ಯುಪಿ ಸಿಎಂ ಭೇಟಿ ಮಾಡಿದ ಅಕ್ಷಯ್: ಅಯೋಧ್ಯೆಯಲ್ಲಿ ಶೂಟಿಂಗ್ಗೆ ಗ್ರೀನ್ ಸಿಗ್ನಲ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚಿಗಷ್ಟೆ ಭೇಟಿ ಮಾಡಿದ್ದರು. ಈ ಭೇಟಿ ಹಿಂದಿನ ನಿಜವಾದ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲವಾದರೂ ಹಲವು ಕಥೆಗಳು ಹುಟ್ಟಿಕೊಂಡಿದೆ.
ಆದ್ರೆ, ಈ ಭೇಟಿಯಲ್ಲಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಚಿತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಘೋಷಣೆಯಾದ 'ರಾಮ್ ಸೇತು' ಚಿತ್ರದ ಚಿತ್ರೀಕರಣವನ್ನು ಅಯೋಧ್ಯೆಯಲ್ಲಿ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಅಕ್ಷಯ್ ಕುಮಾರ್ ಯುಪಿ ಸಿಎಂ ಅವರಿಂದ ಅನುಮತಿ ಪಡೆದುಕೊಂಡಿದ್ದಾರಂತೆ.

2021ರ ಮಧ್ಯದಿಂದ 'ರಾಮ್ ಸೇತು' ಚಿತ್ರದ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿದ್ದು, ರಾಮನ ಜನ್ಮಭೂಮಿಯಲ್ಲಿ ಚಿತ್ರೀಕರಣ ಮಾಡುವ ಕುರಿತು ನಿರ್ದೇಶಕ ಅಭಿಷೇಕ್ ಶರ್ಮಾ ಯೋಜನೆ ಹಾಕಿಕೊಂಡಿದ್ದಾರೆ.
ಅಂದ್ಹಾಗೆ, ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬಹುದೊಡ್ಡ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದೆ. ಈ ಹಿನ್ನೆಲೆ ಬಾಲಿವುಡ್ ನಟರ ಜೊತೆ ಯೋಗಿ ಆದಿತ್ಯನಾಥ್ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಕೊನೆಯದಾಗಿ ಅಕ್ಷಯ್ ಕುಮಾರ್ ನಟನೆಯಲ್ಲಿ 'ಲಕ್ಷ್ಮಿ' ಸಿನಿಮಾ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಜನವರಿಯಲ್ಲಿ 'ಬಚ್ಚನ್ ಪಾಂಡೆ' ಸಿನಿಮಾ ಆರಂಭಿಸಲಿದ್ದಾರೆ.
ಅಕ್ಷಯ್ ಕುಮಾರ್ ನಟಿಸಿರುವ ಸೂರ್ಯವಂಶಿ ರಿಲೀಸ್ ಸಜ್ಜಾಗಿದೆ. ಧನುಶ್, ಸಾರಾ ಅಲಿ ಖಾನ್ ಹಾಗೂ ಅಕ್ಷಯ್ ಕುಮಾರ್ ಕಾಣಿಸಿಕೊಂಡಿರುವ ಅತ್ರಾಂಗಿ ರೇ ಚಿತ್ರೀಕರಣ ಮುಗಿಸಿದೆ. ಬೆಲ್ ಬಾಟಂ ಸಹ ಚಿತ್ರೀಕರಣ ಮಾಡುತ್ತಿದೆ.


Click it and Unblock the Notifications











