ವಿವಾದದಲ್ಲಿ ಆಲಿಯಾ ಭಟ್ರ 'ಗಂಗೂಬಾಯಿ ಕಾಠಿಯಾವಾಡಿ'
ಬಾಲಿವುಡ್ನ ಕೆಲವು ನಟ, ನಟಿಯರು, ನಿರ್ದೇಶಕರ ಸಿನಿಮಾಗಳು ಸದಾ ವಿವಾದದಲ್ಲಿ ಸಿಲುಕುತ್ತವೆ ಅಥವಾ ಅವರ ಸಿನಿಮಾಗಳನ್ನು ವಿವಾದದಲ್ಲಿ ಸಿಲುಕಿಸಲಾಗುತ್ತದೆ. ಅಂಥಹಾ ನಿರ್ದೇಶಕರುಗಳ ಪಟ್ಟಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಹೆಸರು ಮೊದಲಿಗೆ ಬರುತ್ತದೆ.
ನಿಜ ಜೀವನದ ವ್ಯಕ್ತಿಗಳನ್ನು, ಘಟನೆಗಳನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುವ ಸಂಜಯ್ ಲೀಲಾ ಬನ್ಸಾಲಿ ಅದನ್ನು ಕಾವ್ಯಾತ್ಮಕವಾಗಿ ತೆರೆಯ ಮೇಲೆ ಪ್ರೆಸೆಂಟ್ ಮಾಡುತ್ತಾರೆ. ಆದರೆ ಇವರ ಬಹುತೇಕ ಸಿನಿಮಾಗಳು ಬಿಡುಗಡೆಗೆ ಮುಂಚೆಯೇ ವಿವಾದದಲ್ಲಿ ಸಿಲುಕುತ್ತವೆ. ಇದೀಗ ಆಲಿಯಾ ಭಟ್ ನಾಯಕಿಯಾಗಿರುವ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದು ಈ ಸಿನಿಮಾದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೆ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿತ್ತು. ಈ ಪವರ್ಫುಲ್ ಟ್ರೇಲರ್ ಅನ್ನು ಸಿನಿ ಪ್ರೇಮಿಗಳು ಮೆಚ್ಚಿಕೊಂಡಿದ್ದರು. ಆಲಿಯಾರ ನಟನೆಯನ್ನು ಹಲವರು ಹೊಗಳಿದ್ದರು. ಆದರೆ ಕೆಲವರು ಆ ಟ್ರೇಲರ್ ನಲ್ಲಿ ಕೆಲವು ಹುಳುಕುಗಳನ್ನು ಹುಡುಕಿದ್ದಾರೆ. ಕೆಲವರು ಸಕಾರಣ ನೀಡಿಯೇ ಸಿನಿಮಾವನ್ನು ವಿರೋಧಿಸಿದ್ದಾರೆ.

ಈಶಾನ್ಯ ರಾಜ್ಯದ ಜನರಿಗೆ ಅಪಮಾನ
ಟ್ರೇಲರ್ನ ಅಂತ್ಯದಲ್ಲಿ ಗಂಗೂಬಾಯಿ ಕಾಠಿಯಾವಾಡಿ ಪಾತ್ರಧಾರಿ ಆಲಿಯಾ ಭಟ್ ದಂತವೈದ್ಯರಿಂದ ಹಲ್ಲು ಕೀಳಿಸಿಕೊಳ್ಳುತ್ತಿರುತ್ತಾರೆ. ವೈದ್ಯ, ಬಾಯಿಯನ್ನು ಹೆಚ್ಚು ಅಗಲ ತೆಗೆಯಲು ಆಲಿಯಾಗೆ ಹೇಳುತ್ತಾನೆ. ಆಗ ಆಲಿಯಾ ಭಟ್, ಇನ್ನೂ ಹೆಚ್ಚು ಅಗಲ ಬಾಯಿ ತೆಗೆಯಲಿ, ಇಡೀ ಚೀನಾವನ್ನು ಬಾಯಿ ಒಳಗೆ ತುರುಕುತ್ತೀಯ ಎಂದು ಕೇಳುತ್ತಾಳೆ. ಆ ದಂತ ವೈದ್ಯ ಈಶಾನ್ಯ ರಾಜ್ಯದವನಾಗಿದ್ದು, ನೋಡಲು ಚೀನಾದವರಂತೆ ಕಾಣುವ ಕಾರಣ ಆಲಿಯಾ ಹಾಗೆ ಹೇಳುತ್ತಾರೆ. ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈಶಾನ್ಯ ರಾಜ್ಯದವರನ್ನು ಚಿಂಗೀಸ್ಗಳು, ಚೀನಾದವರು ಎಂದು ಕರೆಯುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೆಟ್ಟ ಪದ್ಧತಿ. ನಮ್ಮ ದೇಶ ಇಷ್ಟು ಮುಂದುವರೆದಿದೆ, ಆದರೆ ಬಾಲಿವುಡ್ ಇನ್ನೂ ಬದಲಾಗಿಲ್ಲ. ಈಶಾನ್ಯ ರಾಜ್ಯದವರನ್ನು ಚೀನಾದವರಿಗೆ ಹೋಲಿಸಿದ್ದು ಕೆಟ್ಟ ನಡೆ, ಜನಾಂಗೀಯ ನಿಂದನೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತೃತೀಯ ಲಿಂಗಿ ಪಾತ್ರದಲ್ಲಿ ವಿಜಯ್ ರಾಜ್
'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ತೃತೀಯ ಲಿಂಗಿ ರಜಿಯಾ ಬಾಯಿ ಪಾತ್ರವೊಂದಿದ್ದು ಆ ಪಾತ್ರವನ್ನು ಪ್ರತಿಭಾವಂತ ನಟ ವಿಜಯ್ ರಾಜ್ ನಿರ್ವಹಿಸಿದ್ದಾರೆ. ತೃತೀಯ ಲಿಂಗಿಯ ಪಾತ್ರವನ್ನು ವಿಜಯ್ ರಾಜ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಆದರೆ ಪಾತ್ರವನ್ನು ನಿರ್ವಹಿಸಲು ನಿಜವಾದ ತೃತೀಯ ಲಿಂಗಿಯನ್ನೇ ಬಳಸಬೇಕಿತ್ತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿಯೂ ಆಕ್ಷೇಪ
ಕರ್ನಾಟದಲ್ಲಿಯೂ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಹೆಸರು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಗಂಗೂಬಾಯಿ ಎಂಬುವುದು ಕರ್ನಾಟಕದ ಜನಪ್ರಿಯ ಹಾಡುಗಾರ್ತಿಯ ಹೆಸರು ಹಾಗಾಗಿ ಸಿನಿಮಾದಿಂದ ಗಂಗೂಬಾಯಿ ಹೆಸರು ಕೈಬಿಡಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಒತ್ತಾಯಿಸಿದೆ.

ಸಾರ್ವಜನಿಕ ಹಿತಾಸಕ್ತಿ ಸಲ್ಲಿಕೆಯಾಗಿತ್ತು
ಕಳೆದ ವರ್ಷ ಆಗಸ್ಟ್ನಲ್ಲಿ ಇದೇ ಸಿನಿಮಾಕ್ಕೆ ಸಂಬಂಧಿಸಿದಂತೆ ಆಲಿಯಾ ಭಟ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಗಂಗೂಬಾಯಿ ಕಾಠಿಯವಾಡಿಯ ದತ್ತು ಮಗ ಎಂದು ಹೇಳಿಕೊಂಡ ಒಬ್ಬರು ಸಿನಿಮಾ ಬಿಡುಗಡೆ ರದ್ದು ಮಾಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಿನಿಮಾ ಹಾಗೂ ಗಂಗೂಬಾಯಿ ಕಾಠಿಯಾವಾಡಿ ಬಗ್ಗೆ ಬಿಡುಗಡೆ ಆಗಿರುವ ಪುಸ್ತಕ ತನ್ನ ತಾಯಿಯ ಮಾನಹಾನಿ ಮಾಡುತ್ತಿವೆ ಎಂದು ಅವರು ವಾದಿಸಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯವು ಸಿನಿಮಾಕ್ಕೆ ತಡೆ ನೀಡಲು ನಿರಾಕರಿಸಿತು. 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾವು ಫೆಬ್ರವರಿ 25 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಮುಂಬೈನ ಕಾಮಾಠಿಪುರದ ನಾಯಕಿಯಾಗಿದ್ದ ಗಂಗೂಬಾಯಿ ಕಾಠಿಯಾವಾಡಿ ಕುರಿತ ಕತೆಯಿದೆ. ಸಿನಿಮಾದಲ್ಲಿ ಆಲಿಯಾ ಭಟ್, ವಿಜಯ್ ರಾಜ್, ಅಜಯ್ ದೇವಗನ್ ಇನ್ನೂ ಹಲವರು ನಟಿಸಿದ್ದಾರೆ.

'ಪದ್ಮಾವತ್' ಸಿನಿಮಾದ ಬಗ್ಗೆಯೂ ವಿವಾದ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದ ಈ ಹಿಂದಿನ ಸಿನಿಮಾ 'ಪದ್ಮಾವತ್' ಸಹ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಕರ್ಣಿ ಸೇನಾದವರು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಹಲವು ಪ್ರತಿಭಟನೆ ಮಾಡಿದರು. ಸಿನಿಮಾದ ಸೆಟ್ ಮೇಲೆ ದಾಳಿ ಮಾಡಿ ಹಲ್ಲೆ ಸಹ ಮಾಡಿದ್ದರು. ದೀಪಿಕಾ ಪಡುಕೋಣೆ ಮೂಗು ಕೊಯ್ದವರಿಗೆ, ತಲೆ ಕಡಿದವರಿಗೆ ಬಹುಮಾನ ಘೋಷಿಸಿದರು. ಇದೆಲ್ಲದರ ಬಳಿಕ 'ಪದ್ಮಾವತಿ' ಎಂದಿದ್ದ ಸಿನಿಮಾದ ಹೆಸರನ್ನು 'ಪದ್ಮಾವತ್' ಎಂದು ಬದಲಾಯಿಸಿ ಬಿಡುಗಡೆ ಮಾಡಲಾಯ್ತು. ಸಿನಿಮಾ ಬಿಡುಗಡೆ ಆದ ಬಳಿಕ ಕರ್ಣಿ ಸೇನ ಕ್ಷಮಾಪಣೆ ಕೇಳಿ 'ಪದ್ಮಾವತ್' ಸಿನಿಮಾದ ಪರವಾಗಿ ಪ್ರಚಾರ ಮಾಡಿತು.


Click it and Unblock the Notifications











