ನಾಯಿ ಬಾಲ ಯಾವತ್ತೂ ಡೊಂಕೇ, ಗುಟ್ಕಾ ಜಾಹೀರಾತಿನ ಪ್ರಚಾರದ ಬಗ್ಗೆ ಅಜಯ್ ದೇವಗನ್ ಹೇಳಿದ್ದೇನು..?
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು.
ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಯಾರಾದರೂ ಹಾಳಾಗಿ ಹೋಗಲಿ ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಎಂದು ತಪ್ಪು ಸಂದೇಶವನ್ನ ನೀಡಿ ಕೈ ತೊಳೆದುಕೊಳ್ಳುತ್ತಾರೆ.ಆದರೆ ಇವರ ಈ ಜಾಹೀರಾತುಗಳಿಂದ ಆಗುವ ಪರಿಣಾಮ ದೊಡ್ಡದು ಮತ್ತು ಗಾಢವಾದದ್ದು. ಯಾಕೆಂದರೆ ಸಿನಿಮಾ ತಾರೆಯರನ್ನ ದೇವರೆಂದು ಪೂಜಿಸುವವರ ಸಂಖ್ಯೆ ನಮ್ಮಲ್ಲಿ ತುಸು ಹೆಚ್ಚೇ ಇದೆ. ಇನ್ನೂ.. ತಮ್ಮ ನೆಚ್ಚಿನ ತಾರೆಯರ ಹಾವ-ಭಾವ ಅವರ ಜೀವನ ಶೈಲಿಯನ್ನ ಅನುಸರಿಸುವವರು ಕೂಡ ಇದ್ದಾರೆ. ಆದರೂ ಚಿತ್ರತಾರೆಯರಲ್ಲಿ ತಾವು ಮಾಡಿದ್ದೇ ಸರಿ ಎನ್ನುವ ಅಹಂ ಇರುತ್ತೆ. ಇದಕ್ಕೆ ಅಜಯ್ ದೇವಗನ್ ಸದ್ಯದ ಉದಾಹರಣೆ.

ಹೌದು, ಅಜಯ್ ದೇವಗನ್ ಗುಟ್ಕಾ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ವಿಚಾರ ನಿಮಗೆ ಗೊತ್ತೇ ಇರಬೇಕು. ಈ ಕಾರಣಕ್ಕೆ ಅನೇಕ ಬಾರಿ ಅಜಯ್ ದೇವಗನ್ ಟ್ರೋಲ್ ಆಗಿದ್ದು ಇದೆ. ಜನರ ಆಕ್ರೋಶಕ್ಕೆ ಗುರಿಯಾಗಿದ್ದು ಇದೆ. ಇನ್ನೂ..ವಿಮಲ್ ನ ಪ್ಯಾಕೇಟ್ ತುಂಡರಿಸಿ ಬಾಯಿಗೆ ಸುರುವಿಕೊಂಡು ಬಾಯಲ್ಲಿ ಹೇಳಿ ಕೇಸರಿ ಎಂದು ಅಜಯ್ ದೇವಗನ್ ಹೇಳುವ ಡೈಲಾಗ್ನ ಜನ ಇಲ್ಲಿಯವರೆಗೆ ತರಹೇವಾರಿ ಬಳಿಸಿಕೊಂಡಿದ್ದಾರೆ. ಅಜಯ್ ದೇವಗನ್ ಕಾಲೆಳೆದಿದ್ದಾರೆ. ಈ ಮೂಲಕವಾದರೂ ಅಜಯ್ ದೇವಗನ್ ಬದಲಾಗುತ್ತಾರೆ, ಜಾಹೀರಾತಿನಿಂದ ಹಿಂದೆ ಸರಿಯುತ್ತಾರೆ ಎನ್ನುವ ನಿರೀಕ್ಷೆ ಅವರದ್ದು.
ಆದರೆ, ನಾಯಿ ಬಾಲ ಯಾವತ್ತಿದ್ದರೂ ಡೊಂಕು. ಸಾಮಾನ್ಯ ಜನರಿಂದ ಅವರ ಅಭಿಮಾನಿಗಳಿಂದ ಎಷ್ಟೇ ಒತ್ತಡ ಬಂದರೂ ಕೂಡ ಅಜಯ್ ದೇವಗನ್ ಈ ಜಾಹೀರಾತು ಮಾಡುವುದನ್ನು ನಿಲ್ಲಿಸಿಲ್ಲ. ಬಹುಶಃ ನಿಲ್ಲಿಸುವುದು ಇಲ್ಲ. ಯಾಕೆಂದರೆ ಅಜಯ್ ದೇವಗನ್ ಜನರ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಟ್ರೋಲ್, ಮೀಮ್ಸ್ ಗಳಿಗೆ ಕೂಡ ಕ್ಯಾರೇ ಅನ್ನಲ್ಲ. ಖುದ್ದು ಸಂದರ್ಶನವೊಂದರಲ್ಲಿ ಅಜಯ್ ದೇವಗನ್ ಈ ಮಾತನ್ನು ಹೇಳಿದ್ದಾರೆ.
ಹೌದು, ಸಿಂಗಂ ಅಗೇನ್ ಚಿತ್ರ ಗೆದ್ದಿರುವ ಹಿನ್ನೆಲೆ ಸಂಭ್ರಮದಲ್ಲಿ ತೇಲುತ್ತಿರುವ ಅಜಯ್ ದೇವಗನ್ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆ ರಣವೀರ್ ಅಲಹಬಾದಿಯಾಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ವಿಮಲ್ ಎಲೈಚಿ ಪಾನ್ ಮಸಾಲಾ ಜಾಹೀರಾತು ಮತ್ತು ಆ ಜಾಹೀರಾತು ಸುತ್ತ ಮುತ್ತದ ವಿವಾದ ಹಾಗೂ ಟ್ರೋಲ್ ಬಗ್ಗೆ ರಣವೀರ್ ಅಲಹಬಾದಿಯಾ ಪ್ರಶ್ನೆ ಮಾಡಿದ್ಧಾರೆ. ಇದಕ್ಕೆ ಉತ್ತರ ನೀಡಿರುವ ಪರವಾಗಿಲ್ಲ ನಾನು ಅದೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ರೋಹಿತ್ ಶೆಟ್ಟಿ ಈ ವಿಚಾರದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗೀಗ ಆ ಮೀಮ್ಗಳನ್ನು ನಾವು ಕೂಡ ನೋಡಿ ಎಂಜಾಯ್ ಮಾಡುತ್ತಿದ್ದೇವೆ ಎಂದಿರುವ ರೋಹಿತ್ ಶೆಟ್ಟಿ ಈ ಹೊಸ ಮೀಮ್ ನೋಡಿದೀಯಾ ಎಂದು ನಾವೇ ಈಗ ಕೇಳುವಂತಾಗಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಅಜಯ್ ದೇವಗನ್ ಅವರ ಈ ಅಸಡ್ಡೆ ಧೋರಣೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಮಾಡುತ್ತಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವುಡು ಬೇಡ ಕೊನೆ ಪಕ್ಷ ತನ್ನಿಂದ ಸಮಾಜದ ಒಂದು ವರ್ಗ ದಾರಿ ತಪ್ಪುತ್ತೆ ಎನ್ನುವ ಅರಿವು ಕೂಡ ಅಜಯ್ ದೇವಗನ್ ಅವರಿಗೆ ಇಲ್ಲವಲ್ಲ ಎಂದು ಅನೇಕರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಸಾಮಾಜಿಕ ಸಿನಿಮಾ ಮಾಡಿ ಹೀರೋ ಅನ್ನಿಸಿಕೊಳ್ಳೋದಷ್ಟೇ ಅಲ್ಲ, ಬಹು ಜನರನ್ನು ತಲುಪುವ ಜಾಹಿರಾತುಗಳ ಆಯ್ಕೆಯಲ್ಲೂ ಸಂದೇಶವಿರಲಿ ಎಂದು ಅಭಿಮಾನಿಗಳು ಮತ್ತು ವಿರೋಧಿಗಳಿಬ್ಬರೂ ಅಜಯ್ ದೇವಗನ್ಗೆ ಸಲಹೆಯನ್ನು ನೀಡುತ್ತಿದ್ದಾರೆ.


Click it and Unblock the Notifications











