ತಪ್ಪಿದ 10ನೇ ಬಾಕ್ಸಾಫೀಸ್ ಸಮರ ; ಚಿತ್ರರಂಗದ ಹಿತದೃಷ್ಟಿಯಿಂದ ಅಕ್ಷಯ್ ಕುಮಾರ್ಗೆ ಜಾಗ ಬಿಟ್ಟು ಕೊಟ್ಟ ಅಜಯ್ ದೇವಗನ್
ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ.
ಈ ಕಾರಣಕ್ಕೆ ಒಂದೇ ದಿನ... ದೊಡ್ಡ ದೊಡ್ಡ ಚಿತ್ರಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಬೇಡಿ ಎಂದು ಎಲ್ಲ ಭಾಷೆಯಲ್ಲಿ ಚಿತ್ರಪ್ರೇಮಿಗಳು ಮನವಿಯನ್ನು ಮಾಡಿಕೊಳ್ಳುತ್ತಾರೆ. ಆಯಾ ಚಿತ್ರರಂಗದ ದೊಡ್ಡವರು ಕೂಡ ಈ ಸಲಹೆಯನ್ನೇ ನೀಡುತ್ತಾರೆ. ಆದರೆ. ಪ್ರೇಕ್ಷಕರ ಅಭಿಲಾಷೆ ಮತ್ತು ಚಿತ್ರರಂಗದವರ ಸಲಹೆಯನ್ನು ಕಡೆಗಣಿಸಿ ಅನೇಕರು ತಮ್ಮ ಚಿತ್ರವನ್ನು ಮತ್ತೊಂದು ಚಿತ್ರದ ಎದುರು ಬಿಡುಗಡೆ ಮಾಡುತ್ತಾರೆ.

ಒಂದೇ ದಿನ ಮಾತ್ರವಲ್ಲ ಒಮ್ಮೊಮ್ಮೆ ಒಂದು ವಾರದ ನಂತರ ಬಿಡುಗಡೆ ಮಾಡಿದರೂ ಕೂಡ ಯಾರಾದರೂ ಒಬ್ಬರು ಸೋಲುವ ಅಪಾಯ ಇರುತ್ತೆ. ಈ ಮಾತು ಅಜಯ್ ದೇವಗನ್ ಗೆ ಚೆನ್ನಾಗಿ ಈಗ ಅರ್ಥ ಆಗಿದೆ. ಹೀಗಾಗಿಯೇ ತಮ್ಮ ಚಿತ್ರದ ಬಿಡುಗಡೆಯನ್ನು ಉದ್ಯಮದ ಹಿತದೃಷ್ಟಿಯಿಂದ ಮುಂದೂಡಿದ್ದಾರೆ ಅಜಯ್ ದೇವಗನ್.
ಹೌದು, ಅಸಲಿಗೆ ಅಜಯ್ ದೇವಗನ್ ಅಭಿನಯದ ''ಧಮಾಲ್ 4'' ಈ ಜುಲೈ 4ರಂದು ಬಿಡುಗಡೆಯಾಗಬೇಕಿತ್ತು. ಅದಕ್ಕೆ ತಯಾರಿಯನ್ನು ಕೂಡ ಮಾಡಿಕೊಳ್ಳಲಾಗಿತ್ತು. ಆದರೆ.. ಒಂದು ವಾರದ ಹಿಂದೆ ಅಂದರೆ ಜೂನ್ 26ರಂದು ಅಕ್ಷಯ್ ಕುಮಾರ್ ಅಭಿನಯದ ''ವೆಲ್ಕಂ ಟು ಜಂಗಲ್'' ಬಿಡುಗಡೆಯಾಗುತ್ತಿದೆ.
ವಿಶೇಷ ಅಂದರೆ ಇವೆರಡು ಚಿತ್ರಗಳಲ್ಲಿ ತಾರೆಯರ ಬಹುದೊಡ್ಡ ದಂಡೇ ಇದೆ. ಇನ್ನು ಎರಡು ನಕ್ಕು ನಲಿಸುವಂತಹ ಸಿನಿಮಾಗಳು. ಎಲ್ಲಕ್ಕಿಂತ ಮುಖ್ಯವಾಗಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಇಬ್ಬರು ಸ್ನೇಹಿತರು. ಆದಾಗ್ಯೂ ಬಾಕ್ಸಾಫೀಸ್ನಲ್ಲಿ ಇಬ್ಬರು ಇಲ್ಲಿಯವರೆಗೆ 09 ಬಾರಿ ಮುಖಾಮುಖಿಯಾಗಿದ್ದಾರೆ.
ಹೀಗೆ 9 ಬಾರಿ ಎದುರಾದಾಗ ಆರಂಭದಲ್ಲಿಯೇ ಹೇಳಿದಂತೆ ಒಬ್ಬರು ಸೋತಿದ್ದಾರೆ. ಮತ್ತೊಬ್ಬರು ಗೆದ್ದಿದ್ದಾರೆ. ಇನ್ನು ಇಬ್ಬರು ಕೂಡ ನಿರ್ಮಾಪಕರು. ಈ ಹಿನ್ನೆಲೆ ನಿರ್ಮಾಪಕನ ಕಷ್ಟ ನಷ್ಟ ಇಬ್ಬರಿಗೂ ಚೆನ್ನಾಗಿ ಗೊತ್ತು. ಮತ್ತೊಂದು ವಿಶೇಷ ಅಂದರೆ ''ವೆಲ್ಕಂ ಟು ಜಂಗಲ್'' ಚಿತ್ರಕ್ಕೆ ಅಕ್ಷಯ್ ಕುಮಾರ್ ನಿರ್ಮಾಪಕರಲ್ಲಿ ಒಬ್ಬರಾದರೆ ''ಧಮಾಲ್ 4'' ಚಿತ್ರದ ನಿರ್ಮಾಣದಲ್ಲಿ ಅಜಯ್ ದೇವಗನ್ ಕೂಡ ಪಾಲುದಾರರು.

ಈ ಎಲ್ಲಾ ಕಾರಣಗಳಿಂದ ಸದ್ಯ ಅಕ್ಷಯ್ ಕುಮಾರ್ ಗೆ ಅಜಯ್ ದೇವಗನ್ ಜಾಗ ಮಾಡಿ ಕೊಟ್ಟಿದ್ದು ತಮ್ಮ ಚಿತ್ರವನ್ನು ಜುಲೈ 4ರಂದು ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಜುಲೈ 4ರ ಬದಲು ಜುಲೈ 17ರಂದು ಬಿಡುಗಡೆ ಮಾಡಲು ಮುಂದಾಗಿದ್ಧಾರೆ. ಈ ಮೂಲಕ ''ವೆಲ್ಕಂ ಟು ಜಂಗಲ್'' ಚಿತ್ರಕ್ಕೆ ಚಿತ್ರಮಂದಿರದಲ್ಲಿ ಉಸಿರಾಡಲು ಸಮಯವನ್ನು ನೀಡಿದ್ದಾರೆ. ಸದ್ಯ ಅಜಯ್ ದೇವಗನ್ ಅವರ ಈ ನಡೆಗೆ ಬಾಲಿವುಡ್ನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಧಮಾಲ್ 4 ತಾರಾಗಣ
ಅಜಯ್ ದೇವಗನ್, ರಿತೇಶ್ ದೇಶ್ಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫೆರಿ, ಸಂಜಯ್ ಮಿಶ್ರಾ, ರವಿ ಕಿಶನ್, ಇಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಾಯೆ ಮುಂತಾದವರು.
ವೆಲ್ಕಂ ಟು ದಿ ಜಂಗಲ್ ಸ್ಟಾರ್ ಕಾಸ್ಟ್
ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಪರೇಶ್ ರಾವಲ್, ಅರ್ಷದ್ ವಾರ್ಸಿ, ಸಂಜಯ್ ದತ್, ಜಾಕಿ ಶ್ರಾಫ್, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ರವೀನಾ ಟಂಡನ್, ಲಾರಾ ದತ್ತಾ, ಜಾನಿ ಲಿವರ್, ರಾಜ್ಪಾಲ್ ಯಾದವ್, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ಕೃಷ್ಣ ಅಭಿಷೇಕ್, ಕಿಕು ಶಾರ್ದಾ, ರಾಹುಲ್ ದೇವ್, ಮುಕೇಶ್ ತಿವಾರಿ, ಅಫ್ತಾಬ್ ಶಿವದಾಸನಿ, ಫರೀದಾ ಜಲಾಲ್, ಮುಂತಾದವರು.


Click it and Unblock the Notifications