ಕಪೂರ್ ಖಾಂದಾನ್ಗೆ ಮತ್ತೆ ಗಣೇಶ ಹಬ್ಬದ ಸಡಗರ ತಂದ ಆಲಿಯಾ- ರಣ್ಬೀರ್ ಕೂಸು!
ಬಾಲಿವುಡ್ನಲ್ಲಿ ಗಣೇಶ ಚತುರ್ಥಿ ಸಂಭ್ರಮ ಬಹಳ ಜೋರಾಗಿರುತ್ತೆ. ಸಲ್ಮಾನ್ ಖಾನ್ ಸಹೋದರಿ ನಿವಾಸದಲ್ಲೂ ಸೇರಿದಂತೆ ಬಾಲಿವುಡ್ ಸ್ಟಾರ್ಗಳೆಲ್ಲಾ ಪ್ರತಿವರ್ಷ ಸಂಭ್ರಮ ಸಡಗರದಿಂದ ವಿನಾಯಕನನ್ನು ಪೂಜಿಸುತ್ತಾರೆ. ಕೊರೊನಾ ಹಾವಳಿ ಹಿನ್ನೆಲೆ ಕಳೆದೆರಡು ವರ್ಷಗಳಿಂದ ಹಬ್ಬದ ಸಂಭ್ರಮಕ್ಕೆ ಹಿನ್ನೆಡೆಯಾಗಿತ್ತು. ಈ ಬಾರಿ ಮತ್ತೆ ವಿಘ್ನನಿವಾರಕನನ್ನು ಪೂಜಿಸಿಲು ಬಿಟೌನ್ನಲ್ಲಿ ಸಿದ್ಧತೆ ಶುರುವಾಗಿದೆ.
ಜೂನ್ ತಿಂಗಳಲ್ಲಿ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಘೋಷಿಸಿದ್ದರು. ಮದುವೆಯಾದ 3ನೇ ತಿಂಗಳಲ್ಲಿ ಆಲಿಯಾ ಗರ್ಭಿಣಿ ಎನ್ನುವ ಸುದ್ದಿ ಕೆಲವರು ಹುಬ್ಬೇರುವಂತೆ ಮಾಡಿತ್ತು. ಸದ್ಯ ಜೋಡಿ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದೆ. ಆರ್ಕೆ ಸ್ಟುಡಿಯೋ ಮಾರಾಟ ಮಾಡಿದ ಮೇಲೆ ಕಪೂರ್ ಫ್ಯಾಮಿಲಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿರಲಿಲ್ಲ. ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಈ ವರ್ಷ ಮತ್ತೆ ಧಾಂಧೂಂ ಎಂದು ಹಬ್ಬ ಆಚರಿಸಲು ಮನಸ್ಸು ಮಾಡಿರುವುದಾಗಿ ವರದಿಯಾಗಿದೆ.
3 ವರ್ಷಗಳ ನಂತರ ಕಪೂರ್ ಖಾಂದಾನ್ ಒಟ್ಟಿಗೆ ಸೇರಿ ಗಣೇಶನನ್ನು ಸ್ವಾಗತಿಸಿ, ಪೂಜಿಸಿ, 11ನೇ ದಿನ ಮೂರ್ತಿ ವಿಸರ್ಜನೆ ವೇಳೆ ಕುಣಿದು ಕುಪ್ಪಳಿಸಲು ಸಿದ್ಧತೆ ನಡೀತಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಹುಟ್ಟಲಿರುವ ಅವರ ಮಗುವಿಗಾಗಿ ವಿಶೇಷ ಪೂಜಿ ಸಲ್ಲಿಸಲು ಕಪೂರ್ ಫ್ಯಾಮಿಲಿ ತೀರ್ಮಾನಿಸಿದೆ. ಕಪೂರ್ ಫ್ಯಾಮಿಲಿಯಲ್ಲಿ ಗಣೇಶ ಹಬ್ಬ ಭಾರೀ ಫೇಮಸ್. ಬಾಲಿವುಡ್ ಕಲಾವಿದರು, ತಂತ್ರಜ್ಞರು ಸೇರಿದಂತೆ ಸಾಕಷ್ಟು ಜನ ಪೂಜೆಯಲ್ಲಿ ಭಾಗವಹಿಸುತ್ತಿದ್ದರು. "ಆರ್ಕೆ ಸ್ಟುಡಿಯೋ ಮಾರಾಟವಾದ ಮೇಲೆ ಅಷ್ಟು ದೊಡ್ಡ ಸ್ಥಳಾವಕಾಶ ಇಲ್ಲ. ಎಲ್ಲಿ ಹಬ್ಬ ಅಷ್ಟು ಜೋರಾಗಿ ಹಬ್ಬ ಆಚರಿಸುವುದು" ಎಂದು ರಣ್ಬೀರ್ ಕಪೂರ್ ಹೇಳಿದ್ದರು.

ರಾಜ್ಕಪೂರ್ ಕಾಲದಿಂದಲೂ ಸ್ಟುಡಿಯೋದಲ್ಲಿ ಹಬ್ಬ
ಹೌದು, ರಾಜ್ಕಪೂರ್ ಕಾಲದಿಂದಲೂ ಆರ್ಕೆ ಸ್ಟುಡಿಯೋದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯ ಇತ್ತು. ಬರೋಬ್ಬರಿ 70 ವರ್ಷಗಳಿಂದ ಇದನ್ನು ಕಪೂರ್ ಫ್ಯಾಮಿಲಿ ಅನುಸರಿಸಿಕೊಂಡು ಬರುತ್ತಿತ್ತು. ಇಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ಭಾಗವಹಿಸಿಲು ಸಾರ್ವಜನಿಕರು ಭಾಗವಹಿಸುತ್ತಿದ್ದರು. ಆದರೆ ಆರ್ಕೆ ಸ್ಟುಡಿಯೋದಲ್ಲಿ ಬೆಂಕಿ ದುರಂತ ಸಂಭವಿಸಿ, ಸಾಕಷ್ಟು ನಷ್ಟವಾಗಿತ್ತು. ಸರಿಯಾಗಿ ಸಿನಿಮಾ ಚಿತ್ರೀಕರಣ ಕೂಡ ನಡೆಯುತ್ತಿರಲಿಲ್ಲ. ಹಾಗಾಗಿ ನಾಲ್ಕು ವರ್ಷಗಳ ಹಿಂದೆ ಸ್ಟುಡಿಯೋ ಮಾರಾಟ ಮಾಡಲಾಗಿತ್ತು. ಆ ನಂತರ ಅಲ್ಲಿ ಗಣೇಶ ಹಬ್ಬ ಆಚರಿಸಿರಲಿಲ್ಲ.

'ಬ್ರಹ್ಮಾಸ್ತ್ರ' ಪ್ರಮೋಷನ್ ಜೋರು
ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಗಣೇಶ ಹಬ್ಬ ಮುಗಿದ ವಾರಕ್ಕೆ ವಿಶ್ವದಾದ್ಯಂತ ಈ ಫ್ಯಾಂಟಸಿ ಅಡ್ವೆಂಚರಸ್ ಡ್ರಾಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಅಮಿತಾಬ್ ಬಚ್ಚನ್, ನಾಗಾರ್ಜುನ, ಶಾರುಖ್ ಖಾನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

'ಬ್ರಹ್ಮಾಸ್ತ್ರ' ಬಾಯ್ಕಾಟ್ ಭಯ
ಸಾಲು ಸಾಲು ಬಾಲಿವುಡ್ ಸಿನಿಮಾಗಳಿಗೆ ಬಾಯ್ಕಾಟ್ ಬಿಸಿ ತಟ್ಟುತ್ತಿದೆ. 'ಬ್ರಹ್ಮಾಸ್ತ್ರ' ಸಿನಿಮಾ ಟ್ರೈಲರ್ ರಿಲೀಸ್ ಅದಾಗಲೇ ಚಿತ್ರವನ್ನು ಬಾಯ್ಕಾಟ್ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಆಗಿತ್ತು. ರಣ್ಬೀರ್ ಕಪೂರ್ ಶೂ ಧರಿಸಿ ದೇವಸ್ಥಾನದ ಒಳಗೆ ಹೋಗುವ ಸೀನ್ ಟ್ರೈಲರ್ನಲ್ಲಿದೆ. ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿ ಬಾಯ್ಕಾಟ್ ಟ್ರೆಂಡ್ ಶುರುವಾಗಿತ್ತು. ಇನ್ನು ನೆಪೋಟಿಸಂ ಹಿನ್ನೆಲೆಯಲ್ಲಿ ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ನಡೀತಿದೆ. ರಣ್ಬೀರ್ ಹಾಗೂ ಆಲಿಯಾ ಇಬ್ಬರೂ ಸ್ಟಾರ್ಗಳ ಫ್ಯಾಮಿಲಿಯಿಂದ ಬಂದಿರುವ ಕಾರಣ ಅವರು ನಟಿಸಿರುವ ಸಿನಿಮಾ ಬಹಿಷ್ಕರಿಸೋದಾಗಿಯೂ ಕೆಲವರು ಹೇಳುತ್ತಿದ್ದಾರೆ.

ಆಲಿಯಾ ಭಟ್ ಹೇಳಿಕೆಗೂ ಭಾರೀ ಆಕ್ರೋಶ
'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಆಲಿಯಾ ಭಟ್ ನೀಡಿರುವ ಹೇಳಿಕೆಯೊಂದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಬಾಯ್ಕಾಟ್ ಟ್ರೆಂಡ್ ಬಗ್ಗೆ ಕೇಳಿದ ಪ್ರಶ್ನೆಗೆ "ನಾನು ಏನು ಎಂದು ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ನಾನು ನಿಮಗೆ ಇಷ್ಟವಿಲ್ಲದಿದ್ದರೆ ನನ್ನನ್ನು ನೋಡಬೇಡಿ" ಎಂದಿದ್ದಾರೆ. ಇದರಿಂದ ಆಲಿಯಾ ಭಟ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕರೀನಾ ಕಪೂರ್ ಕೂಡ ಇದೇ ರೀತಿ ಹೇಳಿಕೆ ನೀಡಿ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದರು.


Click it and Unblock the Notifications










