ಗುಟ್ಕಾ ತಿಂದ ಮೇಲಾಯ್ತು ಜ್ಞಾನೋದಯ ; ಪಾನ್ ಮಸಾಲಾ ಬಗ್ಗೆ ಹೇಳಿದ್ದೇನು ಅಕ್ಷಯ್ ಕುಮಾರ್ ?
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು.ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ.
ಯಾರಾದರೂ ಹಾಳಾಗಿ ಹೋಗಲಿ ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಎಂದು ತಪ್ಪು ಸಂದೇಶವನ್ನ ನೀಡಿ ಕೈ ತೊಳೆದುಕೊಳ್ಳುತ್ತಾರೆ.ಆದರೆ ಇವರ ಈ ಜಾಹೀರಾತುಗಳಿಂದ ಆಗುವ ಪರಿಣಾಮ ದೊಡ್ಡದು ಮತ್ತು ಗಾಢವಾದದ್ದು. ಯಾಕೆಂದರೆ ಸಿನಿಮಾ ತಾರೆಯರನ್ನ ದೇವರೆಂದು ಪೂಜಿಸುವವರ ಸಂಖ್ಯೆ ನಮ್ಮಲ್ಲಿ ತುಸು ಹೆಚ್ಚೇ ಇದೆ. ಇನ್ನೂ.. ತಮ್ಮ ನೆಚ್ಚಿನ ತಾರೆಯರ ಹಾವ-ಭಾವ ಅವರ ಜೀವನ ಶೈಲಿಯನ್ನ ಅನುಸರಿಸುವವರು ಕೂಡ ಇದ್ದಾರೆ.

ಆದರೆ ಇದ್ಯಾವುದನ್ನು ಅರಿಯದೇ ದಿನನಿತ್ಯ ಜನರನ್ನು ತಪ್ಪು ದಾರಿಗೆ ಎಳೆಯುವಂತಹ ಜಾಹೀರಾತಿನಲ್ಲಿ ಕಾಣಿಸುವ ಸ್ಟಾರ್ಗಳಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಈ ಹಿಂದೆ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಜೊತೆ ''ವಿಮಲ್'' ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಕೂಡ ಇವರದ್ದೇ.
ಇಂಥಾ ಅಕ್ಷಯ್ ಕುಮಾರ್ ಆ ನಂತರ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ''ವಿಮಲ್'' ಜಾಹೀರಾತಿನಿಂದ ಹಿಂದೆ ಸರಿದಿದ್ದರು. ಕ್ಷಮೆಯನ್ನು ಕೇಳಿದ್ದರು. ಈಗ ಬದಲಾದ ಕಾಲದಲ್ಲಿ ಅವತ್ತು ಗುಟ್ಕಾ ಪ್ರಚಾರವನ್ನು ಮಾಡಿದ್ದ ಅಕ್ಷಯ್ ಕುಮಾರ್ ಈಗ ''ಗುಟ್ಕಾ'' ತಿನ್ನಬೇಡಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ''ಗುಟ್ಕಾ'' ಪ್ರಾಣಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ನೀಡಿದ್ದಾರೆ.
ಹೌದು. ಅಸಲಿಗೆ ಅಕ್ಷಯ್ ಕುಮಾರ್ ಅಭಿನಯದ ''ಜಾಲಿ ಎಲ್ ಎಲ್ ಬಿ 3 '' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ಗೆ ಪತ್ರಕರ್ತರೊಬ್ಬರು ಗುಟ್ಕಾ ಕುರಿತು ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಆ ಕ್ಷಣಕ್ಕೆ ಕೋಪ ಬಂದರೂ ಕೂಡ ಅದನ್ನು ತೋರಿಸಿಕೊಳ್ಳದೇ ಅಕ್ಷಯ್ ಕುಮಾರ್ ಉತ್ತರ ನೀಡಿದ್ದಾರೆ. ''ಗುಟ್ಕಾ'' ತಿನ್ನಬಾರದು ಎಂದಷ್ಟೇ ಹೇಳಿ ಮುನ್ನಡೆಯುವ ಪ್ರಯತ್ನ ಮಾಡಿದ್ದಾರೆ.
ಆದರೆ.. ಇಷ್ಟಕ್ಕೆ ಆ ಪತ್ರಕರ್ತರು ಸುಮ್ಮನಾಗಲಿಲ್ಲ. ಬದಲಿಗೆ ಇನ್ನೂ ಕೆದಕುವ ಪ್ರಯತ್ನ ಮಾಡಿದ್ದಾರೆ. ಆಗ ಸಂಯಮ ಕಳೆದುಕೊಂಡ ಅಕ್ಷಯ್ ಕುಮಾರ್ ಸಂದರ್ಶನ ನನ್ನದಾ..? ನಿಮ್ಮದಾ..? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಯಾರಲ್ಲಾದರೂ ಬೇರೆ ಪ್ರಶ್ನೆ ಇದ್ದರೆ ಕೇಳಿ ಎಂದು ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವಾರು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಅಕ್ಷಯ್ ಕುಮಾರ್ ಅವರ ಪರ ಬ್ಯಾಟ್ ಬೀಸಿದರೆ ಇನ್ನು ಕೆಲವರು ಆ ಜಾಹೀರಾತು ಒಪ್ಪಿಕೊಳ್ಳುವ ಮುನ್ನ ಇವೆಲ್ಲ ಯೋಚನೆ ಮಾಡಬೇಕಿತ್ತು. ಆಗ ಬುದ್ದಿ ಇರಲಿಲ್ಲವಾ ಎಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅಕ್ಷಯ್ ಕುಮಾರ್ ವಿರುದ್ದ ಕಿಡಿಯನ್ನು ಕಾರುತ್ತಿದ್ದಾರೆ. ಟ್ರೋಲ್ ಕೂಡ ಮಾಡುತ್ತಿದ್ದಾರೆ.
ಇನ್ನುಳಿದಂತೆ ಅಕ್ಷಯ್ ಕುಮಾರ್ ಅಭಿನಯದ ''ಜಾಲಿ ಎಲ್ಎಲ್ಬಿ 3'' ಈ ಸೆಪ್ಟೆಂಬರ್ 19ಕ್ಕೆ ಬಿಡುಗಡೆಯಾಗುತ್ತಿದೆ. ಈ ಬಾರಿ ಅಕ್ಷಯ್ ಕುಮಾರ್ ಜೊತೆ ಅರ್ಷದ್ ವಾರ್ಸಿ ಕೂಡ ಇದ್ದಾರೆ. ಈ ಹಿನ್ನೆಲೆ ಚಿತ್ರದ ಮೇಲೆ ನಿರೀಕ್ಷೆಗಳಿವೆ. ಹಿಂದಿನ ಎರಡು ಭಾಗಗಳಂತೆ ಈ ಚಿತ್ರ ಕೂಡ ಗೆಲ್ಲುತ್ತಾ..? ಬಾಕ್ಸಾಫೀಸ್ನಲ್ಲಿ ಹಣ ಗಳಿಸುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











