'ವಿದೇಶಿ ಪ್ರಜೆ ಅಕ್ಷಯ್ ಕುಮಾರ್ ಭಾರತದ ಆಂತರಿಕ ವಿಷಯದಲ್ಲಿ ಮೂಗುತೂರಿಸುವುದೇಕೆ'
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಹಾಲಿವುಡ್ ಪಾಪ್ ತಾರೆ ರಿಹಾನ್ನ ಮಾಡಿದ ಒಂದು ಟ್ವೀಟ್ ದೇಶದಲ್ಲಿ ದೊಡ್ಡ ಚರ್ಚೆ ಎಬ್ಬಿಸಿದೆ. 'ನಾವೇಕೆ ಇದರ ಬಗ್ಗೆ ಮಾತನಾಡುತ್ತಿಲ್ಲ' ರಿಹಾನ್ನ ಹೇಳಿದ್ದು ಇಷ್ಟೆ.
ರಿಹಾನ್ನ ರ ಟ್ವೀಟ್ ಗೆ ವಿರುದ್ಧವಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ಹೊರಡಿಸಿತು. ಇದರ ಬೆನ್ನಲ್ಲೇ ಬಾಲಿವುಡ್ ನಟರು, ಕ್ರಿಕೆಟ್ ತಾರೆಗಳು ಟ್ವೀಟ್ಗಳನ್ನು ಆರಂಭಿಸಿದರು. 'ರೈತ ಪ್ರತಿಭಟನೆ ನಮ್ಮ ದೇಶದ ಆಂತರಿಕ ವಿಷಯ, ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ, ಹೊರಗಿನವರು ಇದರ ಬಗ್ಗೆ ಮಾತನಾಡಬಾರದು' ಎಂಬುದು ಬಹುತೇಕ ಎಲ್ಲರ ಟ್ವೀಟ್ನ ಮೂಲ ವಸ್ತುವಾಗಿತ್ತು.
ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಅಜಯ್ ದೇವಗನ್, ಕರಣ್ ಜೋಹರ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಇನ್ನೂ ಹಲವರು 'ಇಂಡಿಯಾ ಟುಗೆದರ್', 'ಇಂಡಿಯಾ ಅಗೇನ್ಸ್ಟ್ ಪ್ರೊಪೆಗ್ಯಾಂಡಾ' ಹ್ಯಾಷ್ಟ್ಯಾಗ್ ಅಡಿ ಟ್ವೀಟ್ ಮಾಡಿದರು. ವಿಚಿತ್ರವೆಂದರೆ ಇವರ್ಯಾರೂ ಸಹ ಕಳೆದ ಕೆಲ ತಿಂಗಳಿನಿಂದಲೂ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿರಲಿಲ್ಲ.
ಬಹುತೇಕ ಬಾಲಿವುಡ್ ನಟರ, ಕ್ರಿಕೆಟಿಗರ 'ರಿಹಾನ್ನ ವಿರುದ್ಧ' ಟ್ವೀಟ್ಗೆ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಆದರೆ ಹೆಚ್ಚು ಟ್ರೋಲ್ಗೆ ಒಳಗಾಗಿರುವುದು ಮಾತ್ರ ನಟ ಅಕ್ಷಯ್ ಕುಮಾರ್.

'ಅಕ್ಷಯ್ ಕುಮಾರ್ ಭಾರತೀಯರಲ್ಲ'
'ಅಕ್ಷಯ್ ಕುಮಾರ್ ಭಾರತೀಯನೇ ಅಲ್ಲ, ಹಾಗಿದ್ದಮೇಲೆ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ಅಕ್ಷಯ್ ಗೆ ಮಾತನಾಡಲು ಹಕ್ಕು ಏನಿದೆ' ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

'ಅಕ್ಷಯ್ ಕುಮಾರ್ ಗೆ ಏನು ಹಕ್ಕಿದೆ'
'ರಿಹಾನ್ನ ವಿದೇಶಿ ಮಹಿಳೆ ಹಾಗಾಗಿ ಆಕೆಗೆ ಭಾರತದ ಆಂತರಿಕ ವಿಷಯದ ಬಗ್ಗೆ ಮಾತನಾಡುವ ಅಧಿಕಾರ ಇಲ್ಲವೆಂದಾದರೆ, ಅಕ್ಷಯ್ ಕುಮಾರ್ ಸಹ ಭಾರತೀಯರಲ್ಲ ಹಾಗಿದ್ದಮೇಲೆ ಅಕ್ಷಯ್ ಗೆ ಏನಿದೆ ಅಧಿಕಾರ' ಎಂಬರ್ಥದಲ್ಲಿ ಹಲವರು ಅಕ್ಷಯ್ ಕುಮಾರ್ ಟ್ವೀಟ್ಗೆ ಕಮೆಂಟ್ ಮಾಡಿದ್ದಾರೆ.

ಭಾರತೀಯ ನಾಗರೀಕತ್ವ ತಿರಸ್ಕರಿಸಿರುವ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಹುಟ್ಟಿದ್ದು ಭಾರತದಲ್ಲಿಯೇ ಆದರೆ ಅವರು ಭಾರತದ ನಾಗರೀಕತ್ವವನ್ನು ಬಿಟ್ಟುಕೊಟ್ಟು ಕೆನಡಾದ ನಾಗರೀಕತ್ವವನ್ನು ಪಡೆದು ಕೆನಡಾ ಪ್ರಜೆಯಾಗಿದ್ದಾರೆ. 'ನನ್ನ ಕೊನೆಯ ದಿನಗಳನ್ನು ನಾನು ಕೆನಡಾದಲ್ಲಿಯೇ ಕಳೆಯುತ್ತೇನೆ' ಎಂದು ಕೆನಡಾದ ಕಾರ್ಯಕ್ರಮವೊಂದರಲ್ಲಿ ಅಕ್ಷಯ್ ಕುಮಾರ್ ಹೇಳಿದ್ದ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ.
Recommended Video

ರಿಹಾನ್ನ ಟ್ವೀಟ್ ಬಳಿಕ ಬಾಲಿವುಡ್ ಇಬ್ಭಾಗ
ಒಟ್ಟಿನಲ್ಲಿ ರಿಹಾನ್ನರ ಒಂದು ಟ್ವೀಟ್ ಬಾಲಿವುಡ್ ಅನ್ನು ಮತ್ತೆ ಎರಡು ಭಾಗ ಮಾಡಿದೆ. ಹಲವರು 'ಭಾರತ ಐಕ್ಯತೆ' ಬಗ್ಗೆ ಇದ್ದಕ್ಕಿದ್ದಂತೆ ಮಾತನಾಡಲು ಆರಂಭಿಸಿದ್ದಾರೆ. ತಾಪ್ಸಿ ಪನ್ನು, ಸ್ವರಾ ಭಾಸ್ಕರ್, ವಿಶಾಲ್ ದದ್ಲಾನಿ ಇನ್ನೂ ಕೆಲವರು ರೈತರ ಪ್ರತಿಭಟನೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮಿತಾಬ್ ಬಚ್ಚನ್, ಶಾರುಖ್, ಸಲ್ಮಾನ್, ಅಮೀರ್ ಖಾನ್, ಎಂಎಸ್ ಧೋನಿ ಇನ್ನೂ ಕೆಲವರು ಮೂಕ ಪ್ರೇಕ್ಷಕರಾಗಿದ್ದಾರೆ.


Click it and Unblock the Notifications











