ಸೂಪರ್ ಹಿಟ್ 'ಸಂಕ್ರಾಂತಿಕಿ ವಸ್ತುನ್ನಾಂ' ಹಿಂದಿಗೆ ರೀಮೆಕ್; ಸದ್ದಿಲ್ಲದೇ ಚಿತ್ರೀಕರಣ ಆರಂಭ
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಹಾವಳಿ ಕಮ್ಮಿ ಆಗಿದೆ. ಆಗಿಮ್ಮೆ ಈಗೊಮ್ಮೆ ಅಂತಹ ಪ್ರಯತ್ನ ನಡೆಯುತ್ತದೆ. ಹಿಟ್ ಆಗಿದ್ದರೂ ಹೆಚ್ಚು ಜನಪ್ರಿಯವಾಗದ ಸಿನಿಮಾಗಳನ್ನು ಬೇರೆ ಭಾಷೆಗಳಲ್ಲಿ ರೀಮೆಕ್ ಮಾಡುವ ಪ್ರಯತ್ನ ನಡೀತಿದೆ. ಈ ಬಾರಿ ಸಂಕ್ರಾಂತಿಗೆ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ತೆರೆಕಂಡು ಗೆದ್ದಿದೆ. ಆದರೆ ಕಳೆದ ವರ್ಷ ಸುಗ್ಗಿ ಸಂಭ್ರಮಕ್ಕೆ ಬಂದಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ರೀಮೆಕ್ ಆಗ್ತಿದೆ.
ಈ ಎರಡೂ ಸಿನಿಮಾಗಳನ್ನು ಅನಿಲ್ ರಾವಿಪುಡಿ ಕಟ್ಟಿಕೊಟ್ಟು ಗೆದ್ದಿದ್ದಾರೆ. ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಅವರು ನಿಸ್ಸೀಮರು ಎನಿಸಿಕೊಂಡಿದ್ದಾರೆ. ಅನಿಲ್ ನಿರ್ದೇಶನದ ಸಿನಿಮಾಗಳೆಲ್ಲಾ ಹಿಟ್ ಲಿಸ್ಟ್ ಸೇರಿದೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ತಮಿಳಿಗೆ 'ಜನ ನಾಯಗನ್' ಹೆಸರಿನಲ್ಲಿ ರೀಮೆಕ್ ಆಗಿದೆ. ಇದೀಗ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಸರದಿ.

ವಿಕ್ಟರಿ ವೆಂಕಟೇಶ್, ಐಶ್ವರ್ಯಾ ರಾಜೇಶ್ ಹಾಗೂ ಮೀನಾಕ್ಷಿ ಚೌಧರಿ ನಟನೆಯ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ವರ್ಷದ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿತ್ತು. ದೊಡ್ಡ ಸಿನಿಮಾಗಳೇ ಮುಗ್ಗರಿಸಿದಾಗ ಈ ಆಕ್ಷನ್ ಕಾಮಿಡಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಅಕ್ಷಯ್ಕುಮಾರ್ ಹೀರೊ ಆಗಿ ಚಿತ್ರವನ್ನು ಹಿಂದಿಯಲ್ಲಿ ರೀಮೆಕ್ ಮಾಡುತ್ತಿದ್ದಾರೆ. 'ವೆಲ್ಕಮ್', 'ನೋ ಎಂಟ್ರಿ', 'ಸಿಂಗ್ ಈಸ್ ಕಿಂಗ್', 'ರೆಡಿ' ರೀತಿಯ ಕಾಮಿಡಿ ಎಂಟರ್ಟೈನರ್ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಅನೀಸ್ ಬಾಜ್ಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಯಥಾವತ್ ರೀಮೆಕ್ ನಾವು ಮಾಡ್ತಿಲ್ಲ ಎಂದು ನಿರ್ದೇಶಕ ಅನೀಸ್ ಬಾಜ್ಮಿ ಹೇಳಿದ್ದಾರೆ. ನಮ್ಮ ಸಿನಿಮಾ ಕಥೆಗೂ ಆ ಚಿತ್ರದ ಕಥೆಗೂ ಸಾಮ್ಯತೆ ಇರುತ್ತದೆ. ತೆಲುಗು ಸಿನಿಮಾ ನಿರ್ಮಿಸಿದ್ದ ದಿಲ್ ರಾಜು ಹಿಂದಿಯಲ್ಲಿ ಚಿತ್ರವನ್ನು ತೆರೆಗೆ ತರಲಿದ್ದಾರೆ. ನಮ್ಮ ಸಿನಿಮಾ ಕೂಡ ಚೆನ್ನಾಗಿರಲಿದೆ. ವಿದ್ಯಾ ಬಾಲನ್ ಹಾಗೂ ರಾಶಿ ಖನ್ನಾ ನಾಯಕಿಯರಾಗಿ ನಟಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ನಾನು ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ ಕೆಲಸ ಮಾಡು ಬಹಳ ವರ್ಷಗಳಾಯಿತು. ಈ ಕಥೆ ಸಿದ್ಧವಾದಾಗ ಅಕ್ಷಯ್ಗೆ ಸರಿಯಾಗಿ ಇರುತ್ತದೆ ಎಂದು ಭಾವಿಸಿದೆ. ಕಥೆ ಹೇಳಿದಾಗ ಬಹಳ ಇಷ್ಟಪಟ್ಟು ನಟಿಸೋಕೆ ಒಪ್ಪಿಕೊಂಡರು ಎಂದು ಅನೀಸ್ ಬಾಜ್ಮಿ ಹೇಳಿದ್ದಾರೆ. ಒಟ್ಟಾರೆ
'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುವಂತೆ ಕಾಣ್ತಿದೆ. ಈಗಾಗಲೇ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ.
ಮಾಜಿ ಪೊಲೀಸ್ ಆಫೀಸರ್.. ಸದ್ಯ ಮದುವೆ ಆಗಿರುವ ಸುಖೀಜೀವನದ ನಡೆಸುತ್ತಿರುತ್ತಾನೆ. ಒಂದು ಮಿಷನ್ ಕಾರಣಕ್ಕೆ ಆತ ಮತ್ತೆ ಡ್ಯೂಟಿಗೆ ವಾಪಸ್ ಬರ್ತಾನೆ. ಅದೇ ತಂಡದಲ್ಲಿ ಆತನ ಮಾಜಿ ಪ್ರೇಯಸಿ ಇರ್ತಾಳೆ. ಮುಂದೆ ಕಥೆಗೆ ಏನೆಲ್ಲಾ ತಿರುವು ಸಿಗುತ್ತದೆ? ಎನ್ನುವುದು 'ಸಂಕ್ರಾಂತಿಕಿ ವಸ್ತುನ್ನಾಂ'. ಇದೇ ಕಥೆಯನ್ನು ಬಾಲಿವುಡ್ ನೇಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಇಂತಹ ಕಥೆಗಳು ಬಾಲಿವುಡ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅದೇ ಕಾರಣಕ್ಕೆ ದಿಲ್ ರಾಜು ಈ ಸಾಹಸ ಮಾಡುತ್ತಿದ್ದಾರೆ.
ವರ್ಷದ ಹಿಂದೆ ಬಿಡುಗಡೆಯಾಗಿದ್ದ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. 'ಗೇಮ್ ಚೇಂಜರ್' ಸಿನಿಮಾ ನಿರ್ಮಿಸಿ ಸಿಕ್ಕಾಪಟ್ಟೆ ನಷ್ಟ ಅನುಭವಿಸಿದ್ದ ದಿಲ್ ರಾಜು ಕೈ ಹಿಡಿದಿದ್ದು ಇದೇ ಕಾಮಿಡಿ ಎಂಟರ್ಟೈನರ್. ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಈ ಸಿನಿಮಾ ನೋಡಿ ಗೆಲ್ಲಿಸಿದ್ದರು. ಅನಿಲ್ ರಾವಿಪುಡಿ ಹಾಗೂ ವಿಕ್ಟರಿ ವೆಂಕಟೇಶ್ ಕಾಂಬಿನೇಷನ್ ಮತ್ತೆ ಸೂಪರ್ ಹಿಟ್ ಆಗಿತ್ತು.


Click it and Unblock the Notifications











