ಸುಶಾಂತ್ ಸಾವು, ಡ್ರಗ್ಸ್ ತನಿಖೆ ಕುರಿತು ಅಕ್ಷಯ್ ಕುಮಾರ್ ಮೊದಲ ಸಲ ಪ್ರತಿಕ್ರಿಯೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಹಲವು ಬೆಳವಣಿಗೆಗಳು ಆಗಿವೆ. ಆದರೆ, ಈವರೆಗೂ ಖಾನ್ ತ್ರಯರಾಗಲಿ ಅಥವಾ ಅಕ್ಷಯ್ ಕುಮಾರ್ ಅಂತಹ ಸ್ಟಾರ್ ನಟರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ನೆಪೋಟಿಸಂ ಹಾಗೂ ಮಾಫಿಯಾಗೆ ಸ್ಟಾರ್ ನಟರು ಬೆಂಬಲವಾಗಿ ನಿಂತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಇದೇ ಮೊದಲ ಸಲ ಅಕ್ಷಯ್ ಕುಮಾರ್ ಬಿಟೌನ್ ಇಂಡಸ್ಟ್ರಿಯಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ತನಿಖೆ, ನೆಪೋಟಿಸಂ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ನಲ್ಲಿ ವಿಡಿಯೋ ಸಹ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಹೇಳಿದ್ದೇನು? ಮುಂದೆ ಓದಿ.....

ಭಾರ ಮನಸ್ಸಿನಿಂದ ಮಾತನಾಡುತ್ತಿದ್ದೇನೆ
''ನಾನು ಇಂದು ನಿಮ್ಮೊಂದಿಗೆ ಭಾರವಾದ ಮನಸ್ಸಿನಿಂದ ಮಾತನಾಡುತ್ತಿದ್ದೇನೆ. ಕಳೆದ ಕೆಲವು ವಾರಗಳಿಂದ ನಾನು ಕೆಲವು ವಿಷಯಗಳನ್ನು ಹೇಳಲು ಬಯಸಿದ್ದೆ. ಆದರೆ ಸುತ್ತಲೂ ತುಂಬಾ ನಕಾರಾತ್ಮಕತೆ ಅಂಶಗಳು ಇದ್ದ ಕಾರಣ ಏನು ಹೇಳಬೇಕು, ಎಷ್ಟು ಹೇಳಬೇಕು ಮತ್ತು ಯಾರಿಗೆ ಹೇಳಬೇಕು ಎಂದು ನನಗೆ ಅರ್ಥವಾಗಲಿಲ್ಲ. ನಮ್ಮನ್ನು ‘ನಕ್ಷತ್ರಗಳು' ಎಂದು ಕರೆಯಲಾದರೂ, ಬಾಲಿವುಡ್ ಎನ್ನುವುದು ನಿಮ್ಮ ಪ್ರೀತಿಯಿಂದ ಆಗಿರುವುದು, ಇದನ್ನು ಮಾಡಿದ್ದು ನೀವು (ಪ್ರೇಕ್ಷಕರು). ನಾವು ಎಂದರೆ ಕೇವಲ ಉದ್ಯಮವಲ್ಲ, ಸಿನಿಮಾ ಎಂಬ ಮಾಧ್ಯಮದ ಮೂಲಕ ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ವಿಶ್ವದ ಮೂಲೆ ಮೂಲೆಗಳಿಗೆ ಉತ್ತೇಜಿಸಿದ್ದೇವೆ. ನಮ್ಮ ದೇಶದ ಜನರ ಭಾವನೆಗಳನ್ನು ಚಿತ್ರಿಸಲು ಪ್ರಯತ್ನಿಸಿವೆ. ಇಂದು ನಿಮ್ಮ ಭಾವನೆಗಳು ಕೋಪಗೊಂಡಿದ್ದರೆ, ನಾವು ಆ ಕೋಪವನ್ನು ಸ್ವೀಕರಿಸುತ್ತೇವೆ'' ಎಂದು ಮಾತು ಆರಂಭಿಸಿದ್ದಾರೆ.

ಸುಶಾಂತ್ ಸಾವು ನಮಗೂ ನೋವು ತಂದಿದೆ
''ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ಮರಣದ ನಂತರ, ಬಹಳಷ್ಟು ವಿಷಯಗಳು ಬೆಳಕಿಗೆ ಬಂದವು. ನಿಮ್ಮನ್ನು ನೋಯಿಸಿದಷ್ಟು ನಮಗೆ ನೋವುಂಟು ಮಾಡಿದೆ. ಈ ಸಮಸ್ಯೆಗಳು ನಮ್ಮ ಸ್ವಂತ ಹಿತ್ತಲಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಒತ್ತಾಯಿಸಿದೆ. ಚಿತ್ರರಂಗದ ಅನೇಕ ದುಷ್ಪರಿಣಾಮಗಳನ್ನು ಪರೀಕ್ಷಿಸಲು ನಮ್ಮನ್ನು ಒತ್ತಾಯಿಸಿದೆ. ಡ್ರಗ್ಸ್ ಸಮಸ್ಯೆ ಇಂಡಸ್ಟ್ರಿಯಲ್ಲಿ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ರೆ, ಇಂಡಸ್ಟ್ರಿಯ ಪ್ರತಿಯೊಬ್ಬನು ಇದರಲ್ಲಿ ಭಾಗಿಯಾಗಿದ್ದಾನೆ ಅಂದ್ರೆ ಅದು ಹೇಗೆ ಸಾಧ್ಯ?'' ಎಂದು ಪ್ರಶ್ನಿಸಿದ್ದಾರೆ.

ಇಡೀ ಇಂಡಸ್ಟ್ರಿ ಕಳಂಕಿತವಲ್ಲ
''ಡ್ರಗ್ಸ್ ಬಳಕೆ ಕಾನೂನು ವಿಷಯವಾಗಿದೆ. ನಮ್ಮ ಕಾನೂನು, ನ್ಯಾಯಾಲಯಗಳು ತೆಗೆದುಕೊಳ್ಳುವ ಕ್ರಮದ ಬಗ್ಗೆ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಚಿತ್ರರಂಗದ ಪ್ರತಿಯೊಬ್ಬ ಸದಸ್ಯರು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ದಯವಿಟ್ಟು, ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ, ಇಡೀ ಉದ್ಯಮವನ್ನು ಕಳಂಕಿತ ಎಂದು ನೋಡಬೇಡಿ. ಅದು ಸರಿಯಲ್ಲ," ಎಂದು ಮನವಿ ಮಾಡಿದ್ದಾರೆ.

ನಿಮ್ಮ ನಂಬಿಕೆಗೆ ದ್ರೋಹ ಮಾಡಲ್ಲ
''ನನ್ನ ಅಭಿಮಾನಿಗಳಿಗೆ ನನ್ನ ಸಂದೇಶವೆಂದರೆ, ನೀವು ನಮ್ಮನ್ನು ರೂಪಿಸಿದ್ದೀರಿ. ನಾವು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನಿಮ್ಮ ನಂಬಿಕೆ ಮತ್ತು ಪ್ರೀತಿಯನ್ನು ನಾವು ಗೆಲ್ಲುತ್ತೇವೆ. ನಿಮ್ಮಿಂದ ನಾವು ಇದ್ದೇವೆ. ದಯವಿಟ್ಟು ನಮ್ಮೊಂದಿಗೆ ನಿಂತುಕೊಳ್ಳಿ. ತುಂಬಾ ಧನ್ಯವಾದಗಳು'' ಎಂದು ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











