ್ಲಿ ಗಣೇಶ್ಗೆ ''ಧುರಂಧರ್''ನ ಸೂತ್ರಧಾರ ಆದಿತ್ಯ ಧರ್ ಅವರ ಪತ್ನಿ ಯಾಮಿ ಗೌತಮ್ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಈ ಮೂಲಕ ಕನ್ನಡಕ್ಕೆ ಬಂದಿದ್ದರು.
ಇಂಥಾ ಸ್ನೇಹಾ ಉಲ್ಲಾಳ್ ತಮಗೆ ಸಲ್ಮಾನ್ ಖಾನ್ ಅವಕಾಶ ನೀಡಿದ್ದು ಯಾಕೆ..? ನೀಡಿದ್ಹೇಗೆ..? ಎನ್ನುವ ವಿಚಾರವನ್ನು ಈಗ ಎರಡು ದಶಕದ ನಂತರ ಹಂಚಿಕೊಂಡಿದ್ದಾರೆ. ಈ ಕುರಿತು ''ಆಲ್ಫಾ ನಿಯಾನ್ ಸ್ಟುಡಿಯೋಜ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸ್ನೇಹಾ ಉಲ್ಲಾಳ್ ನಾನು ಐಶ್ವರ್ಯ ರೈ ಅವರಂತೆಯೇ ಕಾಣುತ್ತೇನೆ ಎಂದು ಸಲ್ಮಾನ್ ಖಾನ್ ನನಗೆ ಅವಕಾಶ ನೀಡಿದರು ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅದೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.
ನಾನು ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಅವರ ಕಾಲೇಜ್ನಲ್ಲಿಯೇ ಓದುತ್ತಿದ್ದೆ, ಇದೇ ಸಮಯದಲ್ಲಿ ಅರ್ಪಿತಾ ಅವರ ಸ್ನೇಹಿತರು ನನ್ನನ್ನೂ ನೋಡಿದರು ಎಂದು ಹೇಳಿರುವ ಸ್ನೇಹಾ ಅದೇ ಸಮಯದಲ್ಲಿ ''ಲಕ್ಕಿ'' ಚಿತ್ರಕ್ಕೆ ನಾಯಕಿಯನ್ನು ಹುಡಕಲಾಗುತ್ತಿತ್ತು ಎಂದು ಹೇಳಿದ್ಧಾರೆ.

ನನಗೆ ನಟಿಯಾಗಬೇಕು, ಚಿತ್ರರಂಗಕ್ಕೆ ಬರಬೇಕು ಎಂಬ ಯಾವ ಆಸೆ ಕೂಡ ಇರಲಿಲ್ಲ ಆದರೆ ವಿಧಿ ನನ್ನನ್ನೂ ಇಲ್ಲಿ ಕರೆತಂದಿತು ಎಂದು ಹೇಳಿರುವ ಸ್ನೇಹಾ ಉಲ್ಲಾಳ್ ಆ ಸಮಯದಲ್ಲಿ ಐಶ್ವರ್ಯ ರೈ ಅವರನ್ನು ನಾನು ಹೋಲುತ್ತೇನೆ ಎಂದು ತುಂಬಾ ದೊಡ್ಡ ಸುದ್ದಿಯಾಗಿತ್ತು. ಇದೇ ಸುದ್ದಿಯನ್ನು ಚಿತ್ರತಂಡ ಕೂಡ ಪ್ರಚಾರದ ತಂತ್ರವನ್ನಾಗಿಯೂ ಕೂಡ ಬಳಸಿಕೊಂಡಿತು ಎಂದು ಹೇಳಿದ್ದಾರೆ.
ಆಗ ನನಗೆ ತೀರಾ ಚಿಕ್ಕ ವಯಸ್ಸು. 17 ವರ್ಷವಷ್ಟೇ. ಯಾವುದೇ ಹಠ ಅಥವಾ ಅಹಂ ನನ್ನಲ್ಲಿ ಇರಲಿಲ್ಲ ಎಂದು ಹೇಳಿರುವ ಸ್ನೇಹಾ ಉಲ್ಲಾಳ್ ನನ್ನ ಪ್ರತಿಭೆಗಿಂತ ಹೆಚ್ಚಾಗಿ ನನ್ನ ಮುಖವನ್ನು ಐಶ್ವರ್ಯಾ ರೈ ಅವರಿಗೆ ಹೋಲಿಸಿ ಚರ್ಚೆ ಮಾಡಿದರೇ ಹೊರತು ನನ್ನಲ್ಲಿನ ಕಲೆಗೆ ಬೆಲೆ ಸಿಗಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಸಲ್ಮಾನ್ ಖಾನ್ ಅವರನ್ನು ಕೂಡ ಹೊಗಳಿರುವ ಸ್ನೇಹಾ ಉಲ್ಲಾಳ್ ನನ್ನ ವಿಚಾರದಲ್ಲಿ ಸಲ್ಮಾನ್ ತುಂಬಾನೇ ತಾಳ್ಮೆಯಿಂದ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಅವರ ಹೊರಗಿನ 'ರಗಡ್' ಇಮೇಜ್ಗಿಂತ ಅವರು ಚಿತ್ರದ ಸೆಟ್ನಲ್ಲಿ ನನ್ನ ಪಾಲಿಗೆ ಒಬ್ಬ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ಹೇಳಿರುವ ಸ್ನೇಹಾ ಉಲ್ಲಾಳ್ ಸಾಕಷ್ಟು ಧೈರ್ಯವನ್ನು ನನಗೆ ಅವರು ತುಂಬಿದ್ದರು ಎಂದು ಹೇಳಿದ್ಧಾರೆ. ಅವಕಾಶ ನೀಡಿದ್ದಕ್ಕೆ ಧನ್ಯವಾದವನ್ನು ಕೂಡ ಹೇಳಿದ್ದಾರೆ.
ಅಂದ್ಹಾಗೇ ''ಲಕ್ಕಿ'' ಚಿತ್ರಕ್ಕೆ ಸ್ನೇಹಾ ಉಲ್ಲಾಳ್ ಆಯ್ಕೆಯಾಗುವ ಒಂದೆರಡು ವರ್ಷದ ಹಿಂದೆಯಷ್ಟೇ ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಲವ್ ಮತ್ತು ಬ್ರೇಕಪ್ ವಿಚಾರ ಬೀದಿ ರಂಪ ಆಗಿತ್ತು. ಬಾಲಿವುಡ್ನವರಿಗೆ ತಲೆ ನೋವಾಗಿತ್ತು. ಸ್ನೇಹಾ ಉಲ್ಲಾಳ್ ಅವರನ್ನು ಐಶ್ವರ್ಯ ರೈ ಮೇಲಿನ ಕೋಪ, ದ್ವೇಷದಿಂದಲೇ ಸಲ್ಮಾನ್ ಖಾನ್ ಆಯ್ಕೆ ಮಾಡಿದ್ದು ಎನ್ನುವ ಸುದ್ದಿಯನ್ನು ಹಬ್ಬಿಸಿದ್ದ ಕೆಲವರು ಸ್ನೇಹಾ ಉಲ್ಲಾಳ್ ಮತ್ತು ಐಶ್ವರ್ಯ ರೈ ನಡುವೆ ಶೀತಲ ಸಮರ ಇದೆ, ಸ್ನೇಹಾ ಉಲ್ಲಾಳ್ ಅವರನ್ನು ಐಶ್ವರ್ಯ ರೈ ದ್ವೇಷ ಮಾಡ್ತಾರೆ ಎಂದು ಕೂಡ ಸುದ್ದಿಯನ್ನು ಹಬ್ಬಿಸಿದ್ದರು.

ಈ ವಿಚಾರದ ಕುರಿತು ಕುಡ ಮಾತನಾಡಿರುವ ಸ್ನೇಹಾ, ಐಶ್ವರ್ಯಾ ಅವರನ್ನು ನಾನು ಭೇಟಿಯಾಗಲು ತುಂಬಾ ಹೆದರಿದ್ದೆ, ಯಾಕೆಂದರೆ.. ಹಬ್ಬಿರುವ ಸುದ್ದಿಗಳಿಂದ ಅವರೆಲ್ಲಿ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾರೆ, ನನ್ನನ್ನೂ ತಪ್ಪು ತಿಳಿದುಕೊಳ್ತಾರೆ ಎನ್ನುವ ಆತಂಕ ನನ್ನಲ್ಲಿತ್ತು ಎಂದು ಹೇಳಿರುವ ಸ್ನೇಹಾ ಅದೊಂದು ದಿನ ಧೈರ್ಯ ಮಾಡಿ ಅವರನ್ನು ಭೇಟಿಯಾದೆ, ಆದರೆ ಆಗ ನನಗೆ ಅಚ್ಚರಿ ಕಾದಿತ್ತು ಎಂದು ಹೇಳಿದ್ಧಾರೆ.
ನಾನು ಐಶ್ವರ್ಯ ರೈ ಅವರ ಬಳಿ ಹೋದ ಕೂಡಲೇ ದಯವಿಟ್ಟು ನನ್ನನ್ನು ದ್ವೇಷಿಸಬೇಡಿ ಎಂದು ಕೇಳಿಕೊಂಡಿದ್ದೆ ಎಂದು ನೆನಪು ಮಾಡಿಕೊಂಡಿರುವ ಸ್ನೇಹಾ, ಐಶ್ವರ್ಯಾ ರೈ ತುಂಬಾ ಘನತೆಯಿಂದ ಆಗ ನನ್ನ ಜೊತೆ ನಡೆದುಕೊಂಡರು ಎಂದು ಹೇಳಿದ್ದಾರೆ. ಪ್ರೀತಿಯಿಂದ ನನ್ನನ್ನೂ ಬರ ಮಾಡಿಕೊಂಡು ಬಾಲಿವುಡ್ ಕುಟುಂಬಕ್ಕೆ ನಿನಗೆ ಸ್ವಾಗತ ಎಂದು ಐಶ್ವರ್ಯ ಹೇಳಿದರು ಈ ಮೂಲಕ ನನ್ನ ಆತಂಕವನ್ನು ದೂರ ಮಾಡಿದರು ಎಂದು ಹೇಳಿದ್ಧಾರೆ.


Click it and Unblock the Notifications











