ನನ್ನಪ್ಪ ತುಂಬಾ ಸಾಲದಲ್ಲಿದ್ದಾರೆ, ಬದುಕಿಸಿ-ಅಕ್ಷಯ್ ಕುಮಾರ್ ಮುಂದೆ ಅಂಗಲಾಚಿದ ಬಾಲಕಿ ; ಖಿಲಾಡಿ ಮಾಡಿದ್ದೇನು?
ಸಾಮಾನ್ಯವಾಗಿ ಜನ ಸಾಮಾನ್ಯರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಸದಾ ಕಾಲ ಬಾಡಿಗಾರ್ಡ್ಗಳಿಂದ ಸುತ್ತುವರೆಯುವ ಇವರಿಗೆ ಬಡವರ ಕಷ್ಟ-ನಷ್ಟ ಕಣ್ಣಿಗೆ ಕಾಣಿಸುವುದೇ ಇಲ್ಲ. ಈ ಕಾರಣದಿಂದ ಬಣ್ಣದ ಪ್ರಪಂಚದಲ್ಲಿ ಮಾನವೀಯತೆ ಸತ್ತು ಹೋಗಿದೆ ಎಂದೇ ಹಲವರು ಅಂದುಕೊಂಡಿದ್ದಾರೆ. ತೆರೆಯ ಮೇಲಷ್ಟೇ ಅವರು ಹೀರೋ ತೆರೆಯ ಹಿಂದೆ ಅಲ್ಲ ಎಂಬ ಮಾತುಗಳನ್ನು ಆಡುತ್ತಾರೆ.
ಆದರೆ ಇದಕ್ಕೆ ಅಪವಾದ ಎನ್ನುವಂತೆ ಈ ಗ್ಲ್ಯಾಮರ್ ವರ್ಲ್ಡ್ನಲ್ಲಿ ಕೆಲವರಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ. ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಸಹಾಯದ ಹಸ್ತವನ್ನು ಕೆಲವರು ಇಲ್ಲಿ ಇನ್ನೂ ಚಾಚುತ್ತಾರೆ. ಬಡವರ ಕಣ್ಣೀರು ಒರೆಸುತ್ತಾರೆ. ಇದಕ್ಕೆ ಅಕ್ಷಯ್ ಕುಮಾರ್ ಸದ್ಯದ ಉದಾಹರಣೆ.

ಹೌದು, ಅಕ್ಷಯ್ ಕುಮಾರ್.. ಬಾಲಿವುಡ್ನ ಕಿಲಾಡಿ. ಕಳೆದ 35 ವರ್ಷಗಳಿಂದ ಮನರಂಜನೆಯ ರಸದೌತಣ ಉಣಬಡಿಸುವ ಅಕ್ಷಯ್ ಕುಮಾರ್ ಖ್ಯಾತಿಯ ಶಿಖರವನ್ನು ಏರಿದ್ದಾರೆ. ಸೋಲಿನ ಪಾತಾಳವನ್ನು ಕೂಡ ಕಂಡಿದ್ದಾರೆ.
ಇಂಥಾ ಅಕ್ಷಯ್ ಕುಮಾರ್ 2026ರ ಮುಂಬೈನ ಬಿಎಂಸಿ ಚುನಾವಣೆಯ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಮತದಾನ ಮಾಡಲು ಬಂದಿದ್ದರು. ಅಕ್ಷಯ್ ಕುಮಾರ್ ಬರುವ ಸುದ್ದಿ ಪಸರ್ ಆದ ಹಿನ್ನೆಲೆ ಅಲ್ಲಿ ಆಗಲೇ ಕ್ಯಾಮರಾಗಳು ಬಿಡಾರ ಹೂಡಿದ್ದವು. ಅಭಿಮಾನದ ಅಲೆ ಕೂಡ ಇತ್ತು. ಈ ಸಮಯದಲ್ಲಿ ಬಾಲಕಿಯೊಬ್ಬಳ ಆಕ್ರಂದನ ಅಕ್ಷಯ್ ಕುಮಾರ್ ಅವರನ್ನು ತಡೆದು ನಿಲ್ಲಿಸಿತು.
ಮತದಾನ ಮಾಡಿ ಅಕ್ಷಯ್ ಕುಮಾರ್ ತಮ್ಮ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಾಗ ಬಾಡಿಗಾರ್ಡ್ಗಳ ಭದ್ರಕೋಟೆಯನ್ನು ಭೇದಿಸಿ ಬಾಲಕಿಯೊಬ್ಬಳು ಅಕ್ಷಯ್ ಕುಮಾರ್ ಅವರ ಬಳಿ ಓಡಿ ಬಂದಳು. ಆಕೆಯ ಕಣ್ಣಿನಲ್ಲಿ ಸ್ಟಾರ್ ಒಬ್ಬರನ್ನು ಹತ್ತಿರದಿಂದ ನೋಡಿದ ಸಂಭ್ರಮ ಇರಲಿಲ್ಲ. ಫೋಟೊ ಅಥವಾ ಆಟೋಗ್ರಾಫ್ಗೋಸ್ಕರ ಕೂಡ ಅವಳು ಅಲ್ಲಿ ಬಂದಿರಲಿಲ್ಲ. ಬದಲಿಗೆ ಆ ಬಾಲಕಿಯ ಕಣ್ಣಲ್ಲಿ ನೋವು ಇತ್ತು. ಹತಾಶೆ ಇತ್ತು.
ಅಕ್ಷಯ್ ಕುಮಾರ್ ಹತ್ತಿರ ಬಂದ ಆ ಬಾಲಕಿ ಕೈಯಲ್ಲಿದ್ದ ಪೇಪರ್ಗಳನ್ನು ತೋರಿಸುತ್ತಾ ನನ್ನಪ್ಪ ತುಂಬಾ ಸಾಲದಲ್ಲಿದ್ದಾರೆ, ದಯವಿಟ್ಟು ಅವರನ್ನು ಬದುಕಿಸಿ, ಸಹಾಯ ಮಾಡಿ ಎಂದು ಅಂಗಲಾಚಿದಳು. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸ್ಟಾರ್ಗಳು ಮುಜುಗರಕ್ಕೀಡಾಗುತ್ತಾರೆ. ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.

ಆದರೆ, ಅಕ್ಷಯ್ ಕುಮಾರ್ ಮಾತ್ರ ಅತ್ತ ಇತ್ತ ಕದಲಲಿಲ್ಲ. ಆ ಬಾಲಕಿಯನ್ನು ನಿರ್ಲಕ್ಷಿಸಲಿಲ್ಲ. ಬದಲಿಗೆ ಸಮಾಧಾನದಿಂದ ಆ ಬಾಲಕಿಯ ಮಾತು ಕೇಳಿದರು. ತಮ್ಮ ಅಂಗರಕ್ಷಕರಿಗೆ ಆ ಬಾಲಕಿಯ ಫೋನ್ ನಂಬರ್ ಪಡೆಯುವಂತೆ ಹೇಳಿದರು. ಸಹಾಯ ಮಾಡುವ ಭರವಸೆಯನ್ನು ನೀಡಿದರು. ಆಗ ಆ ಬಾಲಕಿ ಅಕ್ಷಯ್ ಕುಮಾರ್ ಕಾಲಿಗೆ ಬೀಳಲು ಮುಂದಾದಾಗ ತಡೆದ ಅಕ್ಷಯ್ ಕುಮಾರ್ ಮಗಳೇ, ಈ ರೀತಿಯೆಲ್ಲ ಮಾಡಬೇಡ ಎಂದು ಹೇಳಿ ತಮ್ಮ ಕಾರನ್ನು ಹತ್ತಿದರು. ಹತ್ತುವ ಮುನ್ನ ಫೋನ್ ನಂಬರ್ ಪಡೆಯುವಂತೆ ಬಾಡಿಗಾರ್ಡ್ಗೆ ಮತ್ತೊಮ್ಮೆ ಸೂಚನೆಯನ್ನು ಕೂಡ ನೀಡಿದರು.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಬಾಲಕಿಯ ಕಷ್ಟಕ್ಕೆ ಅಕ್ಷಯ್ ಕುಮಾರ್ ಸ್ಪಂದಿಸಿದ ರೀತಿಗೆ ಹಲವರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ನಿಜ ಜೀವನದಲ್ಲಿ ಕೂಡ ನೀವು ಹೀರೋ ಎನ್ನುತ್ತಿದ್ದಾರೆ. ಪಲಾಯನವಾದದ ಈ ಕಾಲದಲ್ಲಿ ಆಕೆಯ ಕಷ್ಟ ಕೇಳಲು ರಸ್ತೆಯ ಮೇಲೆ ನೀವು ನಿಂತಿದ್ದೇ ದೊಡ್ಡ ವಿಷಯ ಎನ್ನುತ್ತಿದ್ದಾರೆ. ಹಸಿದವರ, ಕಷ್ಟದಲ್ಲಿರುವವರ ಕೂಗು ಕೇಳುವ ಸ್ಟಾರ್ಗಳು ಇನ್ನು ಬಾಲಿವುಡ್ನಲ್ಲಿದ್ದಾರೆ ಎನ್ನುವುದೇ ಸಮಾಧಾನಕಾರ ಸಂಗತಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











