'ಧುರಂಧರ್ 2' ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್ ; 'ಭೂತ್ ಬಂಗ್ಲಾ' ಬಿಡುಗಡೆ ಮುಂದೂಡಿಕೆ
ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಸೂಪರ್ ಸ್ಟಾರ್ ಒಬ್ಬನ ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ ಹೊಸಬರು, ನೆಲೆಯೂರಲು ಹರಸಾಹಸ ಪಡುತ್ತಿರುವವರೆಲ್ಲ ತಮ್ಮ ಚಿತ್ರದ ಬಿಡುಗಡೆಯನ್ನು ಹೇಗಾದರೂ ಮಾಡಿ ಮುಂದೂಡಿ ಎಂದು ತಮ್ಮ ನಿರ್ದೇಶಕ ಮತ್ತು ನಿರ್ಮಾಪಕರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.
ಬದಲಾದ ಈ ಕಾಲದಲ್ಲಿ ಹಳೆಯ ಹುಲಿಗಳಿಗೆ ಹೊಸಬರು, ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸದ ನಟರು, ಸವಾಲು ಹಾಕುತ್ತಿದ್ದಾರೆ. ಹೀಗಾಗಿ ತಮ್ಮ ರಣ ತಂತ್ರವನ್ನು ಇಂದು ಸೂಪರ್ ಸ್ಟಾರ್ ಗಳು ಬದಲಿಸುತ್ತಿದ್ದಾರೆ. ಉದಾಹರಣೆಗೆ ಅಕ್ಷಯ್ ಕುಮಾರ್ ಅವರ ''ಭೂತ್ ಬಂಗ್ಲಾ'' ಚಿತ್ರವನ್ನೇ ತೆಗೆದುಕೊಳ್ಳಿ.

ಹೌದು, ಅಸಲಿಗೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅಕ್ಷಯ್ ಕುಮಾರ್ ಅಭಿನಯದ ''ಭೂತ್ ಬಂಗ್ಲಾ'' ಇದೇ ಏಪ್ರಿಲ್ ಹತ್ತರಂದು ಬಿಡುಗಡೆಯಾಗಬೇಕಿತ್ತು. ಇನ್ನೂ ''ಭೂತ್ ಬಂಗ್ಲಾ'' ಕೇವಲ ಅಕ್ಷಯ್ ಕುಮಾರ್ ಸಿನಿಮಾ ಅಲ್ಲ. ಪ್ರಿಯದರ್ಶನ್ ಚಿತ್ರ ಕೂಡ ಹೌದು. ''ಹೇರಾ ಫೇರಿ''.. ''ಗರಂ ಮಸಾಲಾ''.. ''ಭಾಗಂ ಭಾಗ್''.. ''ಭೂಲ್ ಭುಲೈಯಾ''.. '''ದೇ ಧನ್ ಧನಾ ಧನ್''.. ''ಖಟ್ಟಾ ಮೀಠಾ''.. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಈ ಜೋಡಿ ಹದಿನಾಲ್ಕು ವರ್ಷದ ನಂತರ ಮಾಡಿರುವ ಚಿತ್ರ ಇದು.
ಈ ಹಿನ್ನೆಲೆ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿವೆ. ಆದರೆ.. ''ಧುರಂಧರ್'' ಎದುರು ಬಂದರೆ ಈ ಪರೀಕ್ಷೆಯಲ್ಲಿ ನಪಾಸ್ ಆಗುವ ಭಯ, ಆತಂಕ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ಗೆ ಈಗ ಕಾಡಿದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ''ಭೂತ್ ಬಂಗ್ಲಾ'' ಚಿತ್ರದ ಬಿಡುಗಡೆಯನ್ನು ಒಂದು ವಾರ ಈ ಜೋಡಿ ಮುಂದೂಡಿದೆ ಎಂದು ಸದ್ಯ ಮುಂಬೈನಲ್ಲಿ ಗುಲ್ಲಾಗಿದೆ.
''ವರೈಟಿ ಇಂಡಿಯಾ'' ಈ ಕುರಿತು ವರದಿಯನ್ನು ಮಾಡಿದ್ದು ''ಭೂತ್ ಬಂಗ್ಲಾ'' ಬಿಡುಗಡೆಯನ್ನು ಮುಂದೂಡಲು ''ಧುರಂಧರ್ '' ಚಿತ್ರವೇ ಕಾರಣ ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ಉಲ್ಲೇಖ ಮಾಡಿದೆ. ''ಧುರಂಧರ್ 2'' ಅಲೆಯ ಹಿನ್ನೆಲೆ ''ಭೂತ್ ಬಂಗ್ಲಾ'' ಚಿತ್ರಕ್ಕೆ ಸ್ಕ್ರೀನ್ಗಳ ಸಮಸ್ಯೆ ಎದುರಾಗಿದೆ. ಹಾಲಿವುಡ್ನ ''ಪ್ರಾಜೆಕ್ಟ್ ಹೇಲ್ ಮೇರಿ'' ಚಿತ್ರಕ್ಕೆ ಭಾರತದಲ್ಲಿ ಮಲ್ಟಿಪ್ಲೆಕ್ಸ್ನವರು ಮಣೆ ಹಾಕಿಲ್ಲ. ಭಾರಿ ಬಜೆಟ್ನಲ್ಲಿ ನಿರ್ಮಿಸಲಾಗಿರುವ ಅತ್ಯಂತ ಅದ್ಧೂರಿ ದೃಶ್ಯ ವೈಭವ ಇರುವ ಈ ಸಿನಿಮಾಗೆ ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಸಿಕ್ಕಿಲ್ಲ. ಹಾಲಿವುಡ್ನ ಸ್ಟಾರ್ ರಯಾನ್ ಗೋಸ್ಲಿಂಗ್ ಈ ಚಿತ್ರದ ನಾಯಕನಾದರೂ ಯಾರು ಕ್ಯಾರೇ ಎನ್ನುತ್ತಿಲ್ಲ.

ಹೀಗಿರುವಾಗ ''ಭೂತ್ ಬಂಗ್ಲಾ''ಗೆ ಸ್ಕ್ರೀನ್ಗಳು ಸಿಗಲು ಹೇಗೆ ಸಾಧ್ಯ..? ಹೀಗಾಗಿಯೇ ಲೆಕ್ಕಾಚಾರ ಹಾಕಿ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ತಮ್ಮ ತಾಯಿ ಶೋಭಾ ಕಪೂರ್ ಅವರ ಸಲಹೆಯ ಮೇರೆಗೆ ''ಭೂತ್ ಬಂಗ್ಲಾ'' ಬಿಡುಗಡೆಯನ್ನು ಒಂದು ವಾರ ಮುಂದೂಡಿದ್ದಾರೆ ಎಂದು ''ವರೈಟಿ ಇಂಡಿಯಾ'' ವರದಿ ಮಾಡಿದೆ. ಇದಕ್ಕೆ ಪೂರಕವಾಗಿ ಇಂದು (ಮಾರ್ಚ್ 30) ನಡೆಯಬೇಕಿದ್ದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಚಿತ್ರತಂಡ ಮುಂದೂಡಿದ್ದು ಮುಂದಿನ ವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೂಡ ಸದ್ಯ ಕೇಳಿ ಬರುತ್ತಿದೆ.
ಅಂದ್ಹಾಗೇ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಏಪ್ರಿಲ್ 17ಕ್ಕೆ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ''ಮಾತೃಭೂಮಿ'' ಬಿಡುಗಡೆಯಾಗಬೇಕಿತ್ತು. ಆದರೆ.. ಈ ಚಿತ್ರದ ಚಿತ್ರೀಕರಣ ಇನ್ನೂ ಮುಕ್ತಾಯವಾಗಿಲ್ಲ. ಒಂದಿಲ್ಲೊಂದು ಕಾರಣಗಳಿಂದ ತಡವಾಗುತ್ತಲೇ ಇದೆ. ಈ ಸ್ಲಾಟ್ ಈಗ ಭೂತ್ ಬಂಗ್ಲಾ ಪಾಲಾಗಿದೆ.
ಒಟ್ನಲ್ಲಿ ಸದ್ಯ ಭೂತ್ ಬಂಗ್ಲಾ ಏಪ್ರಿಲ್ 10ರ ಬದಲು ಏಪ್ರಿಲ್ 17ಕ್ಕೆ ತೆರೆಗೆ ಬರಲಿದೆ. ಟ್ರೇಡ್ ವಿಶ್ಲೇಷಕರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಒಂದಾದ ಮೇಲೊಂದು ಸಿನಿಮಾ ಬರುವುದರಿಂದ ಉದ್ಯಮಕ್ಕೆ ಲಾಭ, ಸ್ಟಾರ್ ಗಳಿಗೂ ಲಾಭ ಎನ್ನುತ್ತಿದ್ದಾರೆ. ''ಧುರಂಧರ್ 2'' ಅಲೆಯಿಂದ ತಪ್ಪಿಸಿಕೊಳ್ಳಲು ಮುಂದೆ ಹೋದ ಭೂತ್ ಬಂಗ್ಲಾಗೆ ಪ್ರೇಕ್ಷಕರು ಬರ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











