ಬಾಲಿವುಡ್ಗೆ ಹಾರಿದ ಕನ್ನಡಿಗನ ಕತೆ, ಅಕ್ಷಯ್ ಕುಮಾರ್ ನಾಯಕ
ಕನ್ನಡದಲ್ಲಿ ಸಾಧಕರಿಗೇನು ಕಡಿಮೆ ಇಲ್ಲ. ಆದರೆ ಕನ್ನಡದ ಚಿತ್ರರಂಗದವರ ಪಾಲಿಗೆ ರೌಡಿಗಳನ್ನು, ಭೂಗತ ದೊರೆಗಳನ್ನು ಹೊರತುಪಡಿಸಿ ನಿಜವಾದ ಸಾಧಕರು, ಸಾಧಕರೆನಿಸುವುದು ಅಪರೂಪದಲ್ಲಿ ಅಪರೂಪ.
ಪರಭಾಷೆಯ ಚಿತ್ರೋದ್ಯಮಿಗಳು ಕರ್ನಾಟಕದ ಸಾಧಕರ ಕುರಿತು ಸಿನಿಮಾಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಕನ್ನಡಿಗರ ಕತೆಯನ್ನು ಅವರದ್ದೇ ಭಾಷೆಯಲ್ಲಿ ಪ್ರಪಂಚಕ್ಕೆ ತಲುಪಿಸುತ್ತಿದ್ದಾರೆ. ಇದೀಗ ಕರ್ನಾಟಕದ ಮೇರು ಸಾಧಕರೊಬ್ಬರ ಕತೆಯನ್ನು ಹಿಂದಿಯಲ್ಲಿ ಸಿನಿಮಾ ಮಾಡಲಾಗುತ್ತಿದೆ.
ಕರ್ನಾಟಕದ ಖ್ಯಾತ ಉದ್ಯಮಿ, ಚಿಂತಕ ಕ್ಯಾಪ್ಟನ್ ಗೋಪಿನಾಥ್ ಅವರ ಕತೆಯನ್ನು ಹಿಂದಿಯಲ್ಲಿ ಸಿನಿಮಾ ಮಾಡಲಾಗುತ್ತಿದ್ದು, ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈಗಾಗಲೇ ತಮಿಳಿನಲ್ಲಿ ಬಂದಿದ್ದ 'ಸುರರೈ ಪೊಟ್ರು' ಸಿನಿಮಾವನ್ನೇ ಈಗ ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ.

'ಸಿಂಪ್ಲಿ ಫ್ಲೈ' ಪುಸ್ತಕ ಆಧರಿಸಿದ ಸಿನಿಮಾ
ಕರ್ನಾಟಕದ ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಕತೆ 'ಸಿಂಪ್ಲಿ ಫ್ಲೈ' ಪುಸ್ತಕವನ್ನು ಆಧರಿಸಿ ನಿರ್ದೇಶಕಿ ಸುಧಾ ಕೊಂಗರ ತಮಿಳಿನಲ್ಲಿ 'ಸುರರೈ ಪೊಟ್ರು' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು, ಆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿದ್ದರು. ಈಗ ಅದೇ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ.

ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್
ಹಿಂದಿಯಲ್ಲಿ ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿ ರಾಧಿಕಾ ಮದನ್. ತಮಿಳಿನ 'ಸುರರೈ ಪೊಟ್ರು' ಸಿನಿಮಾ ನಿರ್ದೇಶನ ಮಾಡಿದ್ದ ಸುಧಾ ಕೊಂಗರ ಅವರೇ ಹಿಂದಿ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಇಂದು ಪ್ರಾರಂಭವಾಗಿದ್ದು, ಶೂಟಿಂಗ್ಗೆ ಮುನ್ನ ತೆಂಗಿನ ಕಾಯಿ ಒಡೆಯುತ್ತಿರುವ ದೃಶ್ಯವನ್ನು ನಟ ಅಕ್ಷಯ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹಾಸನದವರು ಕ್ಯಾಪ್ಟನ್ ಗೋಪಿನಾಥ್
ಕ್ಯಾಪ್ಟನ್ ಗೋಪಿನಾಥ್, ಹಾಸನದವರು. ಭಾರತ ವಾಯುಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಗೋಪಿನಾಥ್, ಬಾಂಗ್ಲಾ ವಿಮೋಚನೆಯಲ್ಲಿಯೂ ಭಾಗವಹಿಸಿದ್ದರು. ಬಳಿಕ ಡೆಕ್ಕನ್ ಏವಿಯೇಷನ್ ಸಂಸ್ಥೆಯ ಮೂಲಕ ಏರ್ ಡೆಕ್ಕನ್ ಹೆಸರಿನ ಅತಿ ಕಡಿಮೆ ಬೆಲೆಯ ವಿಮಾನಯಾನ ಸಂಸ್ಥೆ ಆರಂಭಿಸಿದರು. ಸಾಮಾನ್ಯರು ಸಹ ಅತಿ ಕಡಿಮೆ ಬೆಲೆಗೆ ವಿಮಾನದಲ್ಲಿ ಹಾರಾಡಬೇಕೆಂಬುದು ಗೋಪಿನಾಥ್ ಆಸೆಯಾಗಿತ್ತು. ಬಳಿಕ ತಮ್ಮ ವಿಮಾನಯಾನ ಸಂಸ್ಥೆಯನ್ನು ಕಿಂಗ್ ಫೀಶರ್ಗೆ ಮಾರಾಟ ಮಾಡಿದರು. ಕನ್ನಡದ ಖ್ಯಾತ ಸಾಹಿತಿ ಗೋರೂರು ರಾಮಸ್ವಾಮಿ ಐಯ್ಯಂಗಾರ್ ಪುತ್ರ ಗೋಪಿನಾಥ್.

'ಸುರರೈ ಪೊಟ್ರು' ಸಿನಿಮಾ ಬಗ್ಗೆ ಚರ್ಚೆ
ತಮಿಳಿನ 'ಸುರರೈ ಪೊಟ್ರು' ಸಿನಿಮಾ ಬಿಡುಗಡೆ ಆದಾಗ ತುಸು ಚರ್ಚೆ ಏರ್ಪಟ್ಟಿತ್ತು. ನಿಜ ವ್ಯಕ್ತಿಯ ಬಗ್ಗೆ ಮಾಡಲಾದ ಈ ಸಿನಿಮಾದಲ್ಲಿ ಹಲವು ಸುಳ್ಳುಗಳನ್ನು ಸೇರಿಸಲಾಗಿದೆ ಎಂದು ಹಲವರು ಆರೋಪ ಮಾಡಿದ್ದರು. ಗೋಪಿನಾಥ್ ನಿಜ ಜೀವನಕ್ಕೂ ಸಿನಿಮಾಕ್ಕೂ ಸಂಬಂಧ ಇಲ್ಲವೆಂದು ಆರೋಪಿಸಲಾಗಿತ್ತು. ಕೊನೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಗೋಪಿನಾಥ್, ನನ್ನ 'ಸಿಂಪ್ಲಿ ಫ್ಲೈ' ಪುಸ್ತಕದಿಂದ ಪ್ರೇರಿತರಾಗಿ ಈ ಸಿನಿಮಾ ಮಾಡಲಾಗಿದೆ, ಈ ಸಿನಿಮಾ ಪೂರ್ಣವಾಗಿ ನನ್ನ ಜೀವನದ ಮೇಲೆ ಆಧಾರವಾಗಿಲ್ಲ'' ಎಂದರು.


Click it and Unblock the Notifications











