'ಪದ್ಮಾವತಿ' ಚಿತ್ರದ ವಿವಾದ ಏನಿದು? ವಿರೋಧ ಯಾಕೆ?
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ 'ಪದ್ಮಾವತಿ' ಚಿತ್ರದ ವಿರುದ್ಧ ಪ್ರತಿಭಟನೆ, ಹೋರಾಟಗಳು ಹೆಚ್ಚಾಗುತ್ತಿವೆ. ದೇಶದಲ್ಲೆಡೆ ಇರುವ ರಜಪೂತರು ಬೀದಿಗಿಳಿದು ಚಿತ್ರವನ್ನ ವಿರೋಧಿಸುತ್ತಿದ್ದಾರೆ.
ಆದ್ರೆ, ಅದೇಷ್ಟೋ ಜನಕ್ಕೆ ಈ ವಿವಾದ ಏನು ಎಂಬುದರ ಬಗ್ಗೆ ಗೊಂದಲವಿದೆ. 'ಪದ್ಮಾವತಿ' ಚಿತ್ರವನ್ನ ರಜಪೂತರು ಯಾಕೆ ವಿರೋಧ ಮಾಡ್ತಿದ್ದಾರೆ. ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲವೆಂದು ಯಾಕೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ಹಾಗಿದ್ರೆ, 'ಪದ್ಮಾವತಿ' ಚಿತ್ರದಲ್ಲಿ ಅಂತಹದ್ದೇನಿದೆ? ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಏನು ಹೇಳ್ತಿದ್ದಾರೆ? ರಜಪೂತರ ಬೇಡಿಕೆ ಏನು ಎಂಬುದನ್ನ ತಿಳಿಯಲು ಮುಂದೆ ಓದಿ.......

'ರಾಣಿ ಪದ್ಮಾವತಿ' ಚಾರಿತ್ರ್ಯಕ್ಕೆ ಧಕ್ಕೆ
ಸಂಜಯ್ ಲೀಲಾ ಬನ್ಸಾಲಿ ಅವರು 'ಪದ್ಮಾವತಿ', ರಜಪೂತ ರಾಣಿಯ ಕುರಿತು ತಯಾರಾಗಿರುವ ಸಿನಿಮಾ. ಹೀಗಾಗಿ, ಚಿತ್ರದಲ್ಲಿ ರಾಣಿ ಪದ್ಮಾವತಿ ಚಾರಿತ್ರ್ಯಕ್ಕೆ ಧಕ್ಕೆ ತರಲಾಗಿದೆ ಎಂಬುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಇತಿಹಾಸ ತಿರುಚಲಾಗಿದೆ
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ಮರೆಮಾಚಿ ರಾಜವಂಶಸ್ಥರನ್ನು ಮತ್ತು ರಜಪೂತ ಸಮುದಾಯವನ್ನು ಕೀಳಾಗಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಐತಿಹಾಸಿಕ ಸತ್ಯಗಳನ್ನೇ ಮರೆ ಮಾಚಲಾಗಿದೆ. ಇತಿಹಾಸಕಾರರನ್ನ ಸಂಪರ್ಕಿಸದೇ ಆತುರವಾಗಿ ಸಿನಿಮಾ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಪದ್ಮಾವತಿ ಮತ್ತು ಖಿಲ್ಜಿ ಮಧ್ಯೆ ಸಲ್ಲಾಪ.!
ಚಿತ್ರದಲ್ಲಿ ರಾಣಿ ಪದ್ಮಾವತಿ ಮತ್ತು ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಸಂಬಂಧವನ್ನ ಕೆಟ್ಟದಾಗಿ ಬಿಂಬಿಸಲಾಗಿದೆ. ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವಿನ ರೋಮ್ಯಾಂಟಿಕ್ ದೃಶ್ಯಗಳು ಚಿತ್ರದಲ್ಲಿ ಬಳಸಲಾಗಿದೆ. ಇದು ಇತಿಹಾಸದಲ್ಲಿಲ್ಲ ಎಂದು ರಜಪೂತರು ಆರೋಪಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ
'ಪದ್ಮಾವತಿ' ಚಿತ್ರದಲ್ಲಿ ರಾಣಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವೆ ಯಾವುದೇ ರೀತಿಯ ಪ್ರೇಮ ಸಲ್ಲಾಪಗಳನ್ನು ತೋರಿಸಲಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಚಿತ್ರ ತಯಾರಿಸಲಾಗಿದೆ. ಕತೆಯನ್ನು ತಪ್ಪಾಗಿ ಬಿಂಬಿಸಿ ಯಾರೊಬ್ಬರ ಭಾವನೆಗೂ ಧಕ್ಕೆ ತರುವುದು ನಮ್ಮ ಉದ್ದೇಶವಲ್ಲ. ಕರ್ಣಿ ಸೇನಾ ಅಥವಾ ರಜಪೂತ್ ಸಭಾ ಅವರಿಗೆ ಸಿನಿಮಾ ತೋರಿಸಲು ಸಿದ್ದವಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಏನಂತಾರೆ?
''ಒಬ್ಬ ಮಹಿಳೆಯಾಗಿ, ಸಿನಿಮಾದ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಚಿತ್ರದ ಕಥೆಯಲ್ಲಿ ಯಾವುದನ್ನು ಹೇಳಬಹುದೋ ಅದನ್ನು ಹೇಳುತ್ತೇನೆ. ಇದು ಅವಶ್ಯಕ ಎಂದು ದೀಪಿಕಾ ಪಡುಕೋಣೆ ತಿಳಿಸಿದ್ದಾರೆ.

ಪದ್ಮಾವತಿ ಮತ್ತು ಖಿಲ್ಜಿ ಮಧ್ಯೆ ದೃಶ್ಯವಿಲ್ಲ.!
ಈ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರಧಾರಿ ರಣ್ವೀರ್ ಸಿಂಗ್ ''ನಾನು ಮತ್ತು ದೀಪಿಕಾ ಈ ಸಿನಿಮಾದಲ್ಲಿ ಅಭಿನಯಿಸಿದ್ದೀವಿ ಎಂಬುದು ಬಿಟ್ರೆ, ನನ್ನ ಮತ್ತು ಅವರ ನಡುವೆ ಮುಖಮುಖಿಯಾಗುವ ಯಾವುದು ದೃಶ್ಯಗಳೇ ಇಲ್ಲ''ವೆಂದು ಹೇಳಿಕೊಂಡಿದ್ದಾರೆ.

ಡಿಸೆಂಬರ್ 1 ರಂದು ಬಿಡುಗಡೆ.!
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಪದ್ಮಾವತಿ ಪತಿ ರಾಜಾ ರತನ್ ಸಿಂಗ್ ಪಾತ್ರದಲ್ಲಿ ಶಾಹೀದ್ ಕಪೂರ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಅಭಿನಯಿಸಿದ್ದಾರೆ. ಈ ಎಲ್ಲ ಅಡಚಣೆಯನ್ನ ಮೀರಿ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಾ ಎಂಬ ಅನುಮಾನ ಈಗ ಕಾಡುತ್ತಿದೆ. ಆದ್ರೆ, ಈ ವಿವಾದಗಳನ್ನ ಬಗೆಹರಿಸಿ ಸಿನಿಮಾ ರಿಲೀಸ್ ಆಗುತ್ತೆ ಎನ್ನುತ್ತಿದ್ದಾರೆ ಚಿತ್ರತಂಡ.


Click it and Unblock the Notifications











