ಮಗ ಅಲ್ಲು ಅರ್ಜುನ್ ಸಿನಿಮಾ ಬಿಡುಗಡೆ ನಿಲ್ಲಿಸಲು ಯಶಸ್ವಿಯಾದ ಅಪ್ಪ!
ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ತೆಲುಗು ಸಿನಿಮಾ 'ಅಲಾ ವೈಕುಂಟಪುರಂಲೋ' ಹಿಂದಿ ಅವತರಣಿಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದಂತೆ ತಡೆಯಲು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಯಶಸ್ವಿಯಾಗಿದ್ದಾರೆ.
ತೆಲುಗಿನಲ್ಲಿ ಸೂಪರ್ ಹಿಟ್ ಆದ 'ಆಲಾ ವೈಕುಂಟಪುರಂಲೋ' ಸಿನಿಮಾದ ನಿರ್ಮಾಣವನ್ನು ಅಲ್ಲು ಅರವಿಂದ್ ಅವರೇ ಮಾಡಿದ್ದರು. ಇದೀಗ ಅದೇ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದ್ದು, ಹಿಂದಿ ರೀಮೇಕ್ಗೆ ಅಲ್ಲು ಅರವಿಂದ್ ಸಹ ಬಂಡವಾಳ ಹೂಡಿದ್ದಾರೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಹಿಂದಿಯಲ್ಲಿ ದೊಡ್ಡ ಹಿಟ್ ಆದ ಕಾರಣ, 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಹೊಂದಿದ್ದಾತ 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ವರ್ಷನ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದ. ಆತನೊಂದಿಗೆ ಸತತ ಸಭೆಗಳನ್ನು ನಡೆಸಿದ ಅಲ್ಲು ಅರವಿಂದ್ ಮತ್ತು ತಂಡ ಸಿನಿಮಾ ಬಿಡುಗಡೆ ತಡೆಯಲು ಯಶಸ್ವಿಯಾಗಿದೆ.

ಮನಿಶ್ ಗಿರಿ ಶಾ ಎಂಬಾತ 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಡಬ್ ಬಿಡುಗಡೆ ಹಕ್ಕು ಹೊಂದಿದ್ದರು. ಸಿನಿಮಾವನ್ನು ಟಿವಿ ಹಾಗೂ ಯೂಟ್ಯೂಬ್ನಲ್ಲಿ ಮಾತ್ರವೇ ಬಿಡುಗಡೆ ಮಾಡುವ ಆಲೋಚನೆ ಅವರಿಗಿತ್ತು. ಆದರೆ 'ಪುಷ್ಪ' ಹಿಂದಿ ಆವೃತ್ತಿ ಹಿಟ್ ಆಗಿರುವ ಅಲ್ಲು ಅರ್ಜುನ್ನ ಜನಪ್ರಿಯತೆಯನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಜನವರಿ 26ರಂದು ಸಿನಿಮಾ ಬಿಡುಗಡೆ ಘೋಷಿಸಿದ್ದರು.
ಒಂದೊಮ್ಮೆ 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಆವೃತ್ತಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದರೆ ಅದೇ ಸಿನಿಮಾದ ಹಿಂದಿ ರೀಮೇಕ್ ಆದ 'ಶೆಹ್ಜಾದ'ಗೆ ಸಮಸ್ಯೆ ಆಗುತ್ತದೆಂದು ಅಲ್ಲು ಅರವಿಂದ್ ಹಾಗೂ ಇತರ ನಿರ್ಮಾಪಕರು ಆತಂಕಿತರಾಗಿದ್ದರು.
'ಅಲಾ ವೈಕುಂಟಪರಂಲೋ' ಸಿನಿಮಾದ ಹಿಂದಿ ಆವೃತ್ತಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ಮುಂಬೈಗೆ ದೌಡಾಯಿಸಿದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಮನಿಶ್ ಗಿರಿ ಶಾ ಜೊತೆಗೆ ಸತತ ಸಭೆಗಳನ್ನು ನಡೆಸಿ ಕೊನೆಗೂ ಸಿನಿಮಾ ಬಿಡುಗಡೆಯನ್ನು ತಡೆಯಲು ಯಶಸ್ವಿಯಾಗಿದ್ದಾರೆ. ಆದರೆ ಇದಕ್ಕಾಗಿ ದೊಡ್ಡ ಮೊತ್ತವನ್ನೇ ಅವರು ನೀಡಬೇಕಾಗಿ ಬಂದಿದೆ.
'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ರೀಮೇಕ್ ಆಗಿರುವ 'ಶೆಹ್ಜಾದ' ಸಿನಿಮಾದ ಟಿವಿ ಪ್ರಸಾರ ಹಕ್ಕುಗಳನ್ನು ಕಡಿಮೆ ಮೊತ್ತಕ್ಕೆ ನೀಡಿದ ಬಳಿಕವಷ್ಟೆ 'ಅಲಾ ವೈಕುಂಟಪುರಂಲೋ' ಸಿನಿಮಾ ಬಿಡುಗಡೆಯಿಂದ ಮನೀಶ್ ಹಿಂದೆ ಸರಿದರು ಎನ್ನಲಾಗುತ್ತಿದೆ.
'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ರೀಮೇಕ್ 'ಶೆಹ್ಜಾದ' ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿಯು, ಕೃತಿ ಸೆನನ್ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಟಬು ನಿರ್ವಹಿಸಿದ್ದ ತಾಯಿಯ ಪಾತ್ರವನ್ನು ಹಿಂದಿಯಲ್ಲಿ ಮನಿಶಾ ಕೊಯಿರಾಲಾ ನಿರ್ವಹಿಸಿದ್ದಾರೆ. ಪರೇಶ್ ರಾವೆಲ್, ಸಚಿನ್ ಖೇಡ್ಕರ್, ಅಲಿ ಅಸ್ಗರ್, ರೋನಿತ್ ರಾಯ್, ಅಂಕುರ್ ರಾತೆ, ಶಾಲಿನಿ ಕಪೂರ್ ಅವರುಗಳು ಸಿನಿಮಾದಲ್ಲಿದ್ದಾರೆ. ರೋಹಿತ್ ಧವನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಅಲ್ಲು ಅರವಿಂದ್ ಜೊತೆಗೆ ಟಿ ಸೀರೀಸ್ನ ಭೂಷಣ್ ಕುಮಾರ್, ಅಮಾನ್ ಗಿಲ್ ಸಹ ಬಂಡವಾಳ ಹೂಡಿದ್ದಾರೆ.


Click it and Unblock the Notifications











